ಶಾಸನ ಸಭೆಯ ಗೌರವ ಕಾಪಾಡಿ, ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ
ಸ್ಪೀಕರ್ ಯು.ಟಿ.ಖಾದರ್ ಇದೇ ಮೊದಲ ಭಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು.

ನವದೆಹಲಿ (ಜೂ.8): ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ಪೀಕರ್ ಯು.ಟಿ.ಖಾದರ್ (UT khader ) ಇದೇ ಮೊದಲ ಭಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ (vice president jagdeep dhankhar) ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು. ಇದೇ ವೇಳೆ ಯು.ಟಿ ಖಾದರ್ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಕಿರಿಯ ವಯಸ್ಸಿನಲ್ಲಿ ವಹಿಸಿಕೊಂಡಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲೇ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸುದೈವ. ಸ್ಪೀಕರ್ ಹುದ್ದೆಯಲ್ಲಿ ನಿಮಗೆ ಸಿಗುವ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಅನುಭವ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಸಭಾಧ್ಯಕ್ಷರಾಗಿ ಕಾರ್ಯ ಸಲ್ಲಿಸುವಷ್ಟು ದಿನ ಸದನದ ಘನತೆ, ಗೌರವ ಎತ್ತಿ ಹಿಡಿದು ಶಾಸಕರ ಹಾಗೂ ರಾಜ್ಯದ ಜನರ ಮನಗೆಲ್ಲಿ ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯದ ಜನರ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ನನಗೆ ಅಪಾರ ಗೌರವವಿದ್ದು ಶಾಸನ ಸಭೆಯ ನಡವಳಿಕೆಯ ಯಾವುದೇ ಮಾರ್ಗದರ್ಶನಕ್ಕಾಗಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಸ್ಪೀಕರ್ ಯು.ಟಿ.ಖಾದರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Lok Sabha Speaker Om Birla) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಈ ಬ್ಗಗೆ ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ.