ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಮತ್ತೊಂದು ಆಘಾತ
ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ಮೂಲಕ ಅನ್ನದಾತರು ಕಂಗಾಲಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ
ಚಿಕ್ಕಬಳ್ಳಾಪುರ (ಅ.11): ಕೊರೋನಾ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಒಂದರ ಮೇಲೆ ಒಂದು ಬರೆ ಎಳೆಯುತ್ತಿದೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ ಕಾಯ್ದೆಗಳ ತಿದ್ದುಪಡಿ ಹಾಗೂ ಕೇಂದ್ರ ಕೃಷಿ ನೀತಿ ವಿರುದ್ಧ ರೈತ ಸಂಘಟನೆಗಳ ಹಾಗೂ ರೈತರ ಕಣ್ಣು ಕೆಂಪಾಗಿರುವ ಬೆನ್ನಲೇ ಸರ್ಕಾರ ರೈತರಿಗೆ ಅಗತ್ಯವಾದ ಪಹಣಿ, ಮ್ಯುಟೇಶನ್ ಪ್ರತಿಗಳ ಮೇಲಿನ ಸೇವಾ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಾಲ, ಸೌಲಭ್ಯಗಳನ್ನು ಪಡೆಯಲು ದೊಡ್ಡ ರೈತರಿಂದ ಹಿಡಿದು ಸಣ್ಣ, ಅತಿ ಸಣ್ಣ ರೈತರು ಬಹುವಾಗಿ ಬಳಸುವ ತಮ್ಮ ಭೂಮಿಯ ಪಹಣಿ, ಮ್ಯುಟೇಷನ್ ಸೇವಾ ಶುಲ್ಕ ಹೆಚ್ಚಿಸಿ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಬಾರಿ ಬೆಂಬಲ ಬೆಲೆ ಖರೀದಿ ಕೇಂದ್ರ ಇಲ್ಲ, ಸಂಬಳ ಕೊಡೋದಕ್ಕೂ ಹಣವಿಲ್ಲ, ಸಿಎಂ ..
ಪ್ರಸ್ತಾವನೆ ಸಲ್ಲಿಸಿತ್ತು: ಈ ಕುರಿತು ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಇನ್ನು ಮುಂದೆ ತಮ್ಮ ಭೂಮಿಯ ಪಹಣಿ, ಮುಟೇಷನ್ ಪಡೆಯುವ ರೈತರಿಗೆ ಸೇವಾ ಶುಲ್ಕದ ಬರೆ ತಟ್ಟಲಿದ್ದು, ಕಳೆದ 2000ನೇ ಸಾಲಿನಿಂದ ಸೇವಾ ಶುಲ್ಕ ಹೆಚ್ಚಿಸಿರುವುದಿಲ್ಲ. ಆಗಾಗಿ ಸೇವಾ ಶುಲ್ಕ ಪರಿಷ್ಕರಣೆ ಮಾಡಲಾಗಿದೆಯೆಂದು ಸರ್ಕಾರ ಸೇವಾ ಶುಲ್ಕ ಹೆಚ್ಚಳಕ್ಕೆ ಸಮರ್ಥನೆ ಕೊಟ್ಟಿದೆ.
ಯಾವುದಕ್ಕೆ ಎಷ್ಟುಶುಲ್ಕ ಕಟ್ಟಬೇಕು: ಇನ್ನೂ ಮುಂದೆ ರೈತರು ಮ್ಯುಟೇಷನ್ ಸ್ಥಿತಿಯ ವಿವರಗಳನ್ನು ಪಡೆಯಲು ಪ್ರತಿ ಒಂದಕ್ಕೆ ಈ ಹಿಂದೆ ಇದ್ದ 15 ರು, ಸೇವಾ ಶುಲ್ಕ ಬದಲಾಗಿ 25 ರು ಶುಲ್ಕ ಪಾವತಿಸಬೇಕಿದ್ದು ಅದೇ ರೀತಿ ಮ್ಯುಟೇಶನ್ ಉದೃತ ಪ್ರತಿ ಒಂದಕ್ಕೆ 15 ರು, ಬದಲಾಗಿ 25 ರು, ಸೇವಾ ಶುಲ್ಕ ಪಾವತಿಸಬೇಕೆಂದು ಸರ್ಕಾರ ಸೇವಾ ಶುಲ್ಕದ ಪರಿಸ್ಕೃತ ಆದೇಶದಲ್ಲಿ ತಿಳಿಸಿದೆ. ಜೊತೆಗೆ ರಾಜ್ಯ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ 14ನೇ ವಿಧಾನಸಭೆಯ 5ನೇ ವರದಿಯಂತೆ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕ ಪರಿಷ್ಕರಣೆ ಹಾಗೂ ಸದ್ಬಳಕೆ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಲಾದಂತೆ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸಿ ಮೂರು ವರ್ಷಗಳು ಮೀರಿದ್ದಲ್ಲಿ ಅವುಗಳ ಪರಿಷ್ಕರಣೆಗೆ ಸಂಬಂದಪಟ್ಟಆಡಳಿತ ಇಲಾಖೆಗಳು ಪ್ರಸ್ತಾವನೆ ಸಲ್ಲಿಸುವಂತೆ ಕೋರಿತ್ತು.