Asianet Suvarna News Asianet Suvarna News

ದೇವನೂರು ಪತ್ರಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮಾರುತ್ತರ!

ದೇವನೂರು ಪತ್ರಕ್ಕೆ ಸುರೇಶ್‌ ಮಾರುತ್ತರ| ದೊರೆಸ್ವಾಮಿ ಕೂಡ ಭಾಷೆಯ ಬಗ್ಗೆ ಗಮನ ಹರಿಸಬೇಕಿತ್ತು

Karnataka Education Minister Suresh Kumar Replies To Veteran Writer Devanuru Mahadeva Letter
Author
Bangalore, First Published Mar 4, 2020, 8:01 AM IST

ಬೆಂಗಳೂರು[ಮಾ.04]: ಆಡಬಾರದ್ದನ್ನು ಆಡಿದರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ ಎಂಬುದಾಗಿ ನಾನು ಹೇಳಿದ್ದು ಕೇವಲ ಒಬ್ಬ ವ್ಯಕ್ತಿಯ ಕುರಿತು ಅಲ್ಲ. ಬದಲಿಗೆ ಇಂದಿನ ವಾಸ್ತವ ಪರಿಸ್ಥಿತಿಯ ಕುರಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಸಮಜಾಯಿಷಿ ನೀಡಿದ್ದಾರೆ.

ಹಿರಿಯ ಸಾಹಿತಿ ದೇವನೂರು ಮಹದೇವ ಅವರ ಪತ್ರಕ್ಕೆ ಉತ್ತರ ನೀಡಿರುವ ಸಚಿವರು, ಹಿರಿಯ ಸ್ಥಾನದ ವ್ಯಕ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಉಪಯೋಗಿಸುವ ಪದಗಳು ಬಹುಮುಖ್ಯವಾಗುತ್ತವೆ. ಸೈದ್ಧಾಂತಿಕವಾಗಿ ತಾವು ವಿರೋಧಿಸುವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿರಿಯರಾದ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸುವ ಪರಿಭಾಷೆಯ ಕುರಿತು ಸ್ವಲ್ಪ ಅವರು ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.

ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತದೆ ಎಂದು ತಾನು ಹೇಳಿರುವುದು ಇಂದಿನ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸಂಬೋಧಿಸಿ ಹೇಳಿರುವ ಮಾತು ಎಂದು ತಮಗೆ ಅನಿಸುತ್ತಿಲ್ಲವೇ? ರಾಜಕೀಯ, ಸಾಮಾಜಿಕ, ಧಾರ್ಮಿಕ.. ಈ ಎಲ್ಲ ವಲಯಗಳಲ್ಲಿಯೂ ಹೆಚ್ಚಾಗಿ ಆಡಬಾರದ ಮಾತುಗಳು, ಅದಕ್ಕೆ ಪ್ರತಿಕ್ರಿಯೆಯಾಗಿ ಕೇಳಬಾರದ ಮಾತುಗಳೇ ಬರುತ್ತಿವೆ. ಮುಂಚೆಯಿಂದ ಈ ಸಮಾಜವು ವಾದ-ಪ್ರತಿವಾದಗಳಿಗೆ ವಿಫುಲ ಅವಕಾಶಗಳನ್ನು ನೀಡಿದೆ ಎಂದು ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

-ನಿಮ್ಮ ಪತ್ರವನ್ನು ನಾಲ್ಕೈದು ಬಾರಿ ವಿವರವಾಗಿ ಓದಿದೆ. ನೀವು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಪೈಕಿ ಕೆಲವದರ ಬಗ್ಗೆ ನನ್ನ ಸಹಮತವಿಲ್ಲದಿದ್ದರೂ ನಿಮ್ಮ ಭಾವನೆಯನ್ನು ನಾನು ಪೂರ್ಣ ಗೌರವಿಸುತ್ತೇನೆ. ಎಚ್‌.ಎಸ್‌.ದೊರೆಸ್ವಾಮಿ ಅವರನ್ನು ನಾನು ಅನೇಕ ದಶಕಗಳಿಂದ ನೋಡಿಕೊಂಡು ಬಂದಿದ್ದೇನೆ. ಬೆಳೆದಿದ್ದೇನೆ. ಅವರ ಹಿರಿತನ, ಸಾಮಾಜಿಕ ಕಾಳಜಿಯ ಕುರಿತು ನನಗೆ ಗೌರವವಿದೆ. ಅವರೂ ಸಹ ನನ್ನ ಬಗ್ಗೆ ಅನೇಕ ಬಾರಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅವರೊಡನೆ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳೂ ನನಗೆ ಸಿಕ್ಕಿವೆ.

-ನರೇಂದ್ರ ಮೋದಿ ಕುರಿತು, ಸಾವರ್ಕರ್‌ ಕುರಿತು ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇರುವುದು ಎಷ್ಟುಸಹಜವೋ ಹಾಗೆಯೇ ನನಗೂ ನನ್ನದೇ ಆದ ಅಭಿಪ್ರಾಯ ಇರುವುದೂ ಸಹಜ. ನಾನು ಗೌರವಿಸುವ ಸಾವರ್ಕರ್‌ ಕುರಿತು, ನನ್ನ ನಾಯಕರಾದ ಮೋದಿಯವರ ಕುರಿತು ಯಾರಾದರೂ ಏನಾದರೂ ನನಗೆ ಸರಿಯಲ್ಲದ್ದನ್ನು ಹೇಳಿದರೆ ಪ್ರತಿಕ್ರಿಯಿಸಬೇಕಾದ್ದು ನನ್ನ ಧರ್ಮ. ಹಾಗೆ ಪ್ರತಿಕ್ರಿಯಿಸುವಾಗ ನನ್ನ ಮಾತುಗಳ ಮೇಲೆ ನಿಯಂತ್ರಣವಿರಬೇಕು ಎಂದು ಸಮಾಜ ಹೇಗೆ ಬಯಸುತ್ತದೆಯೋ, ಅದೇ ರೀತಿಯ ನಿಯಂತ್ರಣ ಸಾವರ್ಕರ್‌ ಮತ್ತು ಮೋದಿ ಅವರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವಾಗಲೂ ಇರಬೇಕಲ್ಲವೇ?

-ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಮಾತುಗಳಿಗೆ ಲಂಗುಲಗಾಮೇ ಇರದ ಈ ಕಾಲದಲ್ಲಿ ಪ್ರಮುಖರು ಉಪಯೋಗಿಸುವ ಪದಗಳು ಇನ್ನಷ್ಟುಸ್ವೇಚ್ಛಾಚಾರಕ್ಕೆ ಇಂಬು ನೀಡಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಭಾಪ್ರಜ್ಞೆ, ಸಂದರ್ಭಪ್ರಜ್ಞೆ ಗಳಿಗೆ ಮಹತ್ವವಿರಬೇಕು. ಒಟ್ಟಿನಲ್ಲಿ, ಇಂದಿನ ಸಾರ್ವಜನಿಕ ಜೀವನದಲ್ಲಿ ಕೇಳಿಬರುತ್ತಿರುವ ಪದಪುಂಜಗಳು ಯಾರಿಗೂ ಸಮಾಧಾನ ತರುತ್ತಿಲ್ಲ ಮತ್ತು ಸಮಾಜಕ್ಕೆ ಒಳಿತನ್ನೂ ಮಾಡುತ್ತಿಲ್ಲ.

Follow Us:
Download App:
  • android
  • ios