Asianet Suvarna News Asianet Suvarna News

ಇಂದಿನಿಂದ 10 ದಿನ ಬಿಸಿ ಸದನ ಸಮರ: ಬೆಲೆಯೇರಿಕೆ, ಜಾತಿಗಣತಿ ಸಮರಕ್ಕೆ ವಿಪಕ್ಷ ಸಜ್ಜು!

* ಇಂದಿನಿಂದ 10 ದಿನ ಬಿಸಿ ಸದನ ಸಮರ

* 6 ತಿಂಗಳ ನಂತರ ವಿಧಾನಮಂಡಲ ಅಧಿವೇಶನ

* ಬೆಲೆಯೇರಿಕೆ, ಜಾತಿಗಣತಿ ಸಮರಕ್ಕೆ ವಿಪಕ್ಷ ಸಜ್ಜು

* ಸಿಎಂ ಬೊಮ್ಮಾಯಿಗೆ ಇದು ಮೊದಲ ಅಧಿವೇಶನ

Karnataka CM Bommai faces 1st assembly session amid caste census quota row pod
Author
Bangalore, First Published Sep 13, 2021, 7:17 AM IST

ಬೆಂಗಳೂರು(ಸೆ.13): ಕೋವಿಡ್‌ ನಿರ್ವಹಣೆಯಲ್ಲಿ ವೈಫಲ್ಯ, ಭ್ರಷ್ಟಾಚಾರ, ಸಾಲದ ಹೊರೆ, ಬೆಲೆ ಏರಿಕೆ, ಜಾತಿ ಗಣತಿ ವರದಿ ಮಂಡನೆಗೆ ವಿಳಂಬ ಸೇರಿದಂತೆ ಹಲವು ಅಸ್ತ್ರಗಳೊಂದಿಗೆ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಕಲಾಪ ಮಾತಿನ ಸಮರದಿಂದ ಕೂಡಿರುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಸೋಮವಾರದಿಂದ ತಮ್ಮ ಮೊಟ್ಟಮೊದಲ ವಿಧಾನಮಂಡಲ ಅಧಿವೇಶನ ಎದುರಿಸುತ್ತಿದ್ದಾರೆ. ಈ ನಡುವೆ, ಶ್ರೀ ಸಾಮಾನ್ಯರ ಬದುಕು ದುರ್ಬರಗೊಳಿಸುತ್ತಿರುವ ಬೆಲೆ ಏರಿಕೆ, ನೆರೆ, ಪಡಿತರದಾರರಿಗೆ ಆಹಾರಧಾನ್ಯ ಕಡಿತ, ದೇಶವನ್ನೇ ನಡುಗಿಸಿದ ಮೈಸೂರು ಅತ್ಯಾಚಾರ ಪ್ರಕರಣ, ಜಾತಿ ಗಣತಿ ವರದಿ ಜಾರಿಗೆ ಆಗ್ರಹ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಸಮುದಾಯಗಳಿಗೆ ಇನ್ನೂ ದೊರೆಯದ ನೆರವು ಹಾಗೂ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಹೀಗೆ, ಸಾಲು-ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ತುದಿಗಾಲಲ್ಲಿ ನಿಂತಿವೆ.

ಮೊದಲ ದಿನವೇ ಇಂಧನ ಬೆಲೆ ಏರಿಕೆ ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ದರ ಇಳಿಕೆಗೆ ಪಟ್ಟು ಹಿಡಿಯಲಿದ್ದಾರೆ.

18 ವಿಧೇಯಕ ಮಂಡನೆ:

10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ 18 ವಿಧೇಯಕಗಳನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. 10 ವಿಧೇಯಕಗಳು, ನಾಲ್ಕು ಸುಗ್ರೀವಾಜ್ಞೆಗಳು ಮತ್ತು ನಾಲ್ಕು ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕ ಸೇರಿ ಒಟ್ಟು 18 ವಿಧೇಯಕಗಳು ಮಂಡನೆಯಾಗಲಿವೆ.

ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, ಕಳ್ಳಭಟ್ಟಿವ್ಯಾಪಾರಿಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಮತ್ತು ದೃಶ್ಯ ಅಥವಾ ಧ್ವನಿ, ಕಳ್ಳಮುದ್ರಕರ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ, ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳು (ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪ್‌ (ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳು ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಗಳು ಮಂಡನೆಯಾಗಲಿವೆ.

ಜೊತೆಗೆ ಕಳೆದ ಅಧಿವೇಶನದ ನಂತರ ಸರ್ಕಾರದಿಂದ ಹೊರಡಿಸಲಾದ ನಾಲ್ಕು ಸುಗ್ರೀವಾಜ್ಞೆಗಳು ಮಂಡನೆಯಾಗಲಿವೆ. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ), ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ), ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ), ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಮಂಡಿಸಲಾಗುತ್ತಿದೆ.

ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ, ಮೀಸಲಾತಿ) (ತಿದ್ದುಪಡಿ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಗಳು ಮಂಡನೆಯಾಗಲಿವೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಘಟಾನುಘಟಿ ಎದುರಾಳಿ:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ಪ್ರಬಲ ಸದನ ಪಟುಗಳಾದ ಕೃಷ್ಣಬೈರೇಗೌಡ ಮೊದಲಾದವರ ವಾಗ್ದಾಳಿಯಿಂದ ಯಡಿಯೂರಪ್ಪ ಸರ್ಕಾರ ರಕ್ಷಣೆ ಮಾಡುತ್ತಿದ್ದ ಶೈಲಿಯಿಂದ ಅತ್ಯುತ್ತಮ ಸಂಸದೀಯ ಪಟು ಎಂದೇ ಹೆಸರು ಗಳಿಸಿದವರು ಬೊಮ್ಮಾಯಿ. ಇಂತಹ ಬೊಮ್ಮಾಯಿ ತಾವೇ ಕ್ಯಾಪ್ಟನ್‌ ಆದ ನಂತರ ಪ್ರತಿಪಕ್ಷಗಳ ದಾಳಿಯನ್ನು ಹೇಗೆ ಎದುರಿಸುತ್ತಾರೆ ಎಂಬ ತೀವ್ರ ಕುತೂಹಲವನ್ನೂ ಈ ಅಧಿವೇಶನ ಹುಟ್ಟುಹಾಕಿದೆ.

Follow Us:
Download App:
  • android
  • ios