ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮದ ಭಾಗವಾಗಿ ಕರ್ಣಾಟಕ ಬ್ಯಾಂಕ್‌ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ನಿರಂತರ ಒಡನಾಟದಲ್ಲಿ ಇದ್ದು ಕನ್ನಡ ಭಾಷೆ, ನಾಡು- ನುಡಿ, ಸಂಸ್ಕೃತಿಯ ಅಭ್ಯುದಯಕ್ಕೆ ಸಹಕಾರ ನೀಡುತ್ತಾ ನಾಡಿಗೆ ಮಾದರಿಯಾಗಿದೆ ಎಂದ ಡಾ.ಮಹೇಶ್‌ ಜೋಶಿ 

ಬೆಂಗಳೂರು(ಜ.13): ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಕೇಂದ್ರ ಕಚೇರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಂಪ್ಯೂಟರ್‌ಗಳು ಹಾಗೂ ಪೀಠೋಪಕರಣಗಳ ಖರೀದಿಗೆ ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆ(ಸಿಎಸ್‌ಆರ್‌) ನಿಧಿಯ ಅಡಿಯಲ್ಲಿ ಕರ್ಣಾಟಕ ಬ್ಯಾಂಕ್‌ 20 ಲಕ್ಷ ರು.ಗಳನ್ನು ಮಂಜೂರು ಮಾಡಿದೆ.

ಗುರುವಾರ ಕಸಾಪ ಕೇಂದ್ರ ಕಚೇರಿಯಲ್ಲಿ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ಅವರು ಕರ್ಣಾಟಕ ಬ್ಯಾಂಕಿನ ಚಾಮರಾಜಪೇಟೆ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಕುಮಾರಸ್ವಾಮಿ ಅವರಿಂದ ಸಿಎಸ್‌ಆರ್‌ ನಿಧಿಯಡಿ 20 ಲಕ್ಷ ರು.ಗಳ ಮಂಜೂರಾತಿ ಪತ್ರ ಸ್ವೀಕರಿಸಿ ಮಾತನಾಡಿದರು. ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮದ ಭಾಗವಾಗಿ ಕರ್ಣಾಟಕ ಬ್ಯಾಂಕ್‌ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ನಿರಂತರ ಒಡನಾಟದಲ್ಲಿ ಇದ್ದು ಕನ್ನಡ ಭಾಷೆ, ನಾಡು- ನುಡಿ, ಸಂಸ್ಕೃತಿಯ ಅಭ್ಯುದಯಕ್ಕೆ ಸಹಕಾರ ನೀಡುತ್ತಾ ನಾಡಿಗೆ ಮಾದರಿಯಾಗಿದೆ ಎಂದರು.

ಆರ್ಥಿಕ ನೆರವು: ಕರ್ಣಾಟಕ ಬ್ಯಾಂಕ್‌-ಹ್ಯುಂಡೈ ಸಂಸ್ಥೆ ಜತೆ ಒಡಂಬಡಿಕೆ

ಕರ್ಣಾಟಕ ಬ್ಯಾಂಕ್‌ ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆ (ಸಿಎಸ್‌ಆರ್‌) ನಿಧಿಯ ಅಡಿಯಲ್ಲಿ ಈಗಾಗಲೇ ಮೊದಲ ಹಂತವಾಗಿ 17.48 ಲಕ್ಷ ರು. ನೀಡಿದ್ದು, ಈ ಬಾರಿ 2.51 ಲಕ್ಷ ರು. ನೀಡುವುದರೊಂದಿಗೆ ಒಟ್ಟು 20 ಲಕ್ಷ ರು.ಗಳನ್ನು ಮಂಜೂರು ಮಾಡಿದೆ ಎಂದು ಕರ್ಣಾಟಕ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ನಾಗರಾಜ್‌ ಉಪಾಧ್ಯಾಯ ತಿಳಿಸಿದರು. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಚಾಮರಾಜಪೇಟೆ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಕುಮಾರಸ್ವಾಮಿ, ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್‌ಪಾಂಡು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.