ವಿಡಿಯೋ, ಆಡಿಯೋ ಧ್ವನಿ ಮ್ಯಾಚ್‌ ಮಾಡಲಿ| ಒಂದೇ ತಾಸಿನಲ್ಲಿ ಕೇಸ್‌ ಇತ್ಯರ್ಥ ಆಗುತ್ತೆ| ಡಿಕೆಶಿ ಪಾತ್ರ ಅವರೇ ಹೇಳಲಿ: ಬಾಲಚಂದ್ರ

ಬೆಂಗಳೂರು(ಮಾ.27): ಮಹಿಳೆಯ ಈಗಿನ ಆಡಿಯೋ ಹಾಗೂ ಹಿಂದಿನ ವಿಡಿಯೋ ಧ್ವನಿ ಮ್ಯಾಚ್‌ ಮಾಡಿದರೆ ಪ್ರಕರಣ ಒಂದೇ ಗಂಟೆಯಲ್ಲಿ ಇತ್ಯರ್ಥವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆ ವಕೀಲರ ಮೂಲಕ ನೀಡಿರುವ ದೂರು ಹಾಗೂ ಬಿಡುಗಡೆ ಮಾಡಿರುವ ಆಡಿಯೋ ಈ ಎಲ್ಲವನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು. ಈ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ್‌ ಇದ್ದರೋ ಇಲ್ಲವೋ ಎಂಬುದನ್ನು ಅವರೇ ಹೇಳಬೇಕು. ಇಲ್ಲವೇ ಆ ಮಹಿಳೆ ಹೇಳಬೇಕು. ಎಸ್‌ಐಟಿ ಅವರು ಆ ಮಹಿಳೆಯರನ್ನು ಹುಡುಕಿ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಲೇಡಿ + ಸಿಡಿ = ಮತ್ತೊಮ್ಮೆ ಬೇಡಿ: ಕಾಂಗ್ರೆಸ್‌ಗೆ‌ ರೇಣುಕಾಚಾರ್ಯ ತಿರುಗೇಟು

‘ಈ ಸಿ.ಡಿ.ಪ್ರಕರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್‌ಐಟಿ ನಡೆ ಆಧರಿಸಿ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಯುವತಿ ವಕೀಲರ ಮೂಲಕ ದೂರು ನೀಡಿದ್ದಾಳೆ. ಪ್ರಜಾಪ್ರಭುತ್ವದಲ್ಲಿ ಅನ್ಯಾಯಕ್ಕೆ ಒಳಗಾದವರು ದೂರು ನೀಡಲು ಅವಕಾಶವಿದೆ. ಮುಂದೆ ಎಸ್‌ಐಟಿ ತನಿಖಾ ತಂಡ ಸೂಕ್ಷ್ಮವಾಗಿ ಪರಿಶೀಲಿಸಲಿದೆ. ಯಾವುದೇ ಸುಳ್ಳು, ಯಾವು ಸತ್ಯ ಎಂಬುದು ತನಿಖೆಯಿಂದ ಹೊರಬರಲಿದೆ. ಈಗಾಗಲೇ ರಮೇಶ್‌ ಜೊರಕಿಹೊಳಿ ನೀಡಿದ ದೂರು ಹಾಗೂ ಮಹಿಳೆ ನೀಡಿದ ದೂರು ಆಧರಿಸಿ ಎರಡು ಎಫ್‌ಐಆರ್‌ ದಾಖಲಾಗಿದೆ. ಎರಡೂ ತನಿಖೆ ಆಗಲಿ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದರು.

ಪಿಕ್ಚರ್‌ ಈಗ ರಿಲೀಸ್‌:

‘ಸಿ.ಡಿ.ಬಿಡುಗಡೆಯಾಗಿ ಇಷ್ಟುದಿನಗಳ ಬಳಿಕ ಆ ಮಹಿಳೆ ದೂರು ನೀಡಿದ್ದಾಳೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇಷ್ಟುದಿನ ಪಿಕ್ಚರ್‌ನ ಟ್ರೈಲರ್‌ ಇತ್ತು. ಈಗ ಪಿಚ್ಚರ್‌ ರಿಲೀಸ್‌ ಆಗಿದೆ. ಮುಂದಿನ ದಿನಗಳಲ್ಲಿ ಎಸ್‌ಐಟಿ ತನಿಖೆಯಿಂದ ಷಡ್ಯಂತ್ರದ ಹಿಂದಿನ ಹೀರೋ, ವಿಲನ್‌, ಡೈರೆಕ್ಟರ್‌, ಪ್ರೊಡ್ಯೂಸರ್‌, ಹೀರೋಯಿನ್‌ ಎಲ್ಲರ ಬಗ್ಗೆಯೂ ತಿಳಿಯಲಿದೆ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ರಮೇಶ್‌ ಜಾರಕಿಹೊಳಿ ಸದ್ಯಕ್ಕೆ ಜಾಮೀನು ಪಡೆಯುವುದಿಲ್ಲ. ಎಸ್‌ಐಟಿ ವಿಚಾರಣೆಗೆ ರಮೇಶ್‌ ಸಹಕರಿಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹೋಗಲಿದ್ದಾರೆ. ಹೀಗಾಗಿ ಎಸ್‌ಐಟಿ ಮುಂದಿನ ನಡೆ ಆಧರಿಸಿ ನಾವು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

'ಡಿಕೆಶಿಯನ್ನು CD ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ'

‘ಇದು ಫೇಕ್‌ ಸಿ.ಡಿ. ಎಂದು ರಮೇಶ್‌ ಹೇಳಿದ್ದಾರೆ. ನಾನು ಈವರೆಗೂ ನೇರವಾಗಿ ಆ ವಿಡಿಯೋ ನೋಡಿಲ್ಲ. ಎಸ್‌ಐಟಿ ತಾಂತ್ರಿಕ ತಂಡದಿಂದ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದು ಗೊತ್ತಾಗಲಿದೆ. ರಮೇಶ್‌ ಜಾರಕಿಹೊಳಿ ಅವರು ಮಾ.3ರಂದು ದೂರು ನೀಡಿದ್ದರೆ, ಮಾಧ್ಯಮಗಳಲ್ಲಿ ತೋರಿಸುತ್ತಿರುವ ಎಲ್ಲ ವ್ಯಕ್ತಿಗಳು ಜೈಲಿನಲ್ಲಿ ಇರುತ್ತಿದ್ದರು. ಏಕೆಂದರೆ, ಇವರೆಲ್ಲ ಮಾ.5ರಂದು ಬೆಂಗಳೂರಿನಿಂದ ಆಚೆ ಹೋಗಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ರಮೇಶ್‌ ತಡವಾಗಿ ದೂರು ಕೊಟ್ಟಿದ್ದಾರೆ. ಇದೀಗ ಮತ್ತೊಂದು ದೂರು ನೀಡುವ ಬಗ್ಗೆ ಯೋಚಿಸಿಲ್ಲ’ ಎಂದು ಬಾಲಚಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಪ್ರಕರಣದ ಹಿಂದೆ ರಾಜಕೀಯ ಸೇರಿದಂತೆ ದೊಡ್ಡ ಷಡ್ಯಂತ್ರವಿದೆ. ವ್ಯವಸ್ಥಿತ ಜಾಲ ಅಡಗಿದ್ದು, ಪೂರ್ವ ನಿಯೋಜನೆಯಂತೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರಮೇಶ್‌ ಅವರಿಗೆ ಅನ್ಯಾಯವಾಗಿದೆ. ಆದರೆ, ಅವರನ್ನು ವಿಲನ್‌ ರೀತಿ ತೋರಿಸಲಾಗುತ್ತಿದೆ. ಆ ಮಹಿಳೆ ವಕೀಲರ ಮೂಲಕ ದೂರು ನೀಡುವ ಬದಲು ನೇರವಾಗಿ ಎಸ್‌ಐಟಿ ಬಳಿ ಬಂದು ದೂರು ನೀಡಬಹುದಿತ್ತು. ಇಲ್ಲವೇ ಮಾಧ್ಯಮಗಳ ರಕ್ಷಣೆ ಪಡೆದು ದೂರು ನೀಡಬಹುದಿತ್ತು ಎಂದು ಹೇಳಿದರು.

ಎಸ್‌ಐಟಿ ತನಿಖಾ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಜನತೆ ಹಾಗೂ ಮಾಧ್ಯಮಗಳು ಈ ಪ್ರಕರಣವನ್ನು ನೋಡುತ್ತಿವೆ. ಎಸ್‌ಐಟಿ ರಮೇಶ್‌ ಪರವಾಗಿ ಅಥವಾ ಇನ್ಯಾರ ಪರವೂ ಕೆಲಸ ಮಾಡುತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ತನಿಖೆ ಮತ್ತಷ್ಟುಚುರುಕುಗೊಳಿಸಬೇಕು ಎಂದರು.

CD ಲೇಡಿಯ ಆಡಿಯೋದಲ್ಲಿ ಡಿಕೆಶಿ ಹೆಸ್ರು, ಇದಕ್ಕಿಂತ ದೊಡ್ಡ ಬಾಂಬ್ ಇದೆ ಎಂದ ಜಾರಕಿಹೊಳಿ

ಪ್ರಚಾರಕ್ಕೆ ಹೋಗ್ತೇವೆ:

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಪರ ನಾನು ಮತ್ತು ಸಹೋದರ ರಮೇಶ್‌ ಪ್ರಚಾರ ಮಾಡುತ್ತೇವೆ. ಬೆಳಗಾವಿಯಲ್ಲಿ ಬಿಜೆಪಿ ಪ್ರಬಲವಾಗಿದ್ದು, ಕಳೆದ ಚುನಾವಣೆಯಲ್ಲಿ ಸುರೇಶ್‌ ಅಂಗಡಿ ಅವರು ನಾಲ್ಕು ಲಕ್ಷ ಮತಗಳ ಅಂತರದಿದ ಗೆದ್ದಿದ್ದರು. ಈಗ ಅವರ ಪತ್ನಿ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್‌ ಪ್ರಬಲ ಸ್ಪರ್ಧೆ ಒಡ್ಡಿದರೂ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.