ಫ್ಲೈಓವರ್‌ಗೆ ‘ಸಾವರ್ಕರ್‌’ ಹೆಸರೇ ಅಂತಿಮ!| ಯಲಹಂಕದ ಡೈರಿ ವೃತ್ತದಲ್ಲಿ ನಿರ್ಮಿಸಿರುವ ಮೇಲ್ಸೇತುವೆ| ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದ ಅನುಮೋದನೆ

ಬೆಂಗಳೂರು(ಜು.01): ತೀವ್ರ ವಿವಾದಕ್ಕೆ ಕಾರಣವಾಗಿದ್ದ ಯಲಹಂಕದ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ‘ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌’ ಹೆಸರು ನಾಮಕರಣಕ್ಕೆ ಇನ್ನೊಂದೆ ಹೆಜ್ಜೆ ಬಾಕಿ.

Add Asianetnews Kannada as a Preferred SourcegooglePreferred

ಹೆಸರಿಡುವ ಸಂಬಂಧ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಎರಡು ಆಕ್ಷೇಪಣೆಗಳನ್ನು ಪರಿಶೀಲಿಸಿರುವ ಬಿಬಿಎಂಪಿ ಆಯುಕ್ತರು ಅಂತಿಮವಾಗಿ ವೀರ ಸಾವರ್ಕರ್‌ ಹೆಸರು ನಾಮಕರಣ ಶಿಫಾರಸು ಮಾಡಿ ಕೌನ್ಸಿಲ್‌ ಸಭೆಗೆ ಟಿಪ್ಪಣೆ ಸಲ್ಲಿಸಿದ್ದಾರೆ. ಮಂಗಳವಾರದ ಕೌನ್ಸಿಲ್‌ ಸಭೆಯೂ ಆಯುಕ್ತರ ಶಿಫಾರಸಿನ ಟಿಪ್ಪಣಿ ಒಪ್ಪಿ ಸರ್ವಾನುಮತದಿಂದ ಅನುಮೋದಿಸಿದೆ. ನಾಮಕರಣಕ್ಕೆ ಸಂಬಂಧಿಸಿದಂತೆ ಕೌನ್ಸಿಲ್‌ ಸಭೆ ಒಪ್ಪಿರುವ ನಿರ್ಣಯದೊಂದಿಗೆ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸಿ ಅಂತಿಮ ಆದೇಶ ಹೊರಡಿಸಲಿದೆ. ಬಹುತೇಕ ಫ್ಲೈಓವರ್‌ಗೆ ವೀರ ಸಾವರ್ಕರ್‌ ಹೆಸರು ನಾಮಕರಣ ಮಾಡುವುದು ಖಚಿತವಾಗಿದೆ.

ಮೇಲ್ಸೇತುವೆಗಳಲ್ಲಿ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರು ಪ್ರತ್ಯಕ್ಷ!

ವಿಶೇಷವೆಂದರೆ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಈ ಕುರಿತು ನಿರ್ಣಯ ತೆಗೆದುಕೊಳ್ಳುವ ವೇಳೆ ಯಾವುದೇ ಒಬ್ಬ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಲಿಲ್ಲ.

ಎರಡು ಆಕ್ಷೇಪಣೆ:

ಸಲ್ಲಿಕೆಯಾಗಿದ್ದ ಎರಡು ಆಕ್ಷೇಪಣೆಗಳ ಪೈಕಿ ಒಂದರಲ್ಲಿ ಮಾತ್ರ ವೀರ ಸಾವರ್ಕರ್‌ ಹೆಸರು ಬೇಡ ಎಂದು, ಮತ್ತೊಂದರಲ್ಲಿ ವೀರ ಸಾವರ್ಕರ್‌ ಹೆಸರಿಗೆ ಬದಲು ಬೇರೆ ಹೆಸರು ನಾಮಕರಣ ಮಾಡುವಂತೆ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಈ ಆಕ್ಷೇಪಣೆಗೆ ಸರಿಯಾದ ಆಧಾರ ಇಲ್ಲದ ಹಿನ್ನೆಲೆಯಲ್ಲಿ ವೀರ ಸಾವರ್ಕರ್‌ ಹೆಸರನ್ನು ಶಿಫಾರಸು ಮಾಡಲಾಗಿದೆ.

ಫ್ಲೈಓವರ್‌ ಮೇಲೆ ರಾತ್ರೋ ರಾತ್ರಿ ಸಾವರ್ಕರ್‌ ಹೆಸರು..!

ವ್ಯಕ್ತವಾಗಿತ್ತು ತೀವ್ರ ವಿರೋಧ

ಕಳೆದ ಫೆಬ್ರುವರಿಯಲ್ಲಿ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಯಲಹಂಕದ ಮೇ. ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆಯ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ನಾಮಕರಣ ಪ್ರಸ್ತಾವನೆಗೆ ಕೌನ್ಸಿಲ್‌ ಸಭೆ ಅನುಮೋದನೆ ನೀಡಿತ್ತು. ಇದರ ಆಧಾರದ ಮೇಲೆ ಹೆಸರಿಡುವ ಕಾರ್ಯಕ್ರಮ ಆಯೋಜಿಲು ಉದ್ದೇಶಿಲಾಗಿತ್ತು.

ಆದರೆ ಇದಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಬಹುತೇಕ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಪರ ವಿರೋಧ ಸಾಕಷ್ಟುಚರ್ಚೆ ನಡೆದಿದ್ದವು. ವೀರ ಸಾವರ್ಕರ್‌ ಅಭಿಮಾನಿಗಳು ನೂತನ ಮೇಲ್ಸೇತುವೆಯ ಮೇಲೆ ವೀರ ಸಾವರ್ಕರ್‌ ಹೆಸರು ಬರೆದಿದ್ದರು. ಈ ಮಧ್ಯೆ ಹೆಸರಿಡುವ ಮುನ್ನ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರಿಂದ ಬಿಬಿಎಂಪಿ ಆಕ್ಷೇಪಣೆ ಆಹ್ವಾನಿಸಿತ್ತು.