ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ ಎಸ್‌ಐಟಿ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ತಂಡದೊಂದಿಗೆ ಇತರೆ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳು ಸೇರಿ 30 ಸಿಬ್ಬಂದಿಗಳಿಗೆ 35 ಲಕ್ಷ ರೂ. ಬಹುಮಾನ ನೀಡಲಾಗಿದೆ.

ಬೆಂಗಳೂರು (ಜ.23): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ (SIT) ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಭರ್ಜರಿ ನಗದು ಬಹುಮಾನ ಘೋಷಿಸಿದೆ. ಕೇವಲ ಎಸ್‌ಐಟಿ ಮಾತ್ರವಲ್ಲದೆ, ವಿವಿಧ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ರಾಜ್ಯದ ಒಟ್ಟು 30 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಟ್ಟು 35 ಲಕ್ಷ ರೂಪಾಯಿ ಬಹುಮಾನ ಮಂಜೂರು ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಎಸ್‌ಐಟಿ ತಂಡಕ್ಕೆ ಸಿಂಹಪಾಲು

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಲಿಷ್ಠ ಸಾಕ್ಷ್ಯಾಧಾರಗಳನ್ನು ಕಲೆಹಾಕಿ, ಅಪರಾಧ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತನಿಖಾ ತಂಡಕ್ಕೆ ಅತಿ ಹೆಚ್ಚಿನ ಬಹುಮಾನ ನೀಡಲಾಗಿದೆ. ಎಸ್‌ಐಟಿ ತಂಡದ ಶ್ರಮವನ್ನು ಗುರುತಿಸಿ ಒಟ್ಟು 25 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿ ಆದೇಶ ಹೊರಡಿಸಲಾಗಿದೆ.

ಗೌರವಕ್ಕೆ ಪಾತ್ರರಾದ ಹಿರಿಯ ಅಧಿಕಾರಿಗಳು

ಈ ಬಹುಮಾನ ಪಡೆದ ಪಟ್ಟಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ ಪಿ ಸುಮನ್ ಡಿ. ಪೆನ್ನೇಕರ್ ಮತ್ತು ಎಸ್ ಪಿ ಸಿ.ಎ. ಸೈಮನ್ ಅವರಂತಹ ಹಿರಿಯ ಅಧಿಕಾರಿಗಳಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ಇನ್ಸ್ಪೆಕ್ಟರ್ ಶೋಭಾ ಜಿ, ಸುಮಾರಾಣಿ ಹಾಗೂ ಹೇಮಂತ್ ಕುಮಾರ್ ಸೇರಿದಂತೆ ಒಟ್ಟು 30 ಜನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ನಗದು ಬಹುಮಾನ ಸಂದಾಯವಾಗಲಿದೆ.

ಇಲಾಖೆಯ ನೈತಿಕ ಸ್ಥೈರ್ಯ ಹೆಚ್ಚಳ

ಕೇವಲ ಹೈ ಪ್ರೊಫೈಲ್ ಪ್ರಕರಣಗಳಲ್ಲದೆ, ಇತರೆ ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸಿದ ತಂಡಗಳಿಗೂ ಒಟ್ಟು 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಒಟ್ಟಾರೆಯಾಗಿ 35 ಲಕ್ಷ ರೂಪಾಯಿಗಳನ್ನು ಬಹುಮಾನ ರೂಪದಲ್ಲಿ ನೀಡುವ ಮೂಲಕ, ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕೆಲಸ ಮಾಡುವ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಸಂಕೀರ್ಣ ತನಿಖೆಗಳ ಮೂಲಕ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ ಪ್ರತಿಯೊಬ್ಬ ಸಿಬ್ಬಂದಿಗೂ ಈ ಗೌರವ ಸಲ್ಲುತ್ತಿದೆ.