ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ! 293 ಇನ್ಸ್‌ಪೆಕ್ಟರ್‌ಗಳು ಹಾಗೂ 74 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಯಾವ ಅಧಿಕಾರಿಗಳು ಬಂದಿದ್ದಾರೆ ಸಂಪೂರ್ಣ ಪಟ್ಟಿ ಮತ್ತು ವಿವರಗಳಿಗಾಗಿ ಇಲ್ಲಿ ನೋಡಿ.

ಬೆಂಗಳೂರು (ಮೇ 10): ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಒಟ್ಟು 293 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಹಾಗೂ 74 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Add Asianetnews Kannada as a Preferred SourcegooglePreferred

ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಧಾರ

ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಕಚೇರಿಯ ಮೂಲಗಳು ತಿಳಿಸಿವೆ.

293 ಇನ್ಸ್‌ಪೆಕ್ಟರ್‌ಗಳ ಅದಲು-ಬದಲು

ವರ್ಗಾವಣೆಗೊಂಡ 293 ಇನ್ಸ್‌ಪೆಕ್ಟರ್‌ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (SIT) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಸೂರ್ಯನಗರ, ಮಡಿವಾಳ, ಚಂದ್ರಾ ಲೇಔಟ್‌ನಂತಹ ಪ್ರಮುಖ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ಬದಲಾಯಿಸಲಾಗಿದೆ.

74 ಡಿವೈಎಸ್‌ಪಿಗಳ ವರ್ಗಾವಣೆ

ಇನ್ಸ್‌ಪೆಕ್ಟರ್‌ಗಳ ಜೊತೆಗೆ 74 ಡಿವೈಎಸ್‌ಪಿ (DySP) ದರ್ಜೆಯ ಅಧಿಕಾರಿಗಳಿಗೂ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಪವಿಭಾಗಗಳ ಎಸಿಪಿ (ACP) ಮತ್ತು ಡಿವೈಎಸ್‌ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ (EEC) ಮತ್ತು ಜಿಲ್ಲಾ ಪೊಲೀಸ್ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.

ತಕ್ಷಣದಿಂದ ಜಾರಿಗೆ ಆದೇಶ

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ (Wait) ಅನೇಕ ಅಧಿಕಾರಿಗಳಿಗೆ ಈ ಆದೇಶದ ಮೂಲಕ ಸಕ್ರಿಯ ಹುದ್ದೆಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿ ಹಾಗೂ ರಾಜ್ಯದ ಹವಾಮಾನ ವೈಪರೀತ್ಯದಂತಹ ಸವಾಲುಗಳ ನಡುವೆಯೇ ಈ ವರ್ಗಾವಣೆ ನಡೆದಿರುವುದು ಕುತೂಹಲ ಮೂಡಿಸಿದೆ.