ಬಸ್ ಆಯ್ತು ಈಗ ವಲಸೆ ಕಾರ್ಮಿಕರಿಗೆ ಉಚಿತ ರೈಲು ಸಂಚಾರ
ವಲಸೆ ಕಾರ್ಮಿಕರನ್ನು ಅವರವರ ಮನೆಗೆ ತಲುಪಿಸಲು ರಾಜ್ಯ ಸರ್ಕಾರ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಿತ್ತು. ಇದೀಗ ರೈಲು ಬಿಟ್ಟಿದೆ.
ಬೆಂಗಳೂರು, (ಮೇ.22): ಕೊರೋನಾ ವೈರಸ್ ಲಾಕ್ ಡೌನ್ ಸಿಲುಕಿ ತಮ್ಮ ಸ್ವಗ್ರಾಮಗಳಿಗೆ ತೆರಳಲಾಗದೇ ನಿರಾಶ್ರಿತರಾಗಿರುವ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
"
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಲು ಪ್ರಯಾಣದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂಬ ವಲಸೆ ಕಾರ್ಮಿಕರ ಮನವಿಯನ್ನು ಕರ್ನಾಟಕ ಸರ್ಕಾರವು ಪರಿಗಣಿಸಿದೆ. ನಮ್ಮ ದೇಶದ ದೂರದ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ನಾವು ನಮ್ಮದೇ ರಾಜ್ಯದ ಜನರು ಎಂದು ಭಾವಿಸುತ್ತೇವೆ ಮತ್ತು ಅವರ ಕಷ್ಟಕ್ಕೆ ಸರ್ಕಾರವು ಸ್ಪಂದಿಸ ಬೇಕೆಂಬುದು ನನ್ನ ದೃಢ ನಿರ್ಧಾರ. ಈ ಹಿನ್ನೆಲೆಯಲ್ಲಿ ದಿನಾಂಕ: 31-05-2020 ವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬಯಸುವ ವಲಸೆ ಕಾರ್ಮಿಕರು ಹಾಗೂ ಲಾಕ್ ಡೌನ್ ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
2 ನಗರಗಳಿಗೆ ರೈಲು ಸೇವೆ ಶುರು, ಪ್ರಯಾಣಿಕರು ಪಾಲಿಸಬೇಕು ಈ ಷರತ್ತು
ಇನ್ನು ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿದೆಯಾದರೂ ದುಬಾರಿ ಪ್ರಯಾಣ ದರದಿಂದಾಗಿ ಕಾರ್ಮಿಕರು ತಮ್ಮ ತವರಿಗೆ ಹೋಗಲಾಗದೇ ಪರಿತಪಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಲಸೆ ಕಾರ್ಮಿಕರು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ ಎಂದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ರಾಜ್ಯ ಸರ್ಕಾರ ಉಚಿತ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.