ರಾಜ್ಯದಲ್ಲಿ ಮೇ 16ಕ್ಕೆ ಮತ್ತೊಂದು ಚುನಾವಣೆ : ಫಲಿತಾಂಶ ಯಾವಾಗ?
ರಾಜ್ಯದಲ್ಲಿ ಶೀಘ್ರವೇ ಮತ್ತೊಂದು ಚುನಾವಣೆ ನಡೆಯುತ್ತಿದೆ. ಚುನಾವಣೆ ಸಿದ್ಧತೆ ನಡೆಸಲಾಗಿದೆ. ಮೇ 16 ರಂದು ಚುನಾವಣೆ ನಡೆಯಲಿದ್ದು ಫಲಿತಾಂಶ 18 ರಂದು ಪ್ರಕಟವಾಗಲಿದೆ.
ಬೆಂಗಳೂರು (ಏ.10): ರಾಜ್ಯ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ಘೋಷಿಸಲಾಗಿದ್ದು, ವೇಳಾಪಟ್ಟಿಕೂಡ ಪ್ರಕಟಿಸಲಾಗಿದೆ. ಮೇ 16ರಂದು ಚುನಾವಣೆ ನಡೆಯಲಿದ್ದು, 18ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ರಾಜ್ಯದ 11 ಜಿಲ್ಲೆಗಳ 35 ಸ್ಥಾನಗಳಿಗೆ ಕಾರ್ಯಕಾರಿ ಸಮಿತಿ ಸದಸ್ಯರನ್ನು ಐದು ವರ್ಷಗಳ ಅವದಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಏ.21ರಿಂದ 28ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಏ.29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏ.30ರಂದು ಕೊನೆಯ ದಿನವಾಗಿದ್ದು, ಅದೇ ದಿನ ಮಧ್ಯಾಹ್ನ 3 ಗಂಟೆಯ ನಂತರ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಚುನಾವಣೆ: ಕೇಂದ್ರ ಸಚಿವ ಸೇರಿ 373 ಜನ ಕಣದಲ್ಲಿ! ..
ಮೇ 3ರಂದು ಅಂತಿಮ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಮೇ 16ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೂ ಆಯಾ ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿಗಳು ನಿಗದಿಪಡಿಸಿದ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೇ 18ರಂದು ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9ರಿಂದ ಮತ ಎಣಿಕೆ ಕಾರ್ಯಗಳು ನಡೆಯಲಿದೆ. ಬಳಿಕ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
11 ಚುನಾವಣಾ ಕ್ಷೇತ್ರಗಳು: 1. ಬೆಂಗಳೂರು ನಗರ, ಹೊಸೂರು (ತಮಿಳುನಾಡು), ಬೆಂ. ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ. 2. ಮೈಸೂರು, ಊಟಿ (ತಮಿಳುನಾಡು) ಮತ್ತು ಚಾಮರಾಜನಗರ, 3. ಮಂಡ್ಯ, 4. ಹಾಸನ, 5. ತುಮಕೂರು, 6. ಚಿತ್ರದುರ್ಗ (ದಾವಣಗೆರೆ, ಗದಗ, ಹುಬ್ಬಳ್ಳಿ), 7. ಕೋಲಾರ ಮತ್ತು ಚಿಕ್ಕಬಳ್ಳಾಪುರ (ಆಂಧ್ರ ಪ್ರದೇಶ ಸೇರಿ), 8. ದಕ್ಷಿಣ ಕನ್ನಡ ಮತ್ತು ಉಡುಪಿ (ಕಾಸರಗೋಡು ಸೇರಿ), 9. ಕೊಡಗು, 10. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ, 11. ಚಿಕ್ಕಮಗಳೂರು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.