ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ವಿರೋಧಿಸುವವರು ಕರ್ನಾಟಕದಿಂದ ಹೊರಹೋಗಬೇಕೆಂದು ಹೋರಾಟ ಸಮಿತಿಯ ಅಧ್ಯಕ್ಷರು ಎಚ್ಚರಿಸಿದ್ದಾರೆ. ಪರಿಸರ ನಾಶದ ನೆಪದಲ್ಲಿ ಯೋಜನೆ ವಿರೋಧಿಸುವುದು ಸರಿಯಲ್ಲ, ಇದು ಕುಡಿಯುವ ನೀರಿನ ಯೋಜನೆ ಎಂದು ಅವರು ಹೇಳಿದ್ದಾರೆ.

ರಾಮದುರ್ಗ (ಜೂ.5): ಪರಿಸರ ನಾಶದ ನೆಪದಲ್ಲಿ ಗೋವಾ ಪರವಾಗಿ ಮಾತನಾಡುವವರು ಕರ್ನಾಟಕದಿಂದ ಹೊರ ಹೋಗಬೇಕು. ಗೋವಾ ರಾಜ್ಯದಲ್ಲಿ ಆಶ್ರಯ ಪಡೆಯಬೇಕು ಎಂದು ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಗುಡುಗಿದರು.

Add Asianetnews Kannada as a Preferred SourcegooglePreferred

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರವಾದಿಗಳ ನೆಪದಲ್ಲಿ ಸಮಾಜ ಕಂಟಕ ಕೆಲಸ ಮಾಡುವುದು ಸರಿಯಲ್ಲ. ಕಳಸಾ-ಬಂಡೂರಿ ನಾಲೆಗಳ ತಿರುವು ಇಲ್ಲಿನ ಜನರ ಕುಡಿಯುವ ನೀರಿನ ಯೋಜನೆಯಾಗಿದೆ. ಇದರ ವಿರುದ್ಧ ಮಾತನಾಡುವ ವ್ಯಕ್ತಿಗಳನ್ನು ಈ ಭಾಗದ ಜನ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳಸಾ-ಬಂಡೂರಿ ನಾಲೆ ನಿರ್ಮಾಣದಿಂದ ಪರಿಸರ ನಾಶವಾಗುತ್ತದೆ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಈ ಭಾಗದ ರೈತರು ಮತ್ತು ಸಾರ್ವಜನಿಕರು ಪರಿಸರವಾದಿಗಳ ಸೋಗಿನಲ್ಲಿರುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕಳಸಾ-ಬಂಡೂರಿ ನಾಲೆಗಳನ್ನು ನಿರ್ಮಿಸಿದರೇ ಪರಿಸರ ನಾಶವಾಗುತ್ತದೆಂದು ಕೆಲವು ಪ್ರಗತಿಪರರ ಸೋಗಿನಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಯಾವುದೇ ಪರಿಸರ ನಾಶವಾಗುವುದಿಲ್ಲ. ನಾಲೆಗಳ ಸ್ಥಳಗಳನ್ನು ಪರಿಶೀಲಿಸದೆ ಎಲ್ಲೋ ಕುಳಿತು ಜನರ ಹಿತಕ್ಕೆ ಧಕ್ಕೆಯುಂಟು ಮಾಡಲು ಹೊರಟಿರುವುದು ಹೋರಾಟಗಾರರಿಗೆ ನೋವು ತಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಹತ್ತಾರು ವರ್ಷಗಳಿಂದ 7 ಜಿಲ್ಲೆಗಳ ಜನ, ರೈತರು, ಮಠಾಧೀಶರು, ರಾಜಕೀಯ ನಾಯಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪರಿಸರವಾದಿಗಳು ಎಂದು ಹೇಳಿಕೊಳ್ಳುವ ಕೆಲವರು ಮಾತ್ರ ನೀರು ತರುವಲ್ಲಿ ತಮಗೆ ಅವಕಾಶ ಸಿಕ್ಕಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪರಿಸರವಾದಿಗಳು ಎಂದು ಹೇಳಿಕೊಳ್ಳುವವರಿಗೆ ಪರಿಸರ ಜ್ಞಾನವೇ ಇಲ್ಲ. ಕುಡಿಯುವ ನೀರಿನ ಬೆಲೆಯೇ ಗೊತ್ತಿಲ್ಲದ ಪರಿಸರವಾದಿಗಳು ಪರಿಸರ ನಾಶದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದರು.

ಕುಡಿಯುವ ನೀರಿನ ಕಳಸಾ-ಬಂಡೂರಿ ನಾಲೆ ಜೋಡಣೆ ಹೋರಾಟಕ್ಕೆ ಮುಂದಾಗಿರುವ ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ತಕ್ಷಣದಿಂದ ಕೈ ಬಿಡಬೇಕು. ಇಲ್ಲದಿದ್ದರೇ ಮನೆಗೆ ನುಗ್ಗಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಹೋರಾಟದ ಸದಸ್ಯ ಬಸವರಾಜ ಕೋನನ್ನವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.ಕೆಲ ಪರಿಸರವಾದಿಗಳು ಗೋವಾ ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರೆ. ಮಠಾಧೀಶರೂ ಅಂತವರ ಬೆನ್ನು ಹತ್ತಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮಠಾಧೀಶರು ಮಠ, ಸಮಾಜ ಸುಧಾರಣೆ ಕೆಲಸಗಳನ್ನು ಮಾಡಬೇಕು. ಯಾರನ್ನೋ ಖುಷಿ ಪಡಿಸುವ ಸಲುವಾಗಿ ಜನರ ವಿರುದ್ಧ ಕೆಲಸ ಮಾಡಬಾರದು. ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕೆಲವೇ ದಿನಗಳಲ್ಲಿ ರಾಮದುರ್ಗದಿಂದಲೇ ಉಗ್ರವಾದ ಹೋರಾಟ ಆರಂಭಗೊಳ್ಳಲಿದೆ.

-ವಿಜಯ ಕುಲಕರ್ಣಿ, ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರು.