Asianet Suvarna News Asianet Suvarna News

Fertiliser shortage| 32 ಸಾವಿರ ಟನ್‌ ಡಿಎಪಿ ಗೊಬ್ಬರಕ್ಕೆ ಕೇಂದ್ರಕ್ಕೆ ಮನವಿ

  • ಹಿಂಗಾರು ಹಂಗಾಮಿಗೆ 32,000 ಟನ್‌ ಡಿಎಪಿ ಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಶುಕ್ರವಾರ ರಾಜ್ಯ ಸರ್ಕಾರ ಮನವಿ 
  • ಮುಖ್ಯಮಂತ್ರಿ  ಬೊಮ್ಮಾಯಿ  ಕೇಂದ್ರದ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನಸುಖ್‌ ಮಾಂಡವಿಯ  ಭೇಟಿ ಮಾಡಿ ಮನವಿ
Karnataka Demands 32 tons fertilizer for centre snr
Author
Bengaluru, First Published Oct 9, 2021, 8:43 AM IST

ನವದೆಹಲಿ (ಅ.09):  ಹಿಂಗಾರು ಹಂಗಾಮಿಗೆ 32,000 ಟನ್‌ ಡಿಎಪಿ (DAP) ಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಶುಕ್ರವಾರ ರಾಜ್ಯ ಸರ್ಕಾರ (State Govt) ಮನವಿ ಮಾಡಿದೆ.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಅವರು ನವದೆಹಲಿಯಲ್ಲಿ ಕೇಂದ್ರದ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನಸುಖ್‌ ಮಾಂಡವಿಯ(Mansuk mandavia) ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. 

ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ: ರೈತರಿಗೆ ಸಚಿವರ ಅಭಯ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ , ಡಿಎಪಿ ಮಾತ್ರವಲ್ಲದೆ, ರಾಜ್ಯಕ್ಕೆ 10,000 ಟನ್‌ ಪೊಟ್ಯಾಷ್‌ (Potash)ಗೊಬ್ಬರದ ಬೇಡಿಕೆ ಇದೆ. ಅದರ ಪೂರೈಕೆಗೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ದೊರೆತಿದೆ. ಸದ್ಯ ರಾಜ್ಯದಲ್ಲಿ ಯುರಿಯಾ ಗೊಬ್ಬರದ ಕೊರತೆ ಇಲ್ಲ. ಕೊರತೆ ಇರುವ ಗೊಬ್ಬರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಲಸಿಕೆ ಅಭಿಯಾನಕ್ಕೆ ಮೆಚ್ಚುಗೆ: ರಾಜ್ಯದಲ್ಲಿ ಕೊರೋನಾ ಲಸಿಕೆ (Covid vaccine) ಅಭಿಯಾನ ಯಶಸ್ವಿ ಅಗಿರುವ ಬಗ್ಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಡಿಸೆಂಬರ್‌ ಅಂತ್ಯಕ್ಕೆ ಶೇ.90ರಷ್ಟುಜನತೆಗೆ ಮೊದಲ ಹಂತದ ಲಸಿಕೆಯನ್ನೂ, ಶೇ.70ರಷ್ಟುಅರ್ಹರಿಗೆ ಎರಡನೇ ಹಂತದ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

ಬೊಮ್ಮಾಯಿ ಮೂಲಕ ಕೇಂದ್ರ ಸಚಿವರ ಮುಂದೆ ಮಹತ್ವದ ಬೇಡಿಕೆ ಇಟ್ಟ ಸುಧಾಕರ್!

ಈಗ ರಾಜ್ಯದಲ್ಲಿ 51 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ ಎಂದೂ ಅವರು ವಿವರಿಸಿದರು. ಆರೋಗ್ಯ ಸಚಿವ (Health Minister) ಡಾ.ಕೆ.ಸುಧಾಕರ್‌ (Dr K Sudhakar) ಹಾಜರಿದ್ದರು.

ರಸಗೊಬ್ಬರಕ್ಕೆ ಅಭಾವ

ರಾಜ್ಯಾದ್ಯಂತ ಡಿಎಪಿ ರಸಗೊಬ್ಬರಕ್ಕಾಗಿ ರೈತರು (Farmers) ಪರಿತಪಿಸುತ್ತಿದ್ದಾರೆ. ಏಜೆನ್ಸಿಗೆ ಮತ್ತು ಕೃಷಿ ಇಲಾಖೆಗೆ (Agriculture Department) ಪ್ರದಕ್ಷಿಣೆ ಹಾಕಿದರೂ ಡಿಎಪಿ ರಸಗೊಬ್ಬರ ಸಿಗುತ್ತಲೇ ಇಲ್ಲ. ಇದರಿಂದ ಮುಂಗಾರು ಬೆಳೆಯ ಇಳುವರಿಗೆ ಹಾಗೂ ಹಿಂಗಾರು ಬಿತ್ತನೆ ಹಿನ್ನೆಡೆಗೆ ಕಾರಣವಾಗಿದೆ.

ದೇಶದಾದ್ಯಂತ ಡಿಎಪಿ ರಸಗೊಬ್ಬರ ಅಭಾವ ಎದುರಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಮತ್ತೆ ಏರಿಕೆಯಾಗಿರುವುದರಿಂದ ಹಾಗೂ ಕೇಂದ್ರ ಸರ್ಕಾರ ಗೊತ್ತುಮಾಡಿರುವ ಸಬ್ಸಿಡಿಯ ದರದಲ್ಲಿ ಉತ್ಪಾದನೆ ಹೊರೆಯಾಗುತ್ತಿರುವುದರಿಂದ ರಸಗೊಬ್ಬರ ಉತ್ಪಾದನೆಯನ್ನೇ ತಗ್ಗಿಸಲಾಗಿದೆ. ಈ ಕಾರಣಕ್ಕಾಗಿಯೇ ಡಿಎಪಿ ರಸಗೊಬ್ಬರ ಅಭಾವ ಎದುರಾಗಿದೆ.

ರಾಜ್ಯದಲ್ಲಿ ಅಕ್ಟೋಬರ್‌ ತಿಂಗಳ ಡಿಎಪಿ ರಸಗೊಬ್ಬರದ ಹಂಚಿಕೆ ಆಗಿಯೇ ಇಲ್ಲವಂತೆ. ಹೀಗಾಗಿ, ಈಗ ಮಾರುಕಟ್ಟೆಯಲ್ಲಿನ ಅಭಾವ ಇನ್ನಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ದೇಶದಲ್ಲಿ ಸೆಪ್ಟೆಂಬರ್‌ ಅಂತ್ಯಕ್ಕೆ ಕಳೆದ ವರ್ಷ 4.5 ಮಿಲಿಯನ್‌ ಟನ್‌ ಡಿಎಪಿ ರಸಗೊಬ್ಬರ ಬಳಕೆಯಾಗಿದ್ದರೆ ಈ ಬಾರಿ ಕೇವಲ 2.5 ಮಿಲಿಯನ್‌ ಟನ್‌ ಮಾತ್ರ ಬಳಕೆಯಾಗಿದೆ. ಅಷ್ಟುಕೊರತೆಯಾಗಿದೆ ಎಂದು ಹೇಳಲಾಗುತ್ತದೆ.

ಕೊಪ್ಪಳ (Koppal) ಜಿಲ್ಲೆಯೊಂದರಲ್ಲಿಯೇ ಅಕ್ಟೋಬರ್‌ ತಿಂಗಳಿಗೆ ಸುಮಾರು 3500 ಮೆಟ್ರಿಕ್‌ ಟನ್‌ ಡಿಎಪಿ ರಸಗೊಬ್ಬರ ಬೇಕಾಗಿದ್ದರೂ ಇದುವರೆಗೂ ಒಂದೇ ಒಂದು ಚೀಲ ಬಂದಿಲ್ಲ. ಹೀಗಾಗಿ ಪರಿಸ್ಥಿತಿ ನಿಭಾಯಿಸುವುದು ಭಾರಿ ಕಷ್ಟಕರವಾಗಲಿದೆ. ಇದೇ ಪರಿಸ್ಥಿತಿ ಎಲ್ಲೆಡೆ ಇದೆ. ರಾಜ್ಯಾದ್ಯಂತ ಅಂದಾಜು 1 ಲಕ್ಷ ಟನ್‌ ಡಿಎಪಿ ರಸಗೊಬ್ಬರದ ಬೇಡಿಕೆ ಇದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios