ವದಂತಿ ನಿವಾರಣೆಗೆ ಬರ್ತಾರೆ ಕೊರೋನಾ ಯೋಧರು!|  ನೈಜ ಮಾಹಿತಿ ನೀಡಲು ವಾರ್ತಾ ಇಲಾಖೆ ಯತ್ನ| ಆಸಕ್ತ ಸ್ವಯಂ ಸೇವಕರಿಂದ ಅರ್ಜಿ ಆಹ್ವಾನ

ಬೆಂಗಳೂರು(ಮಾ.22): ಕೊರೋನಾ ವೈರಸ್‌ ಸೋಂಕು ಕುರಿತು ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ವಾರ್ತಾ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ‘ಕೊರೋನಾ ಯೋಧ’ ಸ್ವಯಂ ಸೇವಕರಿಗೆ ಅರ್ಜಿ ಆಹ್ವಾನಿಸಿದೆ.

Add Asianetnews Kannada as a Preferred SourcegooglePreferred

ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಕೊರೋನಾ ಯೋಧರು ಕೆಲಸ ಮಾಡಲಿದ್ದಾರೆ. ಈ ಸ್ವಯಂ ಸೇವಕರು ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹರಡುವ ವದಂತಿಗಳ ಬಗ್ಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೈಜ ಮಾಹಿತಿಯನ್ನು ಜನರಿಗೆ ತಲುಪಿಸಲು ಉಪಕಾರ ಮಾಡಬೇಕು.

ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ 4 ಸ್ವಯಂಸೇವಕರು ದಿನಕ್ಕೆ ನಾಲ್ಕು ಪಾಳಿಗಳಲ್ಲಿ ಕಾರ್ಯನಿರ್ವಹಿಸಬೇಕು. ಬೆಂಗಳೂರು ನಗರದಲ್ಲೇ ಸುಮಾರು 120 ಸ್ವಯಂ ಸೇವಕರಿಗೆ ಅವಕಾಶವಿದ್ದು, ರಾಜ್ಯಾದ್ಯಂತ ಸುಮಾರು 3,000 ಸ್ವಯಂ ಸೇವಕರು ಭಾಗವಹಿಸಬಹುದು.

ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಬಳಿಕ ಈ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಸೂಕ್ತ ತರಬೇತಿ, ಸುರಕ್ಷತಾ ಕಿಟ್‌ ಹಾಗೂ ಗುರುತಿನ ಚೀಟಿ ಒದಗಿಸಲಾಗುವುದು. ಆಸಕ್ತರು: https://covid19.karnataka.gov.in/coronawarrior.html ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.