ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಟಿಕೆಟ್ ವಿಚಾರವೂ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಶೇ.33ರಷ್ಟು ಟಿಕೆಟ್ ನೀಡಲು ಮಹಿಳಾ ಘಟಕ ಆಗ್ರಹಿಸಿದೆ. 

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳಾ ಅಭ್ಯರ್ಥಿಗಳಿಗೆ ಶೇ.33ರಷ್ಟುಮೀಸಲಾತಿ ನೀಡುವಂತೆ ಪಕ್ಷವನ್ನು ಕೇಳಿದ್ದೇವೆ. ಪಕ್ಷ ಈಗಾಗಲೇ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೋಮವಾರದವರೆಗೆ ಅವಕಾಶವಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮಂಗಳೂರಿನಿಂದ ಮಮತಾ ಗಟ್ಟಿ, ವಿಜಯಪುರದಿಂದ ಕಾಂತಾ ನಾಯ್ಕ, ವೀಣಾ ಕಾಶಪ್ಪನವರ್‌, ರೂಪಾ ಶಶಿಧರ್‌, ವಸಂತ ಕವಿತಾ, ಈಶ್ವರ್‌ ಖಂಡ್ರೆ ಅವರ ಪತ್ನಿ ಗೀತಾ ಖಂಡ್ರೆ ಹೀಗೆ ಹಲವು ಮಹಿಳಾ ಅಭ್ಯರ್ಥಿಗಳು ಟಿಕೆಟ್‌ ಕೇಳುತ್ತಿದ್ದಾರೆ. ಟಿಕೆಟ್‌ ನೀಡಿಕೆಯಲ್ಲಿ ಶೇ.33ರಷ್ಟುಮೀಸಲಾತಿ ನೀಡಬೇಕು ಎಂದು ಪಕ್ಷವನ್ನು ಕೇಳಿದ್ದೇವೆ. ಪರಿಗಣಿಸುವ ವಿಶ್ವಾಸವಿದೆ ಎಂದರು.

ಸಿಎಂ ಆಗ್ಲಿಲ್ಲ ಅಂತ ಪರಮೇಶ್ವರ್ ಗೋಳು, ಸಿಎಂ ಆಗುವ ಅವಕಾಶ ತಪ್ಪಿಸಿದ್ಯಾರು..?

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಸಂಸದರಿರುವುದರಿಂದ ನಟಿ ಸುಮಲತಾ ಅಂಬರೀಷ್‌ ಅವರಿಗೆ ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಟಿಕೆಟ್‌ ನೀಡಬೇಕೆ ಬೇಡವೇ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಿರಿಯ ನಾಯಕರು ಚರ್ಚಿಸಿ ನಿರ್ಧರಿಸುತ್ತಾರೆ. ಅಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

ಮಂಗಳೂರಲ್ಲಿ 26ಕ್ಕೆ ಯಾತ್ರೆ:

ಮಹಿಳೆಯರಿಗೆ ಶೇ.33ರಷ್ಟುಮೀಸಲಾತಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಫೆ.26ರಂದು ಮಹಿಳಾ ಕಾಂಗ್ರೆಸ್‌ ವತಿಯಿಂದ ಮಂಗಳೂರಿನಲ್ಲಿ ಬೃಹತ್‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪುಷ್ಪಾ ತಿಳಿಸಿದರು.

ಲೋಕಾ ಟಿಕೆಟ್: ‘ಕೈ’ನಲ್ಲಿ ಮಹಿಳಾ ಮಣಿಗಳ ಕಾದಾಟ?

ಮಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಬೃಹತ್‌ ಮಾನವ ಸರಪಳಿ ಮತ್ತು ಜಾಥಾ ನಡೆಸಿ ಶೇ.33ರಷ್ಟುಮೀಸಲಾತಿಗೆ ಒತ್ತಾಯಿಸಲಾಗುವುದು. ಇತರೆ ಜಿಲ್ಲೆಗಳಲ್ಲಿಯೂ ನಂತರ ಜಾಗೃತಿ ಜಾಥಾ, ಸಮಾವೇಶವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ.33ರಷ್ಟುಮೀಸಲಾತಿ ನೀಡುವ ವಿಷಯಕ್ಕೆ ಕಾಂಗ್ರೆಸ್‌ ಬದ್ಧವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಮಹಿಳಾ ಮೀಸಲಾತಿ ಬೇಕಾಗಿಲ್ಲ. ಹಾಗಾಗಿ ಸಂಬಂಧಿಸಿದ ಮಸೂದೆ ಜಾರಿಯಲ್ಲಿ ಮೀನಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಪರವಾಗಿದ್ದರೆ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.