* ಹುಬ್ಬಳ್ಳಿ, ಕಲಬುರಗಿಯಲ್ಲಿ ಸಮನ್ವಯ ಕೇಂದ್ರ ಸ್ಥಾಪನೆಗೆ ಸರ್ಕಾರ ಚಿಂತನೆ* ಉತ್ತರ ಕರ್ನಾಟಕದಲ್ಲಿ ಸ್ಟಾರ್ಟಪ್‌ ಕೇಂದ್ರ* ರಾಜ್ಯದಲ್ಲಿ ಎಲ್ಲ ರಂಗಗಳಿಗೆ ಅನ್ವಯಿಸುವಂತೆ ಹೊಸ ಆರ್‌-ಡಿ ನೀತಿ: ಸಿಎಂ

ಹುಬ್ಬಳ್ಳಿ(ಸೆ.೨೮): ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿರುವ ಸ್ಟಾರ್ಟಪ್‌ಗಳು(ಶತಾರತುಪಸ) ಪ್ರಾದೇಶಿಕವಾರು ಬೆಳೆಯಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Boommai) ಇದಕ್ಕಾಗಿ ಸ್ಟಾರ್ಟಅಪ್‌ ಕೋ ಆರ್ಡಿನೇಶನ್‌ ಸೆಂಟರ್‌ (ಸಮನ್ವಯ ಕೇಂದ್ರ)ನ ಪ್ರಾದೇಶಿಕ ಕಚೇರಿಗಳನ್ನು ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ(Kalaburagi) ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ(North Karnataka) ಭಾಗದ ಅಭಿವೃದ್ಧಿ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ತಳೆಯುವ ಬಗ್ಗೆ ಸೂಚನೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಕೆಎಲ…ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್‌ ಕಾಲೇಜಿನ 75ನೇ ವರ್ಷಾಚರಣೆ ಹಾಗೂ ಕೆಎಲ್‌ಇ ಟೆಕ್‌ಪಾರ್ಕ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸದ್ಯ ಸ್ಟಾರ್ಟಪ್‌ಗಳು ಬೆಂಗಳೂರಿಗಷ್ಟೇ ಸೀಮಿತವಾಗಿವೆ. ರಾಜ್ಯದ ಬೇರೆಡೆ ಕೂಡ ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಬೇಕಿದೆ. ಇದಕ್ಕಾಗಿ ಸ್ಟಾರ್ಟಪ್‌ ಕೋಆರ್ಡಿನೇಷನ್‌ ಸೆಂಟರ್‌ನ ಪ್ರಾದೇಶಿಕ ಕಚೇರಿಗಳನ್ನು ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಪ್ರಾರಂಭಿಸುವ ಚಿಂತನೆಯಿದೆ. ಇಲ್ಲಿಂದ ಬೆಂಗಳೂರಿಗೆ ಹೋದ ತಕ್ಷಣ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಆರ್‌ ಆ್ಯಂಡ್‌ ಡಿ ನೀತಿಗೆ ಟಾಸ್ಕ್‌ಫೋರ್ಸ್‌:

ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲ ರಂಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್‌ ಡಿ) ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆರ್‌ ಆ್ಯಂಡ್‌ ಡಿ ಹೊಸ ನೀತಿ ಸಿದ್ಧಪಡಿಸಲು ಕಾರ್ಯಪಡೆ (Taskforce) ರಚಿಸಲಿದ್ದು, ಅದಕ್ಕೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ ಶೆಟ್ಟರ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್‌ ಆ್ಯಂಡ್‌ ಡಿ ಕೇಂದ್ರಗಳಿವೆ. ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್‌ ಆ್ಯಂಡ್‌ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ. ಸಾರ್ವಜನಿಕರಿಗೆ ಉಪಯೋಗವಾಗಬೇಕು. ಈ ಹಿನ್ನೆಲೆ ಹೊಸ ನೀತಿ ರೂಪಿಸಬೇಕಿದೆ ಎಂದರು.

ರಾಜಕೀಯವೂ ವಿಜ್ಞಾನವೇ: ಉತ್ತಮ ಭೂತಕಾಲವಷ್ಟೇ ಅಲ್ಲ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯ. ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ. ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ. ಎಲ್ಲ ದೇಶಗಳು ಈ ನೀತಿ ಪಾಲಿಸಬೇಕು. ಕರ್ತವ್ಯವನ್ನು ನೈತಿಕತೆಯ ತಳಹದಿಯೊಂದಿಗೆ ಕಾಯಕದ ರೀತಿಯಲ್ಲಿ ನಿರ್ವಹಿಸಬೇಕು. ದೇಶದ ಬಡತನ, ಆರೋಗ್ಯ, ಶಿಕ್ಷಣ, ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು. ಅದೇ ಜನರ, ಜನಪರ ರಾಜಕೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೈಗಾರಿಕೆಗಳ ವಿಕೇಂದ್ರೀಕರಣ: ಬೊಮ್ಮಾಯಿ ಪ್ಲಾನ್‌

- ಬೆಂಗಳೂರಿಗಷ್ಟೇ ಸೀಮಿತವಾಗಿರುವ ಸ್ಟಾರ್ಟ್‌ ಅಪ್‌ಗಳನ್ನು ಪ್ರಾದೇಶಿಕವಾರು ಬೆಳೆಸಲು ಚಿಂತನೆ

- ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಸ್ತರಿಸಲು ಕೋ ಆರ್ಡಿನೇಶನ್‌ ಸೆಂಟರ್‌ ಸ್ಥಾಪನೆ

- ಕೃಷಿ, ತೈಲ, ಕೈಗಾರಿಕೆ ಮತ್ತಿತರ ರಂಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಟಾಸ್ಕ್‌ಫೋರ್ಸ್‌ ರಚನೆ

- ಹೊಸ ಆರ್‌ ಆ್ಯಂಡ್‌ ಡಿ ನೀತಿ ಸಿದ್ಧಪಡಿಸುವ ಸಮಿತಿಗೆ ಕೆಎಲ್‌ಇ ವಿವಿ ಕುಲಪತಿ ಡಾ| ಶೆಟ್ಟರ್‌ ಅಧ್ಯಕ್ಷ

ಬೆಂಗಳೂರಿನಿಂದ ಹೊರಗೂ ಸ್ಟಾರ್ಟಪ್‌

ಸದ್ಯ ಸ್ಟಾರ್ಟಪ್‌ಗಳು ಬೆಂಗಳೂರಿಗಷ್ಟೇ ಸೀಮಿತವಾಗಿವೆ. ರಾಜ್ಯದ ಬೇರೆಡೆ ಕೂಡ ಸ್ಟಾರ್ಟಪ್‌ಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ ಸ್ಟಾರ್ಟಪ್‌ ಕೋಆರ್ಡಿನೇಷನ್‌ ಸೆಂಟರ್‌ನ ಪ್ರಾದೇಶಿಕ ಕಚೇರಿಗಳನ್ನು ಹುಬ್ಬಳ್ಳಿ, ಕಲಬುರಗಿಯಲ್ಲಿ ಪ್ರಾರಂಭಿಸುವ ಚಿಂತನೆಯಿದೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ