Asianet Suvarna News Asianet Suvarna News

ದೇಶದ ಆರ್ಥಿಕತೆಗೆ ಸಿರಿವಂತರಷ್ಟೇ ಅಲ್ಲ; ಉದ್ಯಮಶೀಲರ ನೆರವೂ ಬೇಕು; ರವಿ ಹೆಗಡೆ

  • ದೇಶದ ಆರ್ಥಿಕತೆಗೆ ಲಕ್ಷಾಂತರ ಮಂದಿ ಉದ್ಯಮಶೀಲರ ನೆರವು ಬೇಕು
  • ನಾವು ನಿಮ್ಮ ವಹಿವಾಟು ಮತ್ತು ಶ್ರೀಮಂತಿಕೆ ನೋಡಿ ಪ್ರಶಸ್ತಿ ನೀಡುತ್ತಿಲ್ಲ,
  • ಉತ್ತಮ ಮಾದರಿಯನ್ನು ಸಮಾಜದ ಮುಂದಿಡುವುದಕ್ಕಾಗಿ ಈ ಪ್ರಶಸ್ತಿ: ರವಿ ಹೆಗಡೆ
Karnataka business award 2022 at mysuru ravi hegde speech rav
Author
First Published Sep 21, 2022, 1:16 PM IST

ಮೈಸೂರು (ಸೆ.21) : ದೇಶದ ಆರ್ಥಿಕತೆಯ ಚಕ್ರ ತಿರುಗಲು ಬಹುರಾಷ್ಟ್ರೀಯ ಕಂಪನಿ ಮಾಲೀಕರಿಂದ ಮಾತ್ರ ಸಾಧ್ಯವಿಲ್ಲ, ದೇಶದ ಲಕ್ಷಾಂತರ ಮಂದಿ ಉದ್ಯಮಶೀಲರ ನೆರವೂ ಬೇಕಾಗುತ್ತದೆ. ಅಂತಹ ಉದ್ಯಮಶೀಲರನ್ನು ಸಮಾಜದ ಮುಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಮೂಹ ಸಂಸ್ಥೆಗಳ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹೇಳಿದರು.

ಬೆಂಗ್ಳೂರಿನಂತೆ ಅಧ್ವಾನಗಳ ನಗರ ಆಗದಿರಲಿ ಬೆಳಗಾವಿ: ರವಿ ಹೆಗಡೆ

ನಗರದ ಪ್ರತಿಷ್ಠಿತ ರಾರ‍ಯಡಿಸನ್‌ ಬ್ಲೂ ಹೊಟೇಲ್‌ನಲ್ಲಿ ನಡೆದ ಬಿಸಿನೆಸ್‌ ಅವಾರ್ಡ್‌ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಆರಂಭದಲ್ಲಿ ಉದ್ಯಮ ಕ್ಷೇತ್ರ ಎಂದ ಕೂಡಲೇ ಟಾಟಾ, ಬಿರ್ಲಾ, ಅಂಬಾನಿ, ಅದಾನಿ, ಮಹೀಂದ್ರಾಸ್‌, ಬಜಾಜ್‌, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಎನ್‌.ಆರ್‌. ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜೀ ಮುಂತಾದ ದೊಡ್ಡ ಹೆಸರು ಹೇಳುತ್ತೇವೆ. ಇವರು ಆಯಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಭಾರತಕ್ಕೆ ಮಾತ್ರವಲ್ಲೆ ವಿಶ್ವ ಮಟ್ಟದಲ್ಲಿಯೂ ಅವರಿಗೆ ದೊಡ್ಡ ಹೆಸರಿದೆ. ಆದರೆ ದೇಶದ ಆರ್ಥಿಕ ಶಕ್ತಿ ತಿರುಗಲು ಇವರಷ್ಟೇ ಸಾಕೆ, ಖಂಡಿತ ಸಾಕಾಗುವುದಿಲ್ಲ, ಇವರಷ್ಟೇ ಉದ್ಯಮಶೀಲರಾದ ತಾವು ಮುಖ್ಯ. ದೇಶದಲ್ಲಿನ ಲಕ್ಷಾಂತರ ಮತ್ತು ಕೋಟ್ಯಂತರ ಮಂದಿ ಉದ್ಯಮಶೀಲರು ಆರ್ಥಿಕ ಶಕ್ತಿ ಹೆಚ್ಚಿಸುತ್ತಿದ್ದಾರೆ ಎಂದರು.

ಆರ್ಥಿಕ ಆರೋಗ್ಯ ಸರಿಯಾಗಬೇಕಾದರೆ ಸಂಪತ್ತು ಕೇವಲ ದೊಡ್ಡವರ ಬಳಿಯೇ ಸೇರಬಾರದು. ಎಲ್ಲರಲ್ಲೂ ಹಂಚಿ ಹೋಗಬೇಕು. ಆದ್ದರಿಂದ ಬಹುದೊಡ್ಡ ಶ್ರೀಮಂತರ ಜೊತೆಗೆ ಉದ್ಯಮ ಶೀಲರೂ ಬೇಕಾಗುತ್ತಾರೆ. ಉದ್ದಿಮೆದಾರರು ಎಂದ ಕೂಡಲೇ ದುಡ್ಡು ಮಾಡಿದ್ದಾರೆ, ಬಂಡವಾಳಶಾಹಿಗಳು ಎಂಬ ಮಾತು ಬರುತ್ತದೆ. ಅವರ ಕೊಡುಗೆಯನ್ನು ಸ್ಮರಿಸುವುದಕ್ಕಿಂತ ಹೆಚ್ಚಾಗಿ ಶ್ರೀಮಂತಿಕೆ ಬಗ್ಗೆ ಮಾತು ಹೋಗುತ್ತದೆ. ಆದರೆ ಕೊಡುಗೆಗೆ ಗೌರವ, ಮಾನ್ಯತೆ ಸಿಗುವುದಿಲ್ಲ ಎಂಬುದು ಗಮನಕ್ಕೆ ಬಂದಾಗ ನಾವು ಈ ಪ್ರಶಸ್ತಿ ಆರಂಭಿಸಿದೆವು ಎಂದು ಅವರು ಹೇಳಿದರು.

ನಾವು ನಿಮ್ಮ ವಹಿವಾಟು ಮತ್ತು ಶ್ರೀಮಂತಿಕೆ ನೋಡಿ ಪ್ರಶಸ್ತಿ ನೀಡುತ್ತಿಲ್ಲ. ನಾವು ಹೇಳಿಕೇಳಿ ಪತ್ರಕರ್ತರು. ನಾವು ಬೇರೆ ಬೇರೆ ಮಾದರಿಯನ್ನು ತೆಗೆದುಕೊಂಡು ಬಂದು, ಉತ್ತೇಜಿಸಲು ಪ್ರಶಸ್ತಿ ಕೊಡುತ್ತಿದ್ದೇವೆ. ಪ್ರಶಸ್ತಿ ನೆಪಮಾತ್ರ, ಅತ್ಯುತ್ತಮ ಮಾದರಿಯನ್ನು ಸಮಾಜದ ಮುಂದೆ ಇಡಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಅಭಿವೃದ್ಧಿ, ತಂತ್ರಜ್ಞಾನ, ಕೈಗಾರಿಕೆ ಬೆಂಗಳೂರಿಗೆ ಮಾತ್ರವಲ್ಲ, ಹೊರಗೂ ಹೋಗಬೇಕು ಎಂದು ಸರ್ಕಾರಕ್ಕೆ ಬುದ್ಧಿ ಮಾತು ಹೇಳಿದ್ದೇವೆ. ಆದರೆ ದ್ವಿತೀಯ ದರ್ಜೆ ನಗರಗಳ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು ಎಂದು ಕೇಳಿಕೊಂಡಾಗ ಈ ವರ್ಷದಿಂದ ಈ ಪ್ರಶಸ್ತಿಯನ್ನು ಬೆಂಗಳೂರಿನ ನಂತರದ ನಗರಕ್ಕೂ ಕೊಂಡೊಯ್ಯಲು ತೀರ್ಮಾನಿಸಿದೆವು. ಅದರಂತೆ ಹುಬ್ಬಳ್ಳಿಯಲ್ಲಿ ಪ್ರಶಸ್ತಿ ನೀಡಲಾಗಿದೆ. ಈಗ ಮೈಸೂರಿಗೆ ಬಂದಿದ್ದೇವೆ. ಭಾರತ ಈಗಾಗಲೇ ಬ್ರಿಟನ್‌ ದಾಟಿ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. 3 ಟ್ರಿಲಿಯನ್‌ನಿಂದ 5 ಟ್ರಿಲಿನಯ್‌ಗೆ ಹೋಗುತ್ತಿದೆ ಎಂದು ಅವರು ಹೇಳಿದರು.

Karntaka Business Awards 2022 : ರವಿ ಹೆಗಡೆ, ಪ್ರತಾಪ್ ಸಿಂಹ ಸೇರಿ 16 ಉದ್ಯಮಿಗಳಿಗೆ ಅವಾರ್ಡ್‌

ನಂತರ ಕಾರ್ಯಕ್ರಮದ ಅತಿಥಿಗಳನ್ನು ಪರಿಚಯಿಸಿದ ರವಿ ಹೆಗಡೆ ಅವರು, ಸಂಸದ ಪ್ರತಾಪ ಸಿಂಹ ಅವರನ್ನು ಕುರಿತು ಮಾತನಾಡಿ, ಬೆಂಗಳೂರು- ಮೈಸೂರು ರಸ್ತೆ ವಿಸ್ತರಣೆ ಕಾರ್ಯ ಇತ್ತೀಚಿನದಲ್ಲ, 30 ವರ್ಷದ ಹಿಂದಿನದು. ಆಗ ನಾನು ಪತ್ರಿಕೋದ್ಯಮಕ್ಕೆ ಬಂದಾಗಿನಿಂದಲೂ ಇದೆ. ಈ ಸಂಬಂಧ ಹಲವು ಹಗರಣಗಳು ನಡೆದು ಹೋಗಿವೆ. ಆದರೆ ಸಂಸದ ಪ್ರತಾಪ ಸಿಂಹ ಜಯಗಳಿಸಿದ ಮೊದಲ ಅವಧಿಯಲ್ಲಿ ಈ ಬಗ್ಗೆ ಮಾತನಾಡಿರಲಿಲ್ಲ. ಕೇಳಿದರೆ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದರು. ನನಗೆ ನಂಬಿಕೆ ಇರಲಿಲ್ಲ. ಆದರೆ ಎರಡನೇ ಅವಧಿ ಮುಗಿಯುವುದರೊಳಗೆ ರಸ್ತೆ ವಿಸ್ತರಣೆಯು ಮುಗಿದು ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಈ ದಶಪಥದ ಮೂಲಕ ಈ ಪ್ರದೇಶದ ಆರ್ಥಿಕತೆಯೂ ವಿಸ್ತಾರಗೊಳ್ಳಲಿದೆ ಎಂದು ಹೇಳಿದರು.

Follow Us:
Download App:
  • android
  • ios