ದೇಶದ ಅತ್ಯಂತ ಪ್ರಮುಖ ಐಟಿ ಕಂಪನಿಯಾಗಿರುಗ ಇನ್ಫೋಸಿಸ್‌ಗೆ ಹುಬ್ಬಳ್ಳಿ-ಧಾರವಾಡದಲ್ಲಿ ನೀಡಲಾಗಿರುವ 58 ಎಕರೆ ಪ್ರದೇಶವನ್ನು ಸರ್ಕಾರ ವಾಪಾಸ್‌ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. 

ಬೆಂಗಳೂರು (ಫೆ.14): ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್‌ ಕಂಪನಿಗೆ ಹುಬ್ಬಳ್ಳಿಯಲ್ಲಿ ನೀಡಿರುವ ಜಾಗವನ್ನು ಸರ್ಕಾರ ವಾಪಾಸ್‌ ಪಡೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಇನ್ಫೋಸಿಸ್ ಸಂಸ್ಥೆಯನ್ನು ಈ ವಿಚಾರವಾಗಿ ಟೀಕೆ ಮಾಡಿದ್ದು, ತಮ್ಮ ತವರು ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 58 ಎಕರೆ ಭೂಮಿಯನ್ನು ತೆಗೆದುಕೊಂಡರೂ ಉನ್ನತ ಐಟಿ ಕಂಪನಿ ಇಲ್ಲಿಯವರೆಗೂ ಒಂದೇ ಒಂದು ಉದ್ಯೋಗವನ್ನೂ ಸೃಷ್ಟಿ ಮಾಡಿಲ್ಲ. ಈ ಕಾರಣಕ್ಕಾಗಿ ಈ ಕಂಪನಿಗೆ ನೀಡಿರುವ ಜಮೀನು ವಾಪಸ್ ಪಡೆಯುವಂತೆಯೂ ಒತ್ತಾಯಿಸಿದ್ದಾರೆ. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಬೆಲ್ಲದ್, ನನ್ನ ಕ್ಷೇತ್ರದಲ್ಲಿ ಕೈಗಾರಿಕಾ ಎಸ್ಟೇಟ್‌ ಇದೆ, ಇನ್ಫೋಸಿಸ್ 58 ಎಕರೆ ಭೂಮಿಯನ್ನು ತೆಗೆದುಕೊಂಡಿದ್ದು, ಇಲ್ಲಿಯವರೆಗೂ ಒಂದೇ ಒಂದು ಉದ್ಯೋಗವನ್ನು ನೀಡಿಲ್ಲ, ಆ ಭೂಮಿಯನ್ನು ಅವರಿಂದ ಹಿಂದಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.

ಅಂದಾಜು ಎಕರೆಗೆ 1 ಕೋಟಿ ರೂಪಾಯಿ ಮೊತ್ತದಲ್ಲಿದ್ದ ರೈತರ ಜಮೀನನ್ನು ನಾನು ಇನ್ಫೋಸಿಸ್‌ ಸಂಸ್ಥೆಗೆ ಸರ್ಕಾರದ ವತಿಯಿಂದ 35 ಲಕ್ಷ ರೂಪಾಯಿಗೆ ನೀಡಲಾಗಿತ್ತು ಎಂದು ಶಾಸಕರು ಹೇಳಿದ್ದಾರೆ. "ರೈತರಿಗೆ ಅವರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ ಎಂದು ನಾನು ಭರವಸೆ ನೀಡಿದ್ದೇನೆ. ಇಂದು ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳಿದರು. ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಮಧ್ಯೆ ಬೆಲ್ಲದ್ ಅವರು ಈ ಹೇಳಿಕೆ ನೀಡಿದ್ದಾರೆ.

ಕೇವಲ ಇನ್ಫೋಸಿಸ್‌ ಮಾತ್ರವಲ್ಲ ಏರ್‌ಪೋರ್ಟ್‌ ಅಥಾರಿಟಿ ಕೂಡ ಒಂದೇ ಒಂದು ಉದ್ಯೋಗ ನೀಡದೇ ನಮ್ಮ ಜನರಿಗೆ ದ್ರೋಹ ಮಾಡುತ್ತಿದೆ. ಇವರಿಗೆಲ್ಲಾ ದಂಡ ಬಿದ್ದರೆ ಮಾತ್ರವೇ ಬುದ್ದಿ ಬರುವುದು. ಉದ್ಯೋಗ ಸಿಗದೇ ಇರುವುದಕ್ಕೆ ರೈತರು ನ್ಯಾಯಾಲಯದ ಮೊರೆ ಹೋಗುವವರಿದ್ದರು. ಅವರನ್ನು ನಾನು ಸಮಾಧಾನ ಮಾಡಿದ್ದೆ ಎಂದು ಬೆಲ್ಲದ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಜಮೀನನ್ನು ಪಡೆದುಕೊಂಡು ಸಂಸ್ಥೆ ಕಾರ್ಯಾರಂಭ ಮಾಡಿದ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ಏನಾದರೂ ಕ್ರಮ ತೆಗೆದುಕೊಂಡಲ್ಲಿ ಕೋರ್ಟ್‌ನಿಂದ ಐದೇ ನಿಮಿಷದಲ್ಲಿ ಸ್ಟೇ ತರುತ್ತಾರೆ. ನೌಕರಿ ಕೊಡದೇ ಇದ್ದಲ್ಲಿ ಸಂಸ್ಥೆಯನ್ನು ಮುಚ್ಚಲು ಸಾಧ್ಯವಾಗೋದಿಲ್ಲ. ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ದಂಡ ವಿಧಿಸಿದರೆ, ರೈತರಿಗೂ ಇದರಿಂದ ಸಹಾಯವಾಗಬಹುದು ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಮಗಳು ಅಕ್ಷತಾ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ನಾರಾಯಣ ಮೂರ್ತಿ; ಸರಳತೆ ಮೆಚ್ಚಿದ ನೆಟ್ಟಿಗರು

ಈ ಬಗ್ಗೆ ಮಾತನಾಡಿರುವ ಸಚಿವ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ, 'ಇನ್ಫೋಸಿಸ್ ಆಗಲಿ, ವಿಮಾನ ನಿಲ್ದಾಣ ಪ್ರಾಧಿಕಾರವೇ ಆಗಲಿ ಸ್ಥಳೀಯರಿಗೆ ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ಕಡ್ಡಾಯವಾಗಿ ಕೆಲಸವನ್ನು ನೀಡಬೇಕಾಗುತ್ತದೆ. ಅಂಥ ಕಾನೂನೇ ಇದೆ. ಉದ್ಯೋಗ ನೀಡದೇ ಇದ್ದರೆ ಅದು ಉಲ್ಲಂಘನೆ ಆಗಲಿದೆ. ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರವೇ ನೇರವಾಗಿ ನಿರ್ವಹಿಸುತ್ತಿದ್ದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಟಾಪ್‌ 10 ಕಂಪನಿಗಳಿವು!