ಕಾಂಗ್ರೆಸ್ಸಲ್ಲಿ ತಳಮಳ : ನಾಲ್ಕನ್ನು ಗೆಲ್ಲುವ ನಿರೀಕ್ಷೆ
ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ನಲ್ಲಿ ಭಾರಿ ನಿರೀಕ್ಷೆ ಹಾಗೂ ತಳಮಳ ಹುಟ್ಟಿಕೊಂಡಿದೆ. ಈ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಪ್ರಭಾವವಾಗಲಿದ್ದು ತಳಮಳಕ್ಕೆ ಪ್ರಮುಖ ಕಾರಣವಾಗಿದೆ.
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದ ಸ್ಥಿರತೆ ಮೇಲೆ ಪರೋಕ್ಷ ಪ್ರಭಾವ ಬೀರುವ ನಿರೀಕ್ಷೆ ಹುಟ್ಟಿಸಿರುವ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ನಲ್ಲಿ ಭಾರಿ ನಿರೀಕ್ಷೆ ಹಾಗೂ ತಳಮಳ ಹುಟ್ಟಿಕೊಂಡಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತಾನೂ ಸ್ಪರ್ಧಿಸಿರುವ ಜಮಖಂಡಿ ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಅದೇ ರೀತಿ ಮಿತ್ರಪಕ್ಷವಾದ ಜೆಡಿಎಸ್ ರಾಮನಗರ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಮಾತ್ರ ಮೈತ್ರಿ ಕೂಟಕ್ಕೆ ವಿರುದ್ಧ ಹೋಗಬಹುದು ಎಂದೇ ಕಾಂಗ್ರೆಸ್ ನಾಯಕರು ಹೇಳುತ್ತಾರೆ.
ಅರ್ಥಾತ್ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ನಾಲ್ಕರಲ್ಲಿ ಗೆಲ್ಲುವ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಜೆಡಿಎಸ್ ಕಣದಲ್ಲಿರುವ ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗಟ್ಟಿವಿಶ್ವಾಸವಿದೆ. ಆದರೆ, ಇಷ್ಟೇ ಆತ್ಮವಿಶ್ವಾಸ ಕಾಂಗ್ರೆಸ್ ಸ್ಪರ್ಧಿಗಳು ಕಣದಲ್ಲಿರುವ
ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರದ ಬಗ್ಗೆ ಇಲ್ಲ. ಈ ಕ್ಷೇತ್ರ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ನಾಯಕರು ಹೇಳುತ್ತಾರೆ. ಆದರೆ, ಶೇ. 100ರಷ್ಟುಆತ್ಮವಿಶ್ವಾಸ ನಾಯಕರಲ್ಲಿ ಕಾಣುತ್ತಿಲ್ಲ.
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ದಿ. ಸಿದ್ದುನ್ಯಾಮಗೌಡ ಅವರು ಪ್ರತಿನಿಧಿಸಿದ್ದ ಈ ಕ್ಷೇತ್ರದಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಿರುವುದರಿಂದ ಅನುಕಂಪ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ ಎಂದು ಹೇಳುತ್ತಾರೆ. ಇದೇ ವೇಳೆ ಬಿಜೆಪಿಯ ಶ್ರೀಕಾಂತ್ ಪಾಟೀಲ್ ಅವರು ಕಳೆದ ಎರಡು ಚುನಾವಣೆಗಳಲ್ಲಿ ಸೋಲುಂಡಿರುವುದು ಹಾಗೂ ಇದು ತಮ್ಮ ಕಡೆಯ ಚುನಾವಣೆ ಎಂದು ಅನುಕಂಪ ಗಿಟ್ಟಿಸುವ ತಂತ್ರ ಅನುಸರಿಸಿದ್ದರು. ಇದರಿಂದ ಕ್ಷೇತ್ರದಲ್ಲಿ ಅನುಕಂಪದ ಪೈಪೋಟಿ ನಿರ್ಮಾಣವಾಗಿತ್ತು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದರೂ ಶೇ. 100ರಷ್ಟುಗೆಲುವು ಖಚಿತ ಎಂಬ ಗಟ್ಟಿವಿಶ್ವಾಸ ವ್ಯಕ್ತಪಡಿಸುವುದಿಲ್ಲ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅದರ ಶ್ರೇಯಸ್ಸು ಸಹಜವಾಗಿಯೇ ಅಲ್ಲಿ ಹೆಚ್ಚು ಪ್ರಚಾರ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಉಸ್ತುವಾರಿ ಹೊಣೆ ಹೊತ್ತಿದ್ದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಸಲ್ಲುತ್ತದೆ. ಅಕಸ್ಮಾತ್ ಫಲಿತಾಂಶ ಉಲ್ಟಾಹೊಡೆದರೆ ಸಹಜವಾಗಿಯೇ ಈ ಇಬ್ಬರು ನಾಯಕರಿಗೆ ಹಿನ್ನಡೆಯಾಗುತ್ತದೆ.
ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ: ನಾಯಕರ ಮೇಲಿನ ಪರಿಣಾಮಕ್ಕಿಂತ ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು ಪಕ್ಷ ಸೋಲುಂಡರೆ ಇದು ಬಿಜೆಪಿಗೆ ನೈತಿಕ ಗೆಲುವಾಗಿ ಪರಿಣಮಿಸಲಿದ್ದು, ಅದು ಮೈತ್ರಿ ಕೂಟ ಸರ್ಕಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದರೆ ಭವಿಷ್ಯದಲ್ಲಿ ಅದು ಆಪರೇಷನ್ ಕಮಲಕ್ಕೆ ಮುಂದಾಗಬಹುದು ಎಂಬ ಭೀತಿಯೂ ಕಾಂಗ್ರೆಸ್ ನಾಯಕರಿಗೆ ಇದೆ. ಕಾಂಗ್ರೆಸ್ನ ಕೆಲ ಭಿನ್ನಮತೀಯರು ಸದ್ಯಕ್ಕೆ ಸುಮ್ಮನಿದ್ದರೂ, ಉಪ ಚುನಾವಣೆಯಲ್ಲಿ ಮೈತ್ರಿಕೂಟವೇನಾದರೂ ಭಾರಿ ಹಿನ್ನಡೆ ಅನುಭವಿಸಿದರೆ ಅವರು ಬಿಜೆಪಿ ಪರ ನಿಲ್ಲಬಹುದು ಎಂಬ ಆಶಂಕೆ ಇದೆ.
ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ವಿ.ಎಸ್ ಉಗ್ರಪ್ಪ ಅವರು ಈ ಬಾರಿ ಭಾರಿ ಸ್ಪರ್ಧೆ ನೀಡಿದ್ದು, ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲುವ ಭಾರಿ ನಿರೀಕ್ಷೆಯನ್ನು ಹೊಂದಿದೆ. ಕ್ಷೇತ್ರದ ಶಾಸಕರು ಒಗ್ಗೂಡಿ ಕೆಲಸ ಮಾಡಿರುವುದು ಹಾಗೂ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಈ ಚುನಾವಣೆಗೆ ಧಾರೆಯೆರೆದಿರುವುದರ ಪರಿಣಾಮ ಬಿಜೆಪಿಗೆ ಇಲ್ಲಿ ಕಾಂಗ್ರೆಸ್ ಭರ್ಜರಿ ಪೈಪೋಟಿ ನೀಡಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಸಹಜವಾಗಿಯೇ ಅದು ಉಗ್ರಪ್ಪ ಹಾಗೂ ಶಿವಕುಮಾರ್ ಅವರಿಗೆ ಭಾರಿ ಶಕ್ತಿ ತುಂಬುತ್ತದೆ. ವಿಶೇಷವಾಗಿ ಪಕ್ಷದಲ್ಲಿ ಕೆಲ ನಾಯಕರ ವಿರೋಧದ ನಡುವೆಯೂ ಉಗ್ರಪ್ಪ ಅವರಿಗೆ ಟಿಕೆಟ್ ದೊರೆಯುವಂತೆ ಮಾಡುವಲ್ಲಿ ಹಾಗೂ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿವಕುಮಾರ್ ಅವರಿಗೆ ಪಕ್ಷದ ಮಟ್ಟದಲ್ಲಿ ದೊಡ್ಡ ಶಕ್ತಿ ಕೊಡುತ್ತದೆ. ಅಕಸ್ಮಾತ್ ಸೋಲುಂಡರೆ ಸಹಜವಾಗಿಯೇ ಶಿವಕುಮಾರ್ ಅವರಿಗೆ ಹಿನ್ನಡೆಯಾಗುತ್ತದೆ.