* ಮೂರೂ ಸಮಿತಿಗಳ ಪರಿಷ್ಕೃತ ಪಠ್ಯ ವೆಬ್ಸೈಟ್ನಲ್ಲಿ ಪ್ರಕಟ* ಪಠ್ಯ ಪರಿಷ್ಕರಣೆ ವಿವಾದ ತೆರೆಗೆ ಸರ್ಕಾರ ಹೊಸ ಪ್ಲ್ಯಾನ್* ಸಾರ್ವಜನಿಕ ಆಕ್ಷೇಪಣೆಗೆ ಮುಕ್ತ
ಬೆಂಗಳೂರು(ಜೂ.07): ಪಠ್ಯ ಪರಿಷ್ಕರಣೆ ಸಂಬಂಧ ಉದ್ಭವಿಸಿರುವ ಎಲ್ಲ ವಿವಾದಗಳಿಗೂ ಶಾಶ್ವತ ತೆರೆ ಎಳೆಯಲು ಹೊಸ ಹೆಜ್ಜೆ ಇಟ್ಟಿರುವ ಶಿಕ್ಷಣ ಇಲಾಖೆಯು ಈಗಿನ ರೋಹಿತ್ ಚಕ್ರತೀರ್ಥ ಸಮಿತಿ, ಹಿಂದಿನ ಡಾ.ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಅದಕ್ಕೂ ಮೊದಲ ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿರುವ ಮೂರೂ ಪ್ರತ್ಯೇಕ ಪಠ್ಯಕ್ರಮವನ್ನು ಸಾರ್ವಜನಿಕರವಾಗಿ ವೆಬ್ಸೈಟ್ನಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲು ನಿರ್ಧರಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ‘ಕನ್ನಡಪ್ರಭ’ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ನೊಂದು ವಾರದಲ್ಲಿ ಈ ಮೂರು ಸಮಿತಿಗಳು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಇಲಾಖೆಯ ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್ಸೈಟ್ hಠಿಠಿps://kಠಿಚಿs.ka್ಟ.್ಞಜ್ಚಿ.ಜ್ಞಿ ನಲ್ಲಿ ಪ್ರಕಟಿಸಲಾಗುವುದು.
ಮೂರು ಸಮಿತಿಗಳ ಪಠ್ಯವನ್ನು ಯಾರು ಬೇಕಾದರೂ ಓದಿಕೊಂಡು ಅವುಗಳಲ್ಲಿ ಯಾವುದಾದರೂ ವಿಷಯ, ಅಂಶಗಳು ಸರಿಯಿಲ್ಲ, ತಪ್ಪಿದೆ ಅಥವಾ ಯಾವುದೇ ಬದಲಾವಣೆಗಳಾಗಬೇಕಿತ್ತು ಎನಿಸಿದರೆ ಆ ಸಂಬಂಧಿಸಿದ ತಮ್ಮ ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಯಾವುದೇ ಆಕ್ಷೇಪಾರ್ಹ ಅಂಶ ನಿಜ ಎಂಬುದು ಇಲಾಖೆಯ ಗಮನಕ್ಕೆ ಬಂದರೆ ಅದನ್ನು ಮುಕ್ತವಾಗಿ ಸ್ವೀಕರಿಸಿ ಪರಿಷ್ಕರಣೆಗೆ ಪರಿಗಣಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಮುಖ್ಯಮಂತ್ರಿ ಅವರು ಈಗ ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದರೂ ಮರು ಪರಿಷ್ಕರಲಿಸಲು ಸರ್ಕಾರಕ್ಕೆ ಮುಕ್ತ ಮನಸ್ಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರಗಳಲ್ಲಿನ ಕೆಲ ಲೋಪಗಳಾಗಿರುವುದನ್ನು ಒಪ್ಪಿಕೊಂಡು ಅವುಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮೂರೂ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಇನ್ನೂ ಯಾವುದೇ ಮಹನೀಯರು, ದಾರ್ಶನಿಕರು, ವ್ಯಕ್ತಿ, ವಸ್ತುವಿನ ವಿಚಾರಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು ಅದನ್ನು ಇಲಾಖೆಗೆ ಸಲ್ಲಿಸಬಹುದು. ತಪ್ಪಾಗಿರುವು ಸರ್ಕಾರಕ್ಕೆ ಮನವರಿಕೆಯಾದರೆ ಮುಕ್ತ ಮನಸ್ಸಿನಿಂದ ಪರಿಷ್ಕರಣೆಗೆ ಪರಿಗಣಿಸಲಿದೆ ಎಂದು ತಿಳಿಸಿದ್ದಾರೆ.
ಯಾವ್ಯಾವ ಸಮಿತಿ ಪಠ್ಯ ಪ್ರಕಟ
* ರೋಹಿತ್ ಚಕ್ರತೀರ್ಥ ಸಮಿತಿ
* ಡಾ.ಬರಗೂರು ರಾಮಚಂದ್ರಪ್ಪ ಸಮಿತಿ
* ಮುಡಂಬಡಿತ್ತಾಯ ಸಮಿತಿ
ಸಾರ್ವಜನಿಕರು ಏನು ಮಾಡಬಹುದು?
ಯಾವುದಾದರೂ ವಿಷಯ, ಅಂಶಗಳು ಸರಿಯಿಲ್ಲ, ತಪ್ಪಿದೆ ಅಥವಾ ಯಾವುದೇ ಬದಲಾವಣೆಗಳಾಗಬೇಕಿತ್ತು ಎನಿಸಿದರೆ ಆ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಬಹುದು. ಅದನ್ನು ಅಧಿಕಾರಿಗಳು ಪರಿಶೀಲಿಸಿ, ಆಕ್ಷೇಪಾರ್ಹ ಅಂಶ ನಿಜ ಎಂದು ಸಾಬೀತಾದರೆ ಅದನ್ನು ಮುಕ್ತವಾಗಿ ಸ್ವೀಕರಿಸಿ ಪರಿಷ್ಕರಣೆಗೆ ಪರಿಗಣಿಸಲಾಗುವುದು.
