ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವವರು ಇಲ್ಲೊಮ್ಮೆ ಗಮನಿಸಿ.  ಸ್ವಯಂಪ್ರೇರಣೆಯಿಂದ ಇಲಾಖೆಗೆ ಹಿಂದಿರುಗಿಸಲು ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿದ್ಧತೆ ನಡೆಸಿದೆ. ಹಾಗಾದ್ರೆ ಯಾರು ಹಿಂದಿರುಗಿಸಬೇಕು..? 

ಬೆಂಗಳೂರು (ಫೆ.14):  ಆರ್ಥಿಕವಾಗಿ ಸ್ಥಿತಿವಂತರಾದವರು ಅನಧಿಕೃತವಾಗಿ ಪಡೆದುಕೊಂಡಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಇಲಾಖೆಗೆ ಹಿಂದಿರುಗಿಸಲು ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿದ್ಧತೆ ನಡೆಸಿದೆ.

Add Asianetnews Kannada as a Preferred SourcegooglePreferred

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿಪಿಎಲ್‌ ಪಡಿತರ ಚೀಟಿಯನ್ನು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸುಳ್ಳು ಮಾಹಿತಿ ನೀಡಿ ಕಾರ್ಡ್‌ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದು, ಈಗಾಗಲೇ ಹಲವು ಬಾರಿ ಪಡಿತರ ಕಾರ್ಡ್‌ಗಳನ್ನು ಹಿಂದಿರುಗಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೂ ಶೇ.55ರಿಂದ 60ರಷ್ಟುಮಂದಿ ಮಾತ್ರ ಕಾರ್ಡ್‌ ವಾಪಸ್‌ ನೀಡಿದ್ದು ಉಳಿದವರಿಗೆ ಮತ್ತೊಂದು ಕಡೆಯ ಅವಕಾಶ ನೀಡಲು ಇಲಾಖೆ ತೀರ್ಮಾನಿಸಿದೆ.

BPL, AAY ಕಾರ್ಡು ಬಳಕೆದಾರರೇ ಎಚ್ಚರ ...

ಕಳೆದ ವಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡು ಪಡೆದವರು 15 ದಿನಗಳೊಳಗೆ ಅದನ್ನು ಹಿಂದಿರುಗಿಸುವಂತೆ ಸೂಚಿಸಬೇಕು. 

ನಿಗದಿತ ಸಮಯದಲ್ಲಿ ಕಾರ್ಡುಗಳನ್ನು ವಾಪಸ್‌ ಕೊಡದಿರುವವರನ್ನು ಆಧಾರ್‌ ದೃಢೀಕರಣದ ಮೂಲಕ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.