ರಾಜ್ಯದಲ್ಲಿ ಶಕ್ತಿ ಯೋಜನೆಗೆ ಮತ್ತಷ್ಟು ಬಲ ತುಂಬಲು 5,500 ಹೊಸ ಬಸ್‌ ಖರೀದಿ ಹಾಗೂ 8000 ಹೊಸ ಹುದ್ದೆ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಸಮ್ಮತಿ ಸೂಚಿಸಿದ್ದಾರೆ.

ಬೆಂಗಳೂರು (ಅ.21): ರಾಜ್ಯದಲ್ಲಿ ಈಗಾಗಲೇ ಸರ್ಕಾರದಿಂದ ಜಾರಿಗೊಳಿಸಲಾದ ಮೊದಲ ಕಾಂಗ್ರೆಸ್‌ ಗ್ಯಾರಂಟಿ ಶಕ್ತಿ ಯೋಜನೆ ಅಡಿಯಲ್ಲಿ ಈವರೆಗೆ 80 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆಗೆ ಭರಪೂರ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಂಯ್ಯ ಅವರು 5000 ಹೊಸ ಬಸ್‌ಗಳನ್ನು ಖರೀದಿ ಮಾಡಲು ಹಾಗೂ 8000 ಹೊಸ ಹುದ್ದೆ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾತನಾಡಿದ ಅವರು, ನಾನೇ ಸಿಎಂ ಬಳಿ ಸಾರಿಗೆ ಇಲಾಖೆ ಬಗ್ಗೆ ಸಭೆ ಮಾಡಲು ಕೋರಿದ್ದರಿಂದ ಇಂದು ಸಭೆ ಮಾಡಿದ್ದಾರೆ. ಈ ವೇಳೆ ಶಕ್ತಿ ಯೋಜನೆ ಅಡಿಯಲ್ಲಿ 80ಕೋಟಿ ಮಹಿಳೆಯರು ಸಂಚಾರ ಮಾಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ, ನಾಲ್ಕು ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ ಎಂಬ ವಿಚಾರವನ್ನೂ ಪ್ರಸ್ತಾಪ ಮಾಡಲಾಯಿತು. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5,500 ಬಸ್‌ಗಳನ್ನು ಶೀಘ್ರವೇ ಖರೀದಿ ಮಾಡುವಂತೆ ಸೂಚಿಸಿದ್ದಾರೆ‌. ಹೊಸದಾಗಿ ಖರೀದಿ ಮಾಡುವ ಐದೂವರೆ ಸಾವಿರ ಬಸ್‌ಗಳಲ್ಲಿ ಡೀಸಲ್, ನಾನ್ ಡೀಸಲ್, ಬ್ಯಾಟರಿ ಹಾಗೂ ಸ್ಲೀಪರ್ ಬಸ್‌ಗಳು ಇರಲಿವೆ. ಇದಕ್ಕಾಗಿ 2,000 ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಕರ್ನಾಟಕ ಪಬ್ಲಿಕ್‌ ಶಾಲಾ ಮಕ್ಕಳಿಗೆ ಸ್ಕೂಲ್‌ ಬಸ್‌ ಭಾಗ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ

8000 ಹುದ್ದೆಗಳ ನೇಮಕಾತಿ: ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಪ್ರತ್ಯೇಕ ಡಿವಿಜನ್‌ ಮಾಡಲಾಗಿದೆ. ಆದರಂತೆ, ಮೈಸೂರು ನಗರದಲ್ಲಿ ಕೆಎಸ್‌ಆರ್‌ಟಿಸಿ ಅಡಿಯಲ್ಲಿ ಎರಡು ಡಿವಿಷನ್ ಮಾಡಲು ಸೂಚಿಸಿದ್ದೇವೆ. 8,000 ಜನರನ್ನ ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಬಸ್ ಕೂಡ ಬರಲಿದೆ, ಹೊಸ ಅಪಾಯಿಂಟ್ ಕೂಡ ನಡೆಯಲಿದೆ. ವೆಹಿಕಲ್‌ಗೆ ಟ್ಯಾಕ್ಸ್ ಎಗ್ಸೆಂಪ್ಷನ್ ಕೊಡಲು ಮುಖ್ಯಮಂತ್ರಿ ಬಳಿ ಕೋರಿದ್ದೇವೆ‌. 5-15 ಲಕ್ಷದ ವಾಹನಗಳಿಗೆ ಲೈಫ್ ಟ್ಯಾಕ್ಸ್ ಹಾಕಲಾಗ್ತಿತ್ತು. ಈ ಬಗ್ಗೆ ವಿನಾಯಿತಿ ಕೊಡುವಂತೆ ಖಾಸಗಿ ವಾಹನಗಳ ಮಾಲೀಕರ ಸಂಘಗಳ ಮನವಿಯಂತೆ ಸಿಎಂ ಬಳಿ ಮನವಿ ಸಲ್ಲಿಸಲಾಗಿದೆ ಎಂದರು.

ರೈತರಿಗೆ ಮಹತ್ವದ ಆದೇಶ: ಗ್ರಾಮ ನಕಾಶೆ ಡೌನ್ಲೋಡ್ ಮಾಡಿ ಜಮೀನಿನ ಬಂಡಿದಾರಿ, ಕಾಲುದಾರಿಗಳ ಒತ್ತುವರಿ ತೆರವುಗೊಳಿಸಿ

ಕೃತಕ ಅಭಾವ ಸೃಷ್ಟಿ ಎನ್ನುವುದು ಸತ್ಯಕ್ಕೆ ದೂರವಾದ ಮಾತು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದ ಬಗೆಗಿನ ಆರೋಪದ ಕುರಿತು ಮಾತನಾಡಿ, ಶಕ್ತಿ ಯೋಜನೆ ನೂರಕ್ಕೆ ನೂರು ಸಕ್ಸಸ್ ಆಗಿದೆ. 80 ಕೊಟಿ ಜನ ಓಡಾಡಿದ್ದಾರೆ. ರೇಷನ್, ಬದಲಿಗೆ ಹಣ ಹೋಗ್ತಿದೆ. ಗೃಹಲಕ್ಷ್ಮಿ ಹಣ 2,000 ಮನೆಗೆ ಹೋಗ್ತಿದೆ. ಗೃಹಜ್ಯೋತಿ ಯೋಜನೆಯಡಿ ವಿದ್ಯುತ್‌ ನೀಡಲಾಗುತ್ತಿದೆ. ಆದರೆ, ಕರೆಂಟ್ ಎಲ್ಲಾ ಕಡೆ ಇಲ್ಲ, ಎನ್ನುವುದು ಎಲ್ಲರಿಗೂ ಗೊತ್ತು. ಜಲಾಶಯಗಳಲ್ಲಿ ನಿರೀಲ್ಲ. ನೀರಿಲ್ಲದಿದ್ದಾಗ ಸಹಜವಾಗಿ ಉತ್ಪಾದನೆ ಕಡಿಮೆಯಾಗಲಿದೆ. ಹಾಗಾಗಿ ಸ್ವಲ್ಪ ಲೋಡ್ ಶೆಡ್ಡಿಂಗ್ ಆಗ್ತಿದೆ. ಮಳೆ ಚೆನ್ನಾಗಿ ಬಂದರೆ, ಅಥವಾ ಬೇರೆ ರಾಜ್ಯಗಳಿಂದ ಕೊಟ್ರೆ ನಮಗೆ ಸಮಸ್ಯೆ ಆಗಲ್ಲ. ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಹೇಳುವ ಹಾಗೆ, ಕೃತಕ ಅಭಾವ ಎನ್ನುವುದು ಇಲ್ಲ. ಜಲಾಶಯಗಳಲ್ಲಿ ನೀರಿಲ್ಲ ಎನ್ನೋದು ಎಲ್ಲರಿಗೂ ಗೊತ್ತು. ಯಾವ್ಯಾವ ಡ್ಯಾಮಲ್ಲಿ ಎಷ್ಟು ನೀರಿದೆ ಅಂತ ಎಲ್ಲರಿಗೂ ಗೊತ್ತಲ್ವಾ.? ಎಂದು ಟಾಂಗ್‌ ನೀಡಿದರು.