ಕ್ಯಾಬಿನೆಟ್ ಮೀಟಿಂಗ್: ಚರ್ಚೆಯಾಗಲಿದೆ 3 ಮಹತ್ವದ ವಿಚಾರ!
ಸೋಮವಾರ ಸಂಜೆ 4 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್| ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆಯಾಗಲಿದೆ ಮೂರು ಮಹತ್ವದ ವಿಚಾರಗಳು| ವಾರ ಪೂರ್ತಿ ಕರ್ಪ್ಯೂ ವಿಸ್ತರಣೆ ಬಗ್ಗೆ ಸಚಿವರ ಅಭಿಪ್ರಾಯ ಕೇಳಲಿರುವ ಸಿಎಂ
ಬೆಂಗಳೂರು(ಏ.24): ರಾಜ್ಯದಲ್ಲಿ ಕೊರೋನಾ ಮಹಾಮಾರಿಯಿಂದ ಉದ್ಭಿವಿಸಿರುವ ಆತಂಕದ ಪರಿಸ್ಥಿತಿ ನಿವಾರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಸರ್ಕಾರ ಹೇರಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಸೋಮವಾರ ಸಂಜೆ ನಾಲ್ಕು ಗಂಟೆಗೆ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಈ ವೇಳೆ ಸಚಿವರು ಮೂರು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.
ಹೌದು ಸೋಮವಾರ ಈ ಕ್ಯಾಬಿನೆಟ್ ಸಭೆಯಲ್ಲಿ, ಸಿಎಂ ವಾರ ಪೂರ್ತಿ ಕರ್ಪ್ಯೂ ವಿಸ್ತರಣೆ ಬಗ್ಗೆ ಸಚಿವರ ಅಭಿಪ್ರಾಯ ಕೇಳಲಿದ್ದು, ಮತ್ತಷ್ಟು ಕಟ್ಟು ನಿಟ್ಟಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಎರಡನೆಯದಾಗಿ ವ್ಯಾಕ್ಸಿನ್ ಉಚಿತವಾಗಿ ನೀಡುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಪ್ರಸ್ತಾಪಿಸಲಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಉಚಿತ ವ್ಯಾಕ್ಸಿನ್ ನೀಡಲಾಗಿದೆ. ಹೀಗಿರುವಾಗ ರಾಜ್ಯದಲ್ಲೂ ಉಚಿತ ವ್ಯಾಕ್ಸಿನ್ ನೀಡಬೇಕೆಂಬ ಕೂಗೆದ್ದಿದೆ. ಈ ನಿಟ್ಟಿನಲ್ಲಿ ಈ ಚರ್ಚೆ ನಡೆಯಲಿದೆ.
ಇವೆಲ್ಲದರೊಂದಿಗೆ ಕೋವಿಡ್ ನಿರ್ವಹಣೆಗೆ ಹಣಕಾಸು ಬಿಡುಗಡೆ ಬಗ್ಗೆಯೂ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಕೊರೋನಾ ರಾಜ್ಯದಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಎದುರಾಗಿದೆ. ಹೀಗಿರುವಾಗ ಸರ್ಕಾರ ಈ ಪರಿಸ್ಥಿತಿಯನ್ನು ನಿವಾರಿಸಿ, ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಚಿವರು ಚರ್ಚೆ ನಡೆಸಲಿದ್ದಾರೆ.