ಕೇಂದ್ರ ಮಹದಾಯಿ ಪ್ರಾಧಿಕಾರ ರಚಿಸಬೇಕು, ಕರ್ನಾಟಕಕ್ಕೆ ಅಕ್ರಮ ತಿರುವು ಮಾಡಿಕೊಳ್ಳುವ ಅವಕಾಶ ನೀಡಬಾರದು. ಮಹದಾಯಿಯ 1 ಹನಿ ನೀರಿಗೂ ನಾವು ಹೋರಾಡುತ್ತೇವೆ: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌

ಪಣಜಿ(ಡಿ.30): ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಕರ್ನಾಟಕಕ್ಕೆ ಮಹದಾಯಿ ನೀರನ್ನು ತಿರುಗಿಸಿಕೊಳ್ಳಲು ಆಗದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕೇಂದ್ರದ ಅನುಮೋದನೆ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದ ಪರಿಷ್ಕೃತ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಬಹುದು. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಕಳಸಾ ನಾಲೆ ಮೂಲಕ ನೀರು ತಿರುಗಿಸಿಕೊಳ್ಳಲು ಆಗದು. ಒಂದೊಂದು ಹನಿ ಮಹದಾಯಿ ನೀರಿಗೂ ನಾವು ಹೋರಾಡುತ್ತೇವೆ. ಕೂಡಲೇ ಕೇಂದ್ರ ಸರ್ಕಾರ ಮಹದಾಯಿ ನದಿ ನಿರ್ವಹಣಾ ಪ್ರಾಧಿಕಾರ ರಚಿಸಬೇಕು. ಇದರಿಂದ ಅಕ್ರಮವಾಗಿ ಕರ್ನಾಟಕ ಮಹದಾಯಿ ನೀರು ತಿರುವು ಪಡೆದುಕೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆ’ ಎಂದಿದ್ದಾರೆ. ಇದಲ್ಲದೆ, ಗೋವಾ ಸರ್ಕಾರವು ಮಹದಾಯಿ ಹಾಗೂ ಗೋವಾ ಜನರಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾದಾಯಿ ಯೋಜನೆಗಾಗಿ ರಕ್ತದಲ್ಲಿ ಪತ್ರ ಬರೆದಿದ್ದ ಬೊಮ್ಮಾಯಿ..!

ಸಾವಂತ್‌ ರಾಜೀನಾಮೆಗೆ ವಿಪಕ್ಷ ಪಟ್ಟು:

ಈ ನಡುವೆ, ಮಹದಾಯಿ ನೀರು ಸಂರಕ್ಷಣೆಯಲ್ಲಿ ಸಾವಂತ್‌ ವಿಫಲರಾಗಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು 2 ದಿನದ ಹಿಂದೆ ದಿಲ್ಲಿಯಲ್ಲಿ ನಡೆದ ಉನ್ನತ ಮಟ್ಟದ ಬಿಜೆಪಿ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಾವಂತ್‌ ಅವರು ಮಹದಾಯಿ ನದಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡುವುದಕ್ಕೆ ಮೌನ ಸಮ್ಮತಿ ನೀಡಿದ್ದಾರೆ ಎಂದು ವಿಪಕ್ಷ ಜಿಎಫ್‌ಪಿ ನಾಯಕ ವಿಜಯ ಸರದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದು, ಸಾವಂತ್‌ ರಾಜೀನಾಮೆಗೆ ಆಗ್ರಹಿಸಿದ್ದಾರೆ.