ಕರ್ನಾಟಕ ಸರ್ಕಾರದಿಂದ ಈ ಹಿಂದೆ ಜಾರಿಗೊಳಿಸಲಾದ 30ಕ್ಕೂ ಅಧಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸುವ ಹಾಗೂ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ವಿಧಾನಸಭೆ (ಫೆ.21): ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹಲವು ವಿಧೇಯಕಗಳನ್ನು ಮಂಡಿಸಿ ಅಂಗೀಕಾರಕ್ಕೆ ತರಲಾಯಿತು. ಭೂಕಂದಾಯ ತಿದ್ದುಪಡಿ ವಿಧೇಯಕ-2024, ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2024, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ರಾಜ್ಯದ 30 ಹಳೆಯ ಕಾನೂನುಗಳನ್ನು ನಿಷ್ಕ್ರಿಯಗೊಳಿಸುವ ವಿಧೇಯಕ-2024, 2015ರ ಕುಲಾಂತರ ತಳಿ ವಿಧೇಯಕ ವಾಪಸಾತಿ, ಹುಕ್ಕಾಬಾರ್ ನಿಷೇಧ ಮತ್ತು ಸಿಗರೇಟ್ ಮಾರಾಟ ನಿಯಮಾವಳಿ ಸೇರದಂತೆ ಹಲವು ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಯಿತು.

Add Asianetnews Kannada as a Preferred SourcegooglePreferred

ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹಲವು ಇಲಾಖೆಗಳ ವಿವಿಧ ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ಕೆಲವು ವಿಧೇಯಕಗಳನ್ನು ವಿಪಕ್ಷಗಳೂ ಒಪ್ಪಿಕೊಂಡರೆ, ಮತ್ತೆ ಕೆಲವು ವಿಧೇಯಕಗಳಿಗೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ವಿರೋಧದ ನಡುವೆಯೂ ಪೂರ್ಣ ಬಹುಮತವಿರುವ ಕಾಂಗ್ರೆಸ್ ಸರ್ಕಾರಿದಿಂದ ಹಲವು ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ರಾಜ್ಯಪಾಲರ ಅಂಕಿತ ಸಿಕ್ಕ ನಂತರ ವಿಧೇಯಕಗಳು ಕಾಯ್ದೆಗಳಾಗಿ ಜಾರಿಗೆ ಬರುತ್ತವೆ.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯಗೊಳಿಸಿದ ಸರ್ಕಾರ; ತಿದ್ದುಪಡಿ ಆದೇಶದಲ್ಲಿ ಯೂಟರ್ನ್!

ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2024: ಕರ್ನಾಟಕ ಪೊಲೀಸ್‌ ಇಲಾಖೆಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆ ಅವಧಿ ಕನಿಷ್ಠ 2 ವರ್ಷಕ್ಕೆ ನಿಗದಿಗೊಳಿಸಲು ಅವಕಾಶ ಮಾಡಿಕೊಡುವ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲಾಯಿತು. ಈ ವಿಧೇಯಕದ ಮೇಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚರ್ಚೆ ಮಾಡಿದರು. ಪೊಲೀಸರ ವರ್ಗಾವಣೆ ಅವಧಿ 1 ವರ್ಷದಿಂದ 2 ವರ್ಷಕ್ಕೆ ಏರಿಕೆ ಮಾಡಲು ಅವಕಾಶ ಇರುವ ವಿಧೇಯಕವಾಗಿದೆ. ಒಂದು ವರ್ಷವಾದ ನಂತರ ವರ್ಗಾವಣೆ ಮಾಡಬೇಕು ಅಂತ ಹಾಲಿ ನಿಯಮ ಇದೆ. ಒಂದೇ ವರ್ಷಕ್ಕೆ ವರ್ಗಾವಣೆಯಾದರೆ ಪ್ರಕರಣಗಳ ತನಿಖೆ, ವಿಚಾರಣೆಗೆ ತೊಡಕು ಆಗಲಿದೆ. ಆದ್ದರಿಂದ ಪೊಲೀಸರ ವರ್ಗಾವಣೆ ಅವಧಿಯಲ್ಲಿ 2 ವರ್ಷಕ್ಕೆ ಏರಿಕೆ ಮಾಡುವ ವಿಧೇಯಕ ಮಂಡಿಸಲಾಗುತ್ತಿದೆ ಎಂದರು. ಇದನ್ನು ವಿಪಕ್ಷ ಸದಸ್ಯರೂ ಸ್ವಾಗತ ಮಾಡಿದರು. ಈ ವಿಧೇಯಕಕ್ಕೆ ಅಂಗೀಕಾರ ಕೊಡಲಾಯಿತು.

ಹಳೆಯ ಕಾನೂನುಗಳ ರದ್ದುಗೊಳಿಸಲು ವಿಧೇಯಕ: ಕರ್ನಾಟಕದ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ-2024 ಅನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಡನೆ ಮಾಡಿದರು. ಹಳೆಯ ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ಅವಕಾಶ ನೀಡುವ ವಿಧೇಯಕ ಇದಾಗಿದೆ. ಕಾಲಾನುಕ್ರಮದಲ್ಲಿ ಪ್ರಸ್ತುತತೆ ಕಳೆದುಕೊಂಡ, ಬಳಕೆಯಲ್ಲಿರದ ಕಾನೂನುಗಳ ನಿಷ್ಕ್ರಿಯಗೊಳಿಸಲು ಈ ವಿಧೇಯಕದಲ್ಲಿ ಅವಕಾ ಕೊಡಲಾಗಿದೆ. ರಾಜ್ಯ ಕಾನೂನು ಆಯೋಗದ ಶಿಫಾರಸು ಅನ್ವಯ ಹಳೆಯ ಕಾನೂನುಗಳ ರದ್ದುಗೊಳ್ಳಲಿವೆ. ಸ್ಟೇಟ್ ಬ್ಯಾಂಕ್ ಅಧಿನಿಯಮ, ಹೈದರಾಬಾದ್ ಅಧಿನಿಯಮ ಎಲ್-19, ಜಾಗೀರುಗಳ ರದ್ದತಿ, ಪಿಂಚಣಿ ಅಧಿನಿಯಮ, ಟ್ರಾಮ್ ಮಾರ್ಗಗಳ ಅಧಿನಿಯಮ, ಮೈಸೂರು ಅಧಿನಿಯಮ, ನಂಬೂದರಿ ಅಧಿನಿಯಮ, ಬಾಂಬೆ ತಿದ್ದುಪಡಿ ಅಧಿನಿಯಮ, ದೇವಾಲಯಗಳ ಪ್ರವೇಶ ಅಧಿಕೃತಗೊಳಿಸುವುವಿಕೆ ಅಧಿನಿಯಮ ಸೇರಿ 30 ಕಾನೂನುಗಳನ್ನು ನಿಷ್ಕ್ರಿಯಗೊಳಿಸುವ ವಿಧೇಯಕ ಇದಾಗಿದೆ.

ಅನಧಿಕೃತ ಹುಕ್ಕಾಬಾರ್ ನಡೆಸಿದರೆ 3 ವರ್ಷ ಜೈಲು, 1 ಲಕ್ಷ ರೂ. ದಂಡ: ರಾಜ್ಯದಲ್ಲಿ ಈಗಾಗಲೇ ಹುಕ್ಕಾ ಬಾರ್ ನಿಷೇಧಿಸಲಾಗಿದೆ. ಒಂದು ವೇಳೆ ಅನಧಿಕೃತ ನಡೆಸಿದರೆ ಒಂದು/ಮೂರು ವರ್ಷ ಜೈಲು ಶಿಕ್ಷೆ ವಿಧಿಸುವುದು. ಜೊತೆಗೆ, 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ವಿಧೇಯಕ ಅಂಗೀಕರಿಸಲಾಯಿತು. ಇದರಲ್ಲಿ 21 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಹಾಗೂ ಶಾಲೆಯಿಂದ 100 ಮೀಟರ್ ದೂರದಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂಬ ನಿಯಮಗಳೂ ಸೇರಿವೆ. ಹುಕ್ಕಾಬಾರ್ ನಿಷೇಧ, ಸಿಗರೇಟ್ ಸೇವನೆ, ವ್ಯಾಪಾರ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕ ಮಂಡಿಸಲಾಗಿದ್ದು, ಇದಕ್ಕೂ ಅಂಗೀಕಾರ ಸಿಕ್ಕಿದೆ.

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್; 135 ಸೀಟುಗಳಿದ್ದರೂ ಸರ್ಕಾರಕ್ಕೆ ಕುತ್ತು ಬಂತಾ?

2015ನೇ ಸಾಲಿನ ಕುಲಾಂತರ ತಳಿ ವಿಧೇಯಕ ವಾಪಸ್: 2024ನೇ ಸಾಲಿನ ಭೂಕಂದಾಯ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಯಿತು. ನಂತರ ಈ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು. ಇದೇ ವೇಳೆ 2015ನೇ ಸಾಲಿನ ಕುಲಾಂತರ ತಳಿ ವಿಧೇಯಕವನ್ನು ಸರ್ಕಾರದಿಂದ ವಾಪಸ್ ಪಡೆಯಲಾಯಿತು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಅಂಗೀಕರಿಸಲಾಯಿತು.