ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಪ್ರತಿಧ್ವನಿಸಿತು. ವಿವಿಧ ಸಾಮಾಜಿಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಆಕಾಶದಲ್ಲಿ ಹಾರಾಡಿದವು. ಗಾಳಿಪಟ ಕಲೆಯನ್ನು ಉಳಿಸಿ ಬೆಳೆಸುವಂತೆ ಒತ್ತಾಯಿಸಲಾಯಿತು.

ದೊಡ್ಡಬಳ್ಳಾಪುರ (ಜುಲೈ.30): ಜಸ್ಟೀಸ್‌ ಫಾರ್‌ ಸೌಜನ್ಯ ಅಭಿಯಾನ ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲೂ ಪ್ರತಿಧ್ವನಿಸಿದೆ. ಸೌಜನ್ಯಗೆ ನ್ಯಾಯ ಸಿಗಲಿ, ನ್ಯಾಯ ಬೆಳಕಿಗೆ ಬರಲೇ ಬೇಕು, ಸೌಜನ್ಯ ಹೆಣ್ಣಲ್ಲ; ಒಂದು ಶಕ್ತಿ ಇತ್ಯಾದಿ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಬಾನಂಗಳಕ್ಕೆ ಲಗ್ಗೆ ಇಟ್ಟು ನ್ಯಾಯದ ಬೇಡಿಕೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದವು.

Add Asianetnews Kannada as a Preferred SourcegooglePreferred

ಇಲ್ಲಿನ ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿಯ 9ನೇ ವಾರ್ಷಿಕೋತ್ಸವದ ಅಂಗವಾಗಿ ಭುವನೇಶ್ವರಿ ನಗರದ ಬಳಿ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ತರಾವರಿ ಚಿತ್ತಾರದ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಗಮನ ಸೆಳೆದವು.

ಅಪರೇಷನ್ ಸಿಂದೂರದ ಗರಿಮೆ, ಕಾರ್ಗಿಲ್ ವಿಜಯೋತ್ಸವ, ಇಮ್ಮಡಿ ಪುಲಕೇಶಿಯ ಹಿರಿಮೆ, ಪರಿಸರ ಸಂರಕ್ಷಣೆ, ಕನ್ನಡ ಜಾಗೃತಿ ಮೊದಲಾದ ಸಂದೇಶ ಹೊತ್ತ ಪಟಗಳೊಂದಿಗೆ ಆಂಜನೇಯ ಪಟ, ಗಣೇಶ ಪಟ, ಕೃಷ್ಣಪಟ, ಯಕ್ಷಗಾನ, ನರಸಿಂಹಸ್ವಾಮಿ, ಡಮರುಗ, ಕಾಮಾಕ್ಷಿ, ಅಮ್ಮಾರು, ಮತ್ಸ ಕನ್ಯ, ಗಂಡಬೇರುಂಡ, ಮಿಕ್ಕಿಮೌಸ್, ಬುಗುರಿ ಪಟ, ಎಲೆ ಪಟ, ಅಪ್ಪು ಪಟ, ಮೀನಿನ ಪಟ, ಜೀವ ಜಲ ಪಟ, ತ್ರಿಶೂಲ, ಸೈನ್ಯದ ಪಟ, ತಿರುಮಲ ಪಟ, ತೇರಿನ ಪಟ, ಸೂರ ಪಟ, ಕೊರಗಜ್ಜ, ಹೃದಯ, ಓಂ ಪಟ, ಬಜರಂಗ ಬಲಿ, ವೃತ್ತ ಪಟ, ಮಿಲಿಟರಿ ಆರ್.ಸಿ.ಬಿ, ಆಟೋ, ಚೇಳು ಮೊದಲಾದ ಚಿತ್ತಾಕರ್ಷಕ ಪಟಗಳು ಮೈದಾನದಲ್ಲಿ ನೆರೆದಿದ್ದ ನಾಗರಿಕರಿಗೆ ಮನರಂಜನೆಯ ಜೊತೆಗೆ ಸಂಭ್ರಮ, ಮುದ ನೀಡಿದವು.

ಗಾಳಿಪಟ ಸ್ಪರ್ಧೆಯಲ್ಲಿ ಪುರುಷರು, ಮಕ್ಕಳು, ತಂಡಗಳು ಭಾಗವಹಿಸಿ, ಹಾರಿಬಿಟ್ಟಿದ್ದ ವಿವಿಧ ನಮೂನೆಯ ಚಿತ್ತಾಕರ್ಷಕ ಪಟಗಳು ಬಾನಂಗಳದಲ್ಲಿ ಹಾರಾಡಿ ಗಮನ ಸೆಳೆದವು. ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಗಾಳಿಪಟಗಳನ್ನು ವೀಕ್ಷಿಸುವುದರೊಂದಿಗೆ ತಾವು ತಂದಿದ್ದ ಸಣ್ಣಪಟಗಳನ್ನು ಹಾರಿಸಿ ಖುಷಿಪಟ್ಟರು.

ಗಾಳಿಪಟ ಕಲೆಗೆ ಉತ್ತೇಜನ ಅಗತ್ಯ:

ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆ ಉದ್ಘಾಟಿಸಿದ ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕ‌ರ್ ಮಾತನಾಡಿ, ದೊಡ್ಡಬಳ್ಳಾಪುರ ಗಾಳಿಪಟ ಕಲೆಗೆ ಹೆಸರಾಗಿದೆ. ಇಲ್ಲಿನ ಗಾಳಿಪಟ ಕಲಾವಿದರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ, ಊರಿಗೆ ಕೀರ್ತಿ ತಂದಿದ್ದಾರೆ. ನಗರೀಕರಣದಿಂದಾಗಿ ಗಾಳಿಪಟ ಹಾರಿಸುವ ಜಾನಪದ ಕಲೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಇಂದಿನ ಯುವ ಪೀಳಿಗೆ ನಶಿಸಿ ಹೋಗುತ್ತಿರುವ ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ನಗರಸಭೆ ನಾಮಿನಿ ಸದಸ್ಯ ಎಚ್ ವಿ.ಅಖಿಲೇಶ್, ನಟರಾದ ರಾಕೇಶ್, ಸುಷ್ಮಾ, ನಿರ್ಮಾಪಕ ಲಕ್ಷ್ಮೀಪತಿ, ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಎಸ್.ರಾಮದಾಸ್, ಕಾರ್ಯದರ್ಶಿ ಶಿವಶಂಕರ್, ಕನ್ನಡ ಕಟ್ಟಾಳು ಮಂಜುನಾಥ್ ಭಾಗವಹಿಸಿದ್ದರು.

ಬಹುಮಾನ ವಿತರಣೆ:

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಗಾಳಿಪಟ ಸ್ಪರ್ಧಿಗಳಿಗೆ ಬಹುಮಾಗಳನ್ನು ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಸದಸ್ಯೆ ಪ್ರಭಾ ನಾಗರಾಜ್, ಮುಖಂಡರಾದ ನಾಗಣ್ಣ, ಅಶ್ವತ್ಥ್‌, ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.