ಕೊರೋನಾ ನಡುವೆಯೇ ರಾಜ್ಯ ಸರ್ಕಾರಕ್ಕೆ ಎದುರಾಗಿದ್ದ ಒಂದು ಸಂಕಷ್ಟ ಇಂದು (ಗುರುವಾರ) ಪರಿಹಾರವಾಯ್ತು ಎನ್ನುವಷ್ಟರಲ್ಲಿಯೇ ಮತ್ತೊಂದು ಸಂಕಷ್ಟ ಎದುರಾಗಿದೆ.

ಬಳ್ಳಾರಿ, (ಜುಲೈ.09): ರಾಜೀನಾಮೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದ ಗುತ್ತಿಗೆ ವೈದ್ಯರ ಖಾಯಮಾತಿಗೆ ಇಂದು (ಗುರುವಾರ) ನಡೆದ ಸಂಪುಟ ಸಭೆಯಲ್ಲಿ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ ಗುತ್ತಿಗೆ ಆಯುಷ್ ವೈದ್ಯರು ಎದ್ದು ನಿಂತಿದ್ದಾರೆ.

Add Asianetnews Kannada as a Preferred SourcegooglePreferred

ಹೌದು... ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 2 ಸಾವಿರ ಆಯುಷ್ ವೈದ್ಯರೆಲ್ಲರೂ ಜು.15ರಂದು ಸಾಮೂಹಿಕವಾಗಿ ರಾಜಿನಾಮೆ ನೀಡಲಿದ್ದಾರೆ ಎಂದು ಗುತ್ತಿಗೆ ಆಯುಷ್ ವೈದ್ಯರ ಸಂಘದ ರಾಜ್ಯ ಘಟಕದ ಖಜಾಂಚಿ ಡಾ.ಆನಂದ್ ಎಸ್.ಕಿರಿಶ್ಯಾಳ ತಿಳಿಸಿದರು.

ಗುತ್ತಿಗೆ ವೈದ್ಯರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ...!

ಬಳ್ಳಾರಿಯಲ್ಲಿ ಇಂದು (ಗುರುವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15-20 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರೂ ಕಾಯಂಗೊಳಿಸಿಲ್ಲ. ವೇತನದಲ್ಲಿಯೂ ತಾರತಮ್ಯ ನಡೆಯುತ್ತಿದೆ‌. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಸಿದಿರು.

ಅಲೋಪತಿ ವೈದ್ಯರ ಬೇಡಿಕೆಗಳನ್ನು ಮಾತ್ರ ಈಡೇರಿಸಿ ಅವರ ವೇತನವನ್ನು ಹೆಚ್ಚಿಸಿ, ಆಯುಷ್ ವೈದ್ಯರನ್ನು ಸರ್ಕಾರ ಕಡೆಗಣಿಸಿದೆ. ಖಾಸಗಿ ವೈದ್ಯರು ಕೂಡ ಹೊರರೋಗಿಗಳ ಚಿಕಿತ್ಸೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸಲಿದ್ದಾರೆ. ಜ್ವರ ತಪಾಸಣಾ ಕೇಂದ್ರಗಳಲ್ಲಿ ಬಹುತೇಕ ಆಯುಷ್ ಮತ್ತು 27 ಸಾವಿರ ಖಾಸಗಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ‌ ಎಂದರು.

1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್

ಈಗಿನ ಕಾಲದಲ್ಲಿ ಕೇವಲ 20 ಸಾವಿರದಲ್ಲಿ ಜೀವನ ನಡೆಯುವುದು ಕಷ್ಟಕರವಾಗಿದೆ. ಕನಿಷ್ಠ 58,500 ರೂ. ವೇತನ ಪಾವತಿಸಬೇಕು. ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಮೌಖಿಕ ಭರವಸೆ ನೀಡಿದರೆ ಈ ಬಾರಿ ಒಪ್ಪುವುದಿಲ್ಲ‌. ಲಿಖಿತವಾಗಿ ಬೇಡಿಕೆಗಳನ್ನು ಈಡೇರಿಸಿದ ನಂತರವೇ ಸೇವೆ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಕಾಶ ಪಾಟೀಲ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಆಯುಶ್ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೀವನೇಶ್ವರಯ್ಯ, ಡಾ.ಬಸವರಾಜ ಇದ್ದರು.