Asianet Suvarna News Asianet Suvarna News

Karnataka High Court: ನ್ಯಾಯಬೆಲೆ ಅಂಗಡಿ ಲೈಸನ್ಸ್‌ಗೆ ಷರತ್ತು: ಹೈಕೋರ್ಟ್‌ ಆದೇಶ

ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್‌) ಅಡಿ ನ್ಯಾಯಬೆಲೆ ಅಂಗಡಿ ನಡೆಸಲು ಪರವಾನಗಿ ಪಡೆಯುವವರಿಗೆ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆ ಸಂಬಂಧ ಷರತ್ತು ವಿಧಿಸಲು ರಾಜ್ಯ ಸರ್ಕಾರ ವಿಶೇಷ ಅ​ಧಿಕಾರ ಹೊಂದಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.
 

Karnataka HC upholds new criteria on transfer of fair price shop dealership gvd
Author
Bangalore, First Published Jan 16, 2022, 3:56 AM IST

ಬೆಂಗಳೂರು (ಜ. 16): ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್‌) ಅಡಿ ನ್ಯಾಯಬೆಲೆ ಅಂಗಡಿ ನಡೆಸಲು ಪರವಾನಗಿ (License) ಪಡೆಯುವವರಿಗೆ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆ ಸಂಬಂಧ ಷರತ್ತು ವಿಧಿಸಲು ರಾಜ್ಯ ಸರ್ಕಾರ ವಿಶೇಷ ಅ​ಧಿಕಾರ ಹೊಂದಿದೆ ಎಂದು ಹೈಕೋರ್ಟ್‌ (High Court) ಆದೇಶಿಸಿದೆ. ಈ ಸಂಬಂಧ 2016ರಲ್ಲಿ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ (P.S. Dinesh Kumar) ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದ (ಡೀಲರ್‌) 65 ವರ್ಷದೊಳಗೆ ಸಾವನ್ನಪ್ಪಿದರೆ, ಅನುಕಂಪದ ಆಧಾರದ ಮೇಲೆ ಅವರ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಮಗಳಿಗೆ ಪರವಾನಗಿ ನೀಡುವಾಗ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು ಹಾಗೂ 18ರಿಂದ 40 ವರ್ಷದ ಒಳಗಿನವರಾಗಿರಬೇಕು ಎಂದು ಷರತ್ತು ವಿ​ಧಿಸಿ ಸರ್ಕಾರ ಹೊರಡಿಸಿದ ಆದೇಶವನ್ನು ನ್ಯಾಯಪೀಠ ಇದೇ ವೇಳೆ ಪುರಸ್ಕರಿಸಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ, ನಳೀನ್‌ ಕಟೀಲ್‌ ವಿರುದ್ಧದ FIR ರದ್ದು!

ಪ್ರಕರಣದ ವಿವರ: ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ (ನಿಯಂತ್ರಣ) ವ್ಯವಸ್ಥೆ ನಿಬಂಧನೆಗೆ ತಿದ್ದುಪಡಿ ಮಾಡಿದ ಸರ್ಕಾರ, ಅನುಮತಿ ಪಡೆದಿರುವ ಡೀಲರ್‌ 65 ವರ್ಷ ಮೀರುವುದರೊಳಗೆ ಸಾವನ್ನಪ್ಪಿದರೆ ಅವರ 65 ವರ್ಷ ಮೀರಿರದ ಪತ್ನಿ, 18 ವರ್ಷ ತುಂಬಿದ ನಿರುದ್ಯೋಗಿ ಪುತ್ರ ಅಥವಾ 18ರಿಂದ 40 ವರ್ಷದೊಳಗಿನ ಅವಿವಾಹಿತ ಪುತ್ರಿ ಅಥವಾ 18 ವರ್ಷ ತುಂಬಿದ ವಿಧವೆ ಪುತ್ರಿಗೆ ಪರವಾನಗಿ ಪಡೆಯಬಹುದು. ಈ ಸಂದರ್ಭದಲ್ಲಿ ಪರವಾನಗಿ ಹಸ್ತಾಂತರ ಕೋರುವವರು, ಡೀಲರ್‌ ಸಾವನ್ನಪ್ಪಿದ ದಿನಕ್ಕೆ ಅನ್ವಯಿಸುವಂತೆ 10ನೇ ತರಗತಿ ಪಾಸಾಗಿರಬೇಕು ಅಥವಾ ತತ್ಸಂಬಂಧ ಅರ್ಹತೆ ಹೊಂದಿರಬೇಕು ಎಂಬ ನಿಯಮ ವಿಧಿಸಿತ್ತು. ಈ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಸರ್ಕಾರದ ತಿದ್ದುಪಡಿ ನಿಯಮವನ್ನು ಪುರಸ್ಕರಿಸಿರುವ ಹೈಕೋರ್ಟ್‌, 10ನೇ ತರಗತಿ ಪಾಸಾಗಿರಬೇಕು ಎಂಬುದು ಸಮರ್ಥನೀಯ ಷರತ್ತಾಗಿದೆ. ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ವ್ಯಕ್ತಿಗೆ ಸಾಮಾನ್ಯ ಅಂಕ ಗಣಿತ, ಬ್ಯಾಂಕಿಂಗ್‌ ಮತ್ತು ಸಾರ್ವಜನಿಕ ಕಚೇರಿಗಳ ಜೊತೆ ವ್ಯವಹರಿಸುವುದು ತಿಳಿದಿರಬೇಕಾಗುತ್ತದೆ. ವಯಸ್ಸಿಗೆ ಸಂಬಂಧಿಸಿದ ವಿಚಾರ ನೀತಿಯ ಭಾಗವಾಗಿದ್ದು, ಸರಿಯಾಗಿದೆ, ಹೀಗಾಗಿ, 10ನೇ ತರಗತಿ ಪಾಸಾಗಿರಬೇಕು ಎಂಬ ಷರತ್ತಿನಲ್ಲಿ ತಪ್ಪು ಹುಡುಕಲಾಗದು ಎಂದು ನ್ಯಾಯಾಲಯ ಹೇಳಿದೆ.

ಕೆನಡಾ ಪೌರತ್ವ ಮಗುವನ್ನ ಸುಪರ್ದಿಗೆ ಕೇಳಿದ್ದಕ್ಕೆ ದಂಡ: ಕೆನಡಾ ಪೌರತ್ವ (Citizenship of Canada) ಹೊಂದಿರುವ ಮಗುವಿನ ಸುಪರ್ದಿ ವಿಚಾರ ತೀರ್ಮಾನಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌ (High Court of Karnataka), ನ್ಯಾಯಾಲಯಕ್ಕೆ ಅನೇಕ ಅಂಶಗಳನ್ನು ಮರೆಮಾಚಿದ ಕಾರಣಕ್ಕಾಗಿ ಮಗಳ ಸುಪರ್ದಿಗೆ ಕೋರಿದ್ದ ಮಹಿಳೆಗೆ (Woman) 50 ಸಾವಿರ ದಂಡ (Fine) ವಿಧಿಸಿದೆ.

Rape Case: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ: ರಾಘವೇಶ್ವರಶ್ರೀಗೆ ಹೈಕೋರ್ಟ್‌ಲ್ಲೂ ಜಯ

ಮಗಳ ಸುಪರ್ದಿ ವಿಚಾರವಾಗಿ ಬೆಂಗಳೂರಿನ (Bengaluru) ಭೂಪಸಂದ್ರದಲ್ಲಿ ವಾಸವಿರುವ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಮಹಿಳೆಯು ದಂಡದ ಹಣವನ್ನು ನಾಲ್ಕು ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದರೆ ಮಹಿಳೆ ವಿರುದ್ಧ ಪ್ರಾಧಿಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು ಎಂದು ತಿಳಿಸಿದೆ.

Follow Us:
Download App:
  • android
  • ios