ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಒಂದೇ ಚೌಕಟ್ಟಿನಲ್ಲಿ ತೋರಿಸುವ ಕೃತಕ ಬುದ್ಧಿಮತ್ತೆ (AI) ರಚಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಲೇಖನವು ಆ ಮಹಾನ್ ಸಾಹಿತಿಗಳ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ನೆಟ್ಟಿಗರ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.

ಕನ್ನಡ ಸಾಹಿತ್ಯದ 8 ಜ್ಞಾನಪೀಠ ರತ್ನಗಳು.., ಯಾರು ಕಂಡಿರದ ದೃಶ್ಯ ಎಂಟು ಜನ ಮಹಾ ಕವಿಗಳು ಒಂದೇ ಜಾಗದಲ್ಲಿ ಇದನ್ನು ನೋಡಿದ ತಕ್ಷಣ ನಿಮ್ಮಮನಸ್ಸಿನಲ್ಲಿ ಏನು ಮೂಡುತಿದೆ ಎಂಬ ಟ್ಯಾಗ್‌ಲೈನ್ ಕೊಟ್ಟು ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟರ್ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸದ್ಬಳಕೆ ಕುರಿತು ನೆಟ್ಟಿಗರು ಕೊಂಡಾಡಿದ್ದಾರೆ. ಇನ್ನು ಕೆಲವರು ಮೊಸರಿನಲ್ಲಿಯೂ ಕಲ್ಲು ಹುಡುಕುವಂತೆ ಜ್ಞಾನಪೀಠ ವಿಜೇತರಾದ ಕವಿಗಳ ಬಗ್ಗೆಯೂ ಕೊಂಕಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಈವರೆಗೆ ಎಂಟು ಕನ್ನಡ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಕುವೆಂಪು (1967) - ಶ್ರೀ ರಾಮಾಯಣ ದರ್ಶನಂ

ದ. ರಾ. ಬೇಂದ್ರೆ (1973) - ನಾಕುತಂತಿ

ಶಿವರಾಮ ಕಾರಂತ (1977) - ಮೂಕಜ್ಜಿಯ ಕನಸುಗಳು

ಮಾಸ್ತಿ ವೆಂಕಟೇಶ ಅಯ್ಯಂಗಾರ್ (1983) - ಚಿಕ್ಕವೀರ ರಾಜೇಂದ್ರ

ವಿ. ಕೃ. ಗೋಕಾಕ್ (1990) - ಭಾರತ ಸಿಂಧೂ ರಶ್ಮಿ

ಯು. ಆರ್. ಅನಂತಮೂರ್ತಿ (1994) - ಸಮಗ್ರ ಸಾಹಿತ್ಯ

ಗಿರೀಶ್ ಕಾರ್ನಾಡ್ (1998) - ಸಮಗ್ರ ಸಾಹಿತ್ಯ

ಚಂದ್ರಶೇಖರ ಕಂಬಾರ (2010) - ಸಮಗ್ರ ಸಾಹಿತ್ಯ

ಕನ್ನಡ ಸಾಹಿತ್ಯಕ್ಕೆ ಅಷ್ಟದಿಕ್ಪಾಲಕರು

ಈ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು, ‘ಇವರನ್ನು ಎಲ್ಲೆಲ್ಲಿಂದ ಹಿಡ್ಕಂಡು ಬಂದ್ರಪ್ಪ,,, ದೇವ್ರೇ ಬಲ್ಲ. ಸ್ವಲ್ಪನಾದರೂ ವಿವರ ಕೊಡ್ರಪ್ಪ.ಗಿರೀಶ್ ಕಾರ್ನಾಡ್, ಯೂ. ಆರ್ ಅನಂತಮೂರ್ತಿ ನಕ್ಸಲ್ರಂತೆ ಯಾವ ಕಾಡಿಂದ ಹಿಡ್ಕಂಡ್ ಬಂದ್ರೀ,,,, ದ. ರಾ ಬೇಂದ್ರೆ, ಕೆ. ವಿ. ಪುಟ್ಟಪ್ಪ, ರೈಲಿನಲ್ಲೂ ಒಟ್ಟಿಗೆ ಕುಂತೋರಲ್ಲ ಇಲ್ಲಿ ಹ್ಯಾಂಗ್ರಿ,, ಕೂಡಿಸಿದಿರಪ್ಪಾ,, ಅಲ್ರಿ,, ಕಾರಂತಜ್ಜ ಯಕ್ಷಗಾನ ಮಾಡುವಾಗ, ಹ್ಯಾಂಗ್ ಹಿಡ್ಕೊಂಡ್ ಬಂದ್ರೀ, ನಮ್ಮ ಸಾಹಿತ್ಯದ ಆಸ್ತಿ ಮಾಸ್ತಿ, ಕಾಣದ ಕಡಲು ಕೊರೆದ ಜಿ, ಎಸ್, ಎಸ್.ಚಳುವಳಿ ಯಲ್ಲಿದ್ದ ವಿ. ಕೃ. ಗೋ, ಹ್ಯಾಗೆ ಬಂದ್ರಪ್ಪ ಪುರುಸೊತ್ತು ಮಾಡ್ಕಂಡು. ಬರೀ ಸಂಗ್ಯಾ ಬಾಳ್ಯಾ ನಾಟಕ ಆಡಿಕೊಂಡಿದ್ದ ಚಂದ್ರಶೇಖರ ಕಂಬಾರ ಎಲ್ಲಿಂದ ಬಂದ್ರೋ, ಅಬ್ಬಬ್ಬಾ ಭಾರಿ ಫೋಟೋ ಜಾದೂಗಾರರು, ನೀವು. ಕನ್ನಡ ಸಾಹಿತ್ಯದ ’ಅಷ್ಟ ದಿಕ್ಪಾಲರ ‘ ಒಟ್ಟಿಗೆ ಕೂರಿಸಿ " ಫೋಟೋ ಸೆರೆ ಮನೆಗೆ ( serimoni ) ಒಟ್ಟಿದ್ದೀರಿ. ಕನ್ನಡಿಗರ ತುಂಬು ಧನ್ಯವಾದಗಳು, ತಮಗೆ’ ಎಂದು ಶ್ಲಾಘಿಸಿದ್ದಾರೆ.

ಬೈರಪ್ಪನವರಿಗೆ ಜ್ಞಾನಪೀಠ ಕೊಡದಿರುವುದು ವಿಷಾದನೀಯ

ಮತ್ತೊಬ್ಬ ನೆಟ್ಟಿಗ ‘ನಮ್ಮ ಕರ್ನಾಟಕದ ಹೆಸರಾಂತ ಕಾದಂಬರಿಕಾರ. ಸಾಹಿತ್ಯ ಕ್ಷೇತ್ರದಲ್ಲಿ ಅನರ್ಘ್ಯ ರತ್ನ ಎನಿಸಿದ ದಿ. S.L.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ನೀಡದಿರುವುದು ವಿಷಾದನೀಯ. ಅವರ ಜೀವಿತ ಕಾಲದಲ್ಲಿ ಅವರ ಹಲವಾರು ಕಾದಂಬರಿಗಳನ್ನು ಓದಿದವರಿಗೆ....., ಅವರ ಅಪ್ರತಿಮ ಸಾಹಿತ್ಯ ಕೃಷಿಗಾಗಿ ಜ್ಞಾನಪೀಠ ಪ್ರಶಸ್ತಿ ದೊರಕಬೇಕೆಂಬ ಅಭಿಲಾಷೆ ಇತ್ತು. ಅವರೆಂದೂ ಯಾವ ಪ್ರಶಸ್ತಿಗಾಗಿ ಆಶೆ ಪಟ್ಟವರಲ್ಲ. ಯಾರ ಮೊರೆ ಹೋದವರಲ್ಲ. ಈ ಚಿತ್ರದಲ್ಲಿ ಅವರ ಭಾವ ಚಿತ್ರ ಇರಬೇಕಿತ್ತು ಅನಿಸದೇ ಇರಲಾರದು’ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು, ‘ಒಂದೆರಡು ಅನರ್ಹ ಎನಿ‌ಸಿಕೊಂಡವೂ ಗಟ್ಟಿ ಕಾಳಿನ ಜೊತೆ ಸೇರಿಕೊಂಡಿದ್ದು ವಿಷಾದನೀಯ. ನಿಜಕ್ಕೂ ನಗರ ನಕ್ಸಲರು ಜ್ಞಾನಪೀಠಕ್ಕೆ ಅರ್ಹರೆ ? ಆ ಜಾಗದಲ್ಲಿ ಭೈರಪ್ಪನವರು ಇರಬೇಕಾಗಿತ್ತು’ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರರು ಕಾರಂತ, ಅನಂತ ಮೂರ್ತಿ, ಗಿರೀಶ್ ಕಾರ್ನಾಡರು ಕವಿಗಳಲ್ಲ ಅವರೆಲ್ಲಾ ಸಾಹಿತಿಗಳು. ಆದರೂ, ಕನ್ನಡ ಸಾಹಿತ್ಯದ ಎಲ್ಲ ಜ್ಞಾನಪೀಠ ವಿಜೇತರಾದ ಎಂಟು ಮಂದಿಯನ್ನೂ ಒಟ್ಟಾಗಿ ನೋಡಲು ಚಂದ ಎಂದು ಕಾಮೆಂಟ್ ಮಾಡಿದ್ದಾರೆ.