ಬಂಡವಾಳ ಹೂಡಿಕೆ ಸಮಾವೇಶಕ್ಕೆ 75 ಕೋಟಿ ಖರ್ಚು: ಸಚಿವ ನಿರಾಣಿ
2022ನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್) ಒಟ್ಟು 74.99 ಕೋಟಿ ರು. ವೆಚ್ಚವಾಗಿದ್ದು, ಒಟ್ಟಾರೆ 9.81 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿದೆ. ನಾವು ನಮ್ಮ ಮನೆಯ ಕನ್ಯೆಯನ್ನು ತೋರಿಸಿದ್ದೇವೆ.
ವಿಧಾನ ಪರಿಷತ್ (ಡಿ.21): 2022ನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್) ಒಟ್ಟು 74.99 ಕೋಟಿ ರು. ವೆಚ್ಚವಾಗಿದ್ದು, ಒಟ್ಟಾರೆ 9.81 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿದೆ. ನಾವು ನಮ್ಮ ಮನೆಯ ಕನ್ಯೆಯನ್ನು ತೋರಿಸಿದ್ದೇವೆ. ಒಪ್ಪುವುದು ಬಿಡುವುದು ಗಂಡಿನ ಕಡೆಯವರಿಗೆ ಬಿಟ್ಟಿದ್ದು ಎಂದು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಹೂಡಿಕೆ ಪ್ರಸ್ತಾವಗಳ ಪೈಕಿ ಈಗಾಗಲೇ 2.83 ಲಕ್ಷ ಕೋಟಿ ರು.ನಷ್ಟು ಹೂಡಿಕೆಯ ಯೋಜನೆಗಳಿಗೆ ಏಕಗವಾಕ್ಷಿ ಮೂಲಕ ಅನುಮೋದನೆ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರಾದ ಯು.ಬಿ.ವೆಂಕಟೇಶ್, ಡಾ.ಕೆ.ಗೋವಿಂದರಾಜ್ ಮತ್ತು ಎಂ.ನಾಗರಾಜು ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಈ ಬಾರಿಯ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ ಒಟ್ಟು 2,83,415 ಕೋಟಿ ರು. ಮೊತ್ತದ 608 ಯೋಜನೆಗಳಿಗೆ ಸರ್ಕಾರ ಏಕಗವಾಕ್ಷಿ ಮೂಲಕ ಅನುಮೋದನೆ ನೀಡಿರುವುದನ್ನು ಪ್ರಕಟಿಸಲಾಗಿದೆ. ಜತೆಗೆ ಇನ್ನು 5,41,369 ಕೋಟಿ ರು. ಬಂಡವಾಳ ಹೂಡಿಕೆಗೆ 57 ವಿವಿಧ ಕಂಪನಿಗಳು, ಉದ್ಯಮದಾರರೊಂದಿಗೆ ಒಡಂಬಡಿಕೆಗಳಾಗಿವೆ.
ಸಚಿವ ನಿರಾಣಿಗೆ ಮಾತಾಡಲು ಅವಕಾಶ ಕೋರಿ ಕಾಂಗ್ರೆಸ್, ಜೆಡಿಎಸ್ ಧರಣಿ!
ಈ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಏಕ ಗವಾಕ್ಷಿ ಸಮಿತಿ ಸಭೆಗಳಲ್ಲಿ ಮಂಡಿಸಿ ಅಗತ್ಯವಿರುವ ಭೂಮಿ, ನೀರು, ವಿದ್ಯುತ್, ಇತರೆ ಸೌಲಭ್ಯಗಳನ್ನು ಅನುಮೋದಿಸಿ ನಂತರ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಇಷ್ಟೆಅಲ್ಲದೆ ಸಮಾವೇಶದಲ್ಲಿ ಕೆಲ ಪ್ರಮುಖ ಕೈಗಾರಿಕೋದ್ಯಮಿಗಳು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ 1,57,000 ಕೋಟಿ ರು. ಬಂಡವಾಳ ಹೂಡಿಕೆ ಮಾಡುವ ಘೋಷಣೆ ಮಾಡಿದ್ದಾರೆ. ಇದರಿಂದ 2022ನೇ ಸಾಲಿನ ಜಿಮ್ನಿಂದ ಒಟ್ಟು 9,81,784 ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿದೆ. ಇದರಿಂದ 6 ಲಕ್ಷ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ನಮ್ಮ ಮನೆಯ ಕನ್ಯೆ ತೋರಿಸಿದ್ದೇವೆ: ಈ ಉತ್ತರಕ್ಕೆ ಸಮಾಧಾನಗೊಳ್ಳದ ಸದಸ್ಯರು ರಾಜ್ಯದಲ್ಲಿ ಈ ಹಿಂದಿನ ಜಿಮ್ಗಳಲ್ಲೂ ಕೂಡ ಲಕ್ಷಾಂತರ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ದೊರೆತಿದ್ದರೂ ಹೂಡಿಕೆ ಪ್ರಮಾಣ ಮಾತ್ರ ಯಾವುದೇ ಅವಧಿಯಲ್ಲೂ ಶೇ.20ರಷ್ಟೂ ದಾಟಿಲ್ಲ. 2010-11ರಲ್ಲಿ ಕೂಡ ಸಿಕ್ಕ ಬರವಸೆಯಲ್ಲಿ ಶೇ.14ರಷ್ಟುಬಂಡವಾಳ ಹೂಡಿಕೆ ಮಾತ್ರ ಸಾಧ್ಯವಾಗಿದೆ. ಹೀಗಿರುವಾಗ ಈ ಬಾರಿ 9.81 ಲಕ್ಷ ಕೋಟಿ ರು. ಬಂಡವಾಳದ ನಿರೀಕ್ಷೆ ಮಾಡಿದ್ದೀರಿ. ಇದರಲ್ಲಿ ಎಷ್ಟು ಪ್ರಮಾಣದ ಹೂಡಿಕೆಯಾಗಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ನಾಜೂಕಾಗಿಯೇ ಉತ್ತರಸಿದ ಸಚಿವರು, ‘ನಾವು ನಮ್ಮ ಮನೆಯ ಕನ್ಯೆಯನ್ನು ತೋರಿಸಿದ್ದೇವೆ.
ಕಬ್ಬಿನ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ದರ ನಿಗದಿ: ಸಚಿವ ಶಂಕರ ಪಾಟೀಲ್
ಒಪ್ಪುವುದು ಬಿಡುವುದು ಗಂಡಿನ ಕಡೆಯವರಿಗೆ ಬಿಟ್ಟಿದ್ದು. ಅಥಾತ್ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾಗಿ ನಮ್ಮ ರಾಜ್ಯದಲ್ಲಿರುವ ಕಚ್ಛಾವಸ್ತು, ಮಾನವ ಸಂಪನ್ಮೂಲಕ, ಸರ್ಕಾರದಿಂದ ಕಲ್ಪಿಸುವ ಭೂಮಿ, ಮೂಲ ಸೌಕರ್ಯ ಎಲ್ಲವನ್ನೂ ಅವರಿಗೆ ತೋರಿಸಿದ್ದೇವೆ. ಇದನ್ನು ಒಪ್ಪಿ ಹೂಡಿಕೆ ಮಾಡುವುದು ಬಿಡುವುದು ಅಂತಿಮವಾಗಿ ಅವರಿಗೆ ಬಿಟ್ಟಿದ್ದು. ಆದರೆ, ನಮ್ಮ ಸರ್ಕಾರ ಜಿಮ್ನಿಂದ ಬಂದಿರುವ ಎಲ್ಲ ಹೂಡಿಕೆ ಭರವಸೆಗಳನ್ನು ಸೆಳೆಯಲು ಕೈಗಾರಿಕಾ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ ಸುತ್ತಮುತ್ತ 20 ಸಾವಿರ ಎಕರೆ ಸೇರಿ ಒಟ್ಟಾರೆ ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ 50 ಸಾವಿರ ಎಕರೆ ಭೂಮಿಯನ್ನು ಹೂಡಿಕೆದಾರರಿಗೆ ಗುರುತಿಸಿ ರೈತರ ಸಹಮತದೊಂದಿಗೆ ಅದರ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ’ ಎಂದರು.