ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ದೇಶದ 21 ಗಣ್ಯರಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ವಿಶೇಷ ಸಾಧಕರಿಗೆ ಪ್ರಶಸ್ತಿ ಲಭಿಸಿರುವುದು ವಿಶೇಷ..

ಬೆಂಗಳೂರು, (ಜ.25): 71ನೇ ಗಣರಾಜ್ಯೋತ್ಸವ ಹಿನ್ನೆಲೆ, ಭಾರತದ ನಾಗರೀಕ ಪ್ರಶಸ್ತಿಗಳ ಘೋಷಣೆಯಾಗಿದೆ. 21 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಇದರಲ್ಲಿ ಪ್ರಮುಖವಾಗಿ ಕರ್ನಾಟಕದ ಇಬ್ಬರಿಗೆ ಪದ್ಮಶ್ರೀ ಗೌರವ ಸಂದಿದೆ. 

Add Asianetnews Kannada as a Preferred SourcegooglePreferred

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಷರ ಸಂತ ಎಂದೇ ಪ್ರಸಿದ್ಧರಾಗಿರುವ ಹರೇಕಳ ಹಾಜಬ್ಬರನ್ನ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವರ್ಷದ ವ್ಯಕ್ತಿ ಎಂದು ಗುರುತಿಸಿದ್ದು, ಇದೀಗ, ಈ ನಿಸ್ವಾರ್ಥ ಜೀವಿಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದ್ದು, ಶಿಕ್ಷಣ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ನೀಡಲಾಗಿದೆ. 

2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!

ಇನ್ನು ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ಉತ್ತರ ಕನ್ನಡದ ಹಾಲಕ್ಕಿ ಸಮುದಾಯದ ತುಳಸೀಗೌಡಗೆ ಪದ್ಮಶ್ರೀ ಗೌರವ ದೊರೆತಿದೆ. ಅಂಕೋಲಾದ ಹೊನ್ನಳ್ಳಿ ನಿವಾಸಿಯಾಗಿರುವ ತುಳಸಿಗೌಡ ಅವಿದ್ಯಾವಂತೆಯಾಗಿದ್ದರೂ ಕಳೆದ 60 ವರ್ಷಗಳಿಂದ ಗಿಡ ಬೆಳೆಸಿ, ನೀರುಣಿಸಿ ಪೋಷಿಸುತ್ತಿದ್ದಾರೆ.

ಕನ್ನಡಪ್ರಭ-ಸುವರ್ಣ ನ್ಯೂಸ್ ಗುರುತಿಸಿದ್ದ ವ್ಯಕ್ತಿಗೆ ಪ್ರಶಸ್ತಿ

ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರುವ ಹರೇಕಳ ಹಾಜಬ್ಬ ತನಗಾಗಿ ಒಂದು ಸ್ವಂತ ಮನೆಯನ್ನೂ ಹೊಂದಿಲ್ಲದಿದ್ದರೂ, ತನ್ನ ಊರಾದ ಮಂಗಳೂರು ಸಮೀಪದ ಹರೇಕಳದಲ್ಲಿ ಶಾಲೆ ನಿರ್ಮಾಣಕ್ಕಾಗಿ ಹೋರಾಡಿದವರು. 

ಕಿತ್ತಳೆ ಮಾರಿ ಬಂದ ಹಣದಲ್ಲೇ ಶಾಲೆ ಕಟ್ಟಿಸಿ ಅದೆಷ್ಟೋ ಮಕ್ಕಳ ಬಾಳಿಗೆ ಬೆಳಕಾದ ಈ ಸಾಧಕರಿಗೆ ಈಗ ರಾಷ್ಟ್ರ ಮಟ್ಟದಲ್ಲಿ ಪುರಸ್ಕಾರ ಲಭಿಸಿದೆ. ಇವರನ್ನ, ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವರ್ಷದ ವ್ಯಕ್ತಿ ಎಂದು ಈ ಹಿಂದೆಯೇ ಗುರಿತಿಸಿ, ಗೌರವ ಸಲ್ಲಿಸಿತ್ತು. 

ಭಾರತೀಯ ನಾಗರೀಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ಇದಾಗಿದೆ.