ಆರೋಗ್ಯ ಸಚಿವ ಕೆ ಸುಧಾಕರ್ ಗುಡ್ ನ್ಯೂಸ್ ನೀಡಿದ್ದಾರೆ.  ಕೊರೋನಾ ಎರಡನೆ ಅಲೆಯಿಂದ  ಕರ್ನಾಟಕ ಬಚಾವ್ ಆಗಿದೆ ಎಂದು ಹೇಳಿದ್ದಾರೆ

 ಬೆಂಗಳೂರು (ಡಿ.20): ಕೊರೋನಾ ಕಾರ್ಯಪಡೆ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿತ್ತು. ಆದರೆ, ಪ್ರಸ್ತುತ ಪ್ರಕರಣಗಳನ್ನು ಗಮನಿಸಿದರೆ ಸದ್ಯದ ಮಟ್ಟಿಗೆ ರಾಜ್ಯ ಬಚಾವಾಗಿದೆ. ಮುಂದೆಯೂ ಎರಡನೇ ಅಲೆ ಬಾರದಂತೆ ತಡೆಯಲು ಎಲ್ಲಾ ಅಗತ್ಯ ಕ್ರಮ ಅನುಸರಿಸುತ್ತಿದ್ದೇವೆ. ಇದಕ್ಕಾಗಿ ಯಾವ್ಯಾವ ಜಿಲ್ಲೆಗಳಲ್ಲಿ ಎರಡನೇ ಅಲೆ ಸಾಧ್ಯತೆ ಹೆಚ್ಚಿದೆ ಎಂಬುದರ ಕುರಿತು ಸೆರೋ ಸಮೀಕ್ಷೆಗೆ ಮುಂದಾಗಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಕಾರ್ಯಪಡೆಯು ಡಿಸೆಂಬರ್‌ ಬಳಿಕ ಚಳಿ ಹೆಚ್ಚಿರುವುದರಿಂದ ಎರಡನೇ ಅಲೆ ಉಂಟಾಗಲಿದೆ ಎಂದು ವರದಿ ನೀಡಿತ್ತು. ಆದರೆ ನಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮ ಹಾಗೂ ಸಾರ್ವಜನಿಕರ ಸ್ಪಂದನೆಯಿಂದ ಕೊರೋನಾದ ವಿರುದ್ಧ ಉತ್ತಮ ಸಂಘರ್ಷ ಮಾಡಿ ಹತೋಟಿಯಲ್ಲಿಟ್ಟಿದ್ದೇವೆ. ರಾಜ್ಯದಲ್ಲಿ ಶೇ.95ರಷ್ಟುಗುಣಮುಖ ದರ ಇದ್ದು, ಪಾಸಿಟಿವಿಟಿ ದರ ಕಡಿಮೆ ಆಗಿದೆ. ಸಾವಿನ ದರ ಶೇ.1.3ಕ್ಕೆ ಇಳಿದಿದೆ. ಮುಂದೆಯೂ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಕರ್ನಾಟಕದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಕೊರೋನಾ, ಶನಿವಾರ ಸಾವಿನ ಸಂಖ್ಯೆಯಲ್ಲಿ ಏರಿಕೆ .

ಸೆರೋ ಸರ್ವೆಗೆ ಸಿದ್ಧತೆ: ಕೊರೋನಾ ಎರಡನೇ ಅಲೆ ಬಂದಿದ್ದರೆ ಈ ವೇಳೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಬೇಕಿತ್ತು. ಪ್ರಸ್ತುತ ಕೊರೋನಾ ಸೋಂಕು ನಿಯಂತ್ರಣದಲ್ಲಿದ್ದು, ಎರಡನೇ ಅಲೆ ಬರುವುದಾಗಿ ತಜ್ಞರು ಎಚ್ಚರಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೆರೋ ಸರ್ವೆ ಮಾಡಲು ತೀರ್ಮಾನಿಸಲಾಗಿದೆ. ಸೆರೋ ಸರ್ವೆ ವರದಿ ಆಧಾರದ ಮೇಲೆ ಯಾವ್ಯಾವ ಜಿಲ್ಲೆಗಳಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎಂಬುದು ತಿಳಿದು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಜನವರಿಯಲ್ಲೇ ಲಸಿಕೆ ಬರುವ ಸಾಧ್ಯತೆ: ಜನವರಿಯಲ್ಲಿ ಕೊರೋನಾ ಲಸಿಕೆ ಬರುವ ವಿಶ್ವಾಸವಿದೆ. ದೇಶದಲ್ಲೇ ಮೊದಲ ಹಂತದಲ್ಲೇ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಎರಡನೇ ಅಲೆಯನ್ನು ತಡೆಯುವುದರ ಜೊತೆಗೆ ಜನವರಿಯಲ್ಲಿ ಅಗತ್ಯವಿರುವವರಿಗೆ ವೇಗವಾಗಿ ಲಸಿಕೆ ವಿತರಣೆ ಮಾಡಬೇಕಿದೆ. ಈ ಮೂಲಕ ಕೊರೋನಾ ಸೋಂಕನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.