ವಿಧಾನಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 'ತಾನು ಸೂಕ್ಷ್ಮವಾಗಿರುವುದರಿಂದಲೇ ರಾಜಕೀಯದಲ್ಲಿ ಉಳಿದಿದ್ದೇನೆ' ಎಂದು ಹೇಳುವ ಮೂಲಕ ಗಮನ ಸೆಳೆದರು. ಬಿಜೆಪಿ ಸದಸ್ಯರು ಕಾಲೆಳೆದಾಗ, ಸಂದರ್ಭ ಬಂದಾಗ ಗಟ್ಟಿಯಾಗಿ ಮಾತನಾಡುತ್ತೇನೆ ಎಂದು ನಗುತ್ತಲೇ ಉತ್ತರಿಸಿದರು.

ವಿಧಾನಸಭೆ (ಮಾ.17) ‘ನಾನು ತುಂಬಾ ಸೂಕ್ಷ್ಮ ಇರುವುದಕ್ಕೇ ಇನ್ನೂ ಉಳಿದಿದ್ದೇನೆ. ನಾನು ಸುಮ್ಮನೆ ಎಲ್ಲದಕ್ಕೂ ಮಾತನಾಡುವುದಿಲ್ಲ. ಆದರೆ, ಸಂದರ್ಭ ಬಂದಾಗ ಖಂಡಿತ ಗಟ್ಟಿಯಾಗಿ ಮಾತನಾಡುತ್ತೇನೆ’ ಎಂಬ ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರ ಮಾತು ಗಮನ ಸೆಳೆಯಿತು. 

Add Asianetnews Kannada as a Preferred SourcegooglePreferred

ಬಿಜೆಪಿಯ ವೇದವ್ಯಾಸ ಕಾಮತ್‌, ಮಂಗಳೂರಿನಲ್ಲಿ ಪೊಲೀಸ್ ಚೌಕಿ ಅಳವಡಿಸಿ ಜಾಹೀರಾತು ಹಾಕಲು ಇಲ್ಲಿಂದ ಸೂಚನೆ ನೀಡಿದ್ದಾರೆ ಎಂದು ದೂರಿದರು. ಆಗ ಡಾ। ಜಿ.ಪರಮೇಶ್ವರ್, ‘ನಾವು ಯಾವ ಸೂಚನೆಯನ್ನೂ ನೀಡಿಲ್ಲ. ನೀವು ಹೇಳಿದ್ದನ್ನು ಸರಿ ಮಾಡಿಕೊಳ್ಳಿ’ ಎಂದರು. ಆಗ ವೇದವ್ಯಾಸ ಕಾಮತ್‌, ‘ಕ್ಷಮಿಸಿ ಸರ್‌, ನಿಮ್ಮ ಹೆಸರೇ ತೆಗೆದುಕೊಂಡಿಲ್ಲ’ ಎಂದರು. ಬಿಜೆಪಿ ಸದಸ್ಯ ಸುರೇಶ್‌ಗೌಡ, ‘ನೀವು ಇಷ್ಟು ಸೂಕ್ಷ್ಮ ಆದರೆ ಹೇಗೆ ಸರ್’ ಎಂದು ಪರಮೇಶ್ವರ್ ಕಾಲೆಳೆದರು. ಪರಮೇಶ್ವರ್, ‘ನಾನು ಸೂಕ್ಷ್ಮ ಇರುವುದಕ್ಕೆ ಇನ್ನೂ ಸರ್ವೈವ್‌ ಆಗಿದ್ದೇನೆ’ ಎಂದರು.

ಬಿಜೆಪಿಯ ಸುನಿಲ್‌ ಕುಮಾರ್, ‘ಉಪಚುನಾವಣೆ ನಂತರ ನಿಮಗೆ ಅವಕಾಶ ಬರುತ್ತದೆ. ಆಗ ಗಟ್ಟಿಯಾಗಿ ಮಾತನಾಡಿ. ನಿಮಗೆ ಅವಕಾಶ ಒದಗಿಬರಬೇಕು ಆ ರೀತಿ ಮಾತನಾಡಿ’ ಎಂದು ಕಾಲಳೆದರು. ಅದಕ್ಕೆ ಪರಮೇಶ್ವರ್‌, ‘ಖಂಡಿತ ಗಟ್ಟಿಯಾಗಿಯೇ ಮಾತನಾಡುತ್ತೇನೆ’ ಎಂದು ನಕ್ಕು ಸುಮ್ಮನಾದರು.