ಮೋದಿ ಭೇಟಿಯಾದ ಯಡಿಯೂರಪ್ಪ: 10 ನಿಮಿಷ ಚರ್ಚೆ
* ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
* ದೆಹಲಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಭೇಟಿ
* ಮೋದಿ ಜತೆ ಯಡಿಯೂರಪ್ಪ 10 ನಿಮಿಷ ಚರ್ಚೆ
ನವದೆಹಲಿ, (ಜು.16): ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದರು.
ಕರ್ನಾಟಕ ಭವನದಿಂದ ತೆರಳಿದ ಯಡಿಯೂರಪ್ಪ ದೆಹಲಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಬಿಎಸ್ವೈ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೋದಿ ಜತೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಡ್ಡಾ ಭೇಟಿ ಮಾಡ್ತೇನೆ ಎಂದ ಸಿಎಂ: ಸಂಚಲನ ಮೂಡಿಸಿದ ಬಿಎಸ್ವೈ ನಡೆ
ಮೋದಿ ಜತೆ 10 ನಿಮಿಷ ಚರ್ಚೆ ನಡೆಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದೆ. ಮೇಕೆದಾಟು ಸೇರಿ ಎಲ್ಲ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಹೆಚ್ಚಿನ ಅನುದಾನ ಕೇಳಿದ್ದೇನೆ ಎಂದು ಹೇಳಿದರು.
ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲದಕ್ಕೂ ಒಪ್ಪಿಗೆ ಕೊಟ್ಟಿದ್ದಾರೆ. ಪಿಎಂ ಸಭೆ ಬಗ್ಗೆ ವಿವರವಾಗಿ ನಾಳೆ (ಶನಿವಾರ) ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಬಿಎಸ್ವೈ, ನಾಯಕತ್ವ ಬದಲಾವಣೆ ಬಗ್ಗೆ ನಂಗೆ ಗೊತ್ತಿಲ್ಲ. ರಾತ್ರಿ ರಾಜ್ಯದ ಕೇಂದ್ರ ಮಂತ್ರಿಯಾಗಳನ್ನು ಭೇಟಿ ಮಾಡುತ್ತೇನೆ ಎಂದು ಹೇಳಿ ಕರ್ನಾಟಕ ಭವನಕ್ಕೆ ತೆರಳಿದರು.