Asianet Suvarna News Asianet Suvarna News

ಮೌಢ್ಯ ನಿಷೇಧ ಕಾಯ್ದೆ ಬೇಡ ಅಂದಿದ್ದೆ: ಡಿಕೆಶಿ

*  ಜನರ ಧಾರ್ಮಿಕ ನಂಬಿಕೆಗೆ ಕೈಹಾಕಬೇಡಿ ಎಂದು ಸಿಎಂ ಸಿದ್ದುಗೆ ಸಲಹೆ ನೀಡಿದ್ದೆ
*  ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡಿದೆ
*  ಸುಳ್ಳು ಕೋವಿಡ್‌ ಸಾವಿನ ಲೆಕ್ಕದ ವಿರುದ್ಧ ಕಾಂಗ್ರೆಸ್‌ ಹೋರಾಟ

KPCC Prerident DK Shivakumar Talks Over Superstition Bill in Karnataka grg
Author
Bengaluru, First Published Aug 23, 2021, 8:43 AM IST

ಬೆಂಗಳೂರು(ಆ.23):  ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯಿದೆ ಮೂಲಕ ಜನರ ಧಾರ್ಮಿಕ ನಂಬಿಕೆಗಳಿಗೆ ಕೈ ಹಾಕಬೇಡಿ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಲಹೆ ಮಾಡಿದ್ದೆ. ಅವರವರ ಧಾರ್ಮಿಕ ನಂಬಿಕೆಗಳ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರ ವತಿಯಿಂದ ಕೊರೋನಾ ಯೋಧರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಮುಂದಾಗಿದ್ದರು. ಈ ವೇಳೆ ಈ ವೇಳೆ ಜನರ ನಂಬಿಕೆಗೆ ಕೈ ಹಾಕುವುದು ಬೇಡ ಎಂದು ಸಲಹೆ ನೀಡಿದ್ದೆ. ನನ್ನ ಜತೆಗೆ ಹಲವರು ಸಚಿವರು ಸಹ ಇದೇ ಸಲಹೆಯನ್ನು ನೀಡಿದ್ದರು. ಒಂದೊಂದು ಧರ್ಮದಲ್ಲಿ ಒಂದೊಂದು ನಂಬಿಕೆ ಇರುತ್ತದೆ. ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಬಾರದು ಎಂದು ಹೇಳಿದ್ದೆವು ಎಂದು ಹೇಳಿದರು.

ಮಾಟಕ್ಕೆ ಹೆದರಿ ಇಬ್ಬರು ಮಕ್ಕಳ ಕೊಂದ ತಂದೆ, ರಕ್ತ ದೇವರಿಗೆ ಅರ್ಪಣೆ!

ಹಿಂದೂ ಧರ್ಮದಲ್ಲಿದ್ದಂತೆ ಎಲ್ಲಾ ಧರ್ಮದಲ್ಲೂ ಕೆಲವೊಂದು ನಂಬಿಕೆಗಳು ಇರುತ್ತವೆ. ನಿಮ್ಮ ಧರ್ಮದಲ್ಲೂ (ಮುಸ್ಲಿಂ) ಕೊಂಡ ಹಾಯುತ್ತಾರೆ. ಬೆಂಕಿ ಮೇಲೆ ನಡೆಯುತ್ತಾರೆ. ಮೊಹರಂ ದಿನ ರಕ್ತ ಬರುವ ರೀತಿಯಲ್ಲಿ ಹೊಡೆದುಕೊಳ್ಳುತ್ತಾರೆ. ಅದೆಲ್ಲಾ ನಿಮ್ಮ ನಂಬಿಕೆ. ನಿಮ್ಮನ್ನು ಬಹಳ ಹತ್ತಿರದಿಂದ ನೋಡಿಕೊಂಡು ಜೀವನ ಹಂಚಿಕೊಂಡಿದ್ದೇನೆ. ನಮಗೆ ಸಿಕ್ಕಿದ ಅವಕಾಶದಲ್ಲಿ ಎಲ್ಲಾ ಧರ್ಮಗಳನ್ನೂ ಗೌರವಿಸಬೇಕು ಎಂದರು.

ಕೊರೋನಾ ಆರಂಭದ ದಿನಗಳಲ್ಲಿ ಧಾರ್ಮಿಕ ಆಚರಣೆ ಇಟ್ಟುಕೊಂಡೇ ಕೋಮು ದ್ವೇಷ ಬಿತ್ತಲು ಕೆಲವು ದುಷ್ಟಶಕ್ತಿಗಳು ಪ್ರಯತ್ನಿಸಿದ್ದವು. ತಬ್ಲೀಘಿಗಳಿಂದ ಕೊರೋನಾ ವೈರಸ್‌ ಹರಡಿತು ಎಂದು ಅಪಪ್ರಚಾರ ಮಾಡಿದರು. ನಿಮ್ಮ ಸಮುದಾಯದಲ್ಲಿ ತಟ್ಟೆನೆಕ್ಕುವ ಪದ್ಧತಿ ಇದೆ. ಅದನ್ನು ಟ್ರೋಲ್‌ ಮಾಡಿ ಕೋಮು ದ್ವೇಷ ಬಿತ್ತುವ ಪ್ರಯತ್ನ ಮಾಡಿದರು. ಇವುಗಳಿಂದ ನಿಮ್ಮನ್ನು ಅಸ್ಪೃಶ್ಯರ ರೀತಿಯಲ್ಲಿ ನೋಡುವ ರೀತಿ ಆಯಿತು ಎಂದು ಕಿಡಿಕಾರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ರೈಲ್ವೆ ಎಡಿಜಿಪಿ ಭಾಸ್ಕರ್‌ ರಾವ್‌, ಡಾ.ಅಂಜಿನಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಡಿಕೆ ಶಿವಕುಮಾರ್ ಭೇಟಿಯಾದ ಜಮೀರ್ ಅಹಮದ್ : ಬೆನ್ನಲೆ ಟ್ವೀಟ್ ಮಾಡಿ ಗಂಭೀರ ಆರೋಪ

ಸುಳ್ಳು ಕೋವಿಡ್‌ ಸಾವಿನ ಲೆಕ್ಕದ ವಿರುದ್ಧ ಹೋರಾಟ

ರಾಜ್ಯದಲ್ಲಿ 3.70 ಲಕ್ಷ ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಆಕ್ಸಿಜನ್‌ ಇಲ್ಲದೆ ಚಾಮರಾಜನಗರ ಒಂದರಲ್ಲೇ 36 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ವಿಡಿಯೋಗಳನ್ನು ಮಾಡಿದ್ದೇವೆ. 36 ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹಾಕಿಸುತ್ತೇವೆ. ಹೀಗಿದ್ದರು ರಾಜ್ಯದ ಸಚಿವರು 3 ಮಂದಿ ಮಾತ್ರ ಆಮ್ಲಜನಕ ಇಲ್ಲದೆ ಮೃತಪಟ್ಟಿದ್ದಾರೆ ಎನ್ನುತ್ತಾರೆ. ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಆಮ್ಲಜನಕ ಇಲ್ಲದೆ ಒಬ್ಬರೂ ಮೃತಪಟ್ಟಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ 3.70 ಲಕ್ಷ ಜನ ಕೊರೋನಾದಿಂದ ಮೃತಪಟ್ಟಿದ್ದರೂ ಕೇವಲ 30 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡಿದೆ. ಹೀಗಾಗಿ ಪ್ರತಿ ಗ್ರಾಮದಲ್ಲೂ ಡೆತ್‌ ಆಡಿಟ್‌ ನಡೆಸುತ್ತೇವೆ. ಸೂಕ್ತ ದಾಖಲೆಗಳೊಂದಿಗೆ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ ಎಂದರು.
 

Follow Us:
Download App:
  • android
  • ios