BJP protest in Gundlupete:: ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದು ಟೀಕಿಸಿದರು. ಸಿಎಂ ಹುದ್ದೆಗೆ ಕಿತ್ತಾಟ ನಡೆದಿದ್ದು, ರೈತರನ್ನು ಕಡೆಗಣಿಸಿ ಖಜಾನೆ ಲೂಟಿ ಮಾಡಲಾಗುತ್ತಿದೆ ಎಂದು ಕಿಡಿ.

ಗುಂಡ್ಲುಪೇಟೆ (ನ.6): ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಐಸಿಯುನಲ್ಲಿಲ್ಲ, ಸತ್ತು ಹೋಗಿದೆ. ಸಿಎಂ ಹುದ್ದೆಗಾಗಿ ಕಾಂಗ್ರೆಸ್‌ನಲ್ಲೇ ಕಿತ್ತಾಟ ಶುರುವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್ ಮನೆಗೆ ಹೋಗೋ ಮುಂಚೆ ಕೆರೆಗೆ ನೀರನ್ನಾದ್ರೂ ತುಂಬಿಸಲಿ:

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಜಲಾಶಯದ ಬಳಿ ಮಂಡಲ ಬಿಜೆಪಿ ಆಯೋಜಿಸಿದ್ದ ‘ಕೆರೆ ನೀರಿಗಾಗಿ ಬಿಜೆಪಿ ಕಾಲ್ನಡಿಗೆ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮನೆಗೆ ಹೋಗೋಕೂ ಮುಂಚೆ ಕೆರೆಗೆ ನೀರನ್ನಾದರೂ ತುಂಬಿಸಿ ಹೋಗಲಿ ಎಂದು ವ್ಯಂಗವಾಡಿದರು.

ಇದನ್ನೂ ಓದಿ: Bengaluru: ಟನಲ್‌ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ತೇನೆ, ಅದಕ್ಕೂ ಮೊದ್ಲು ಕಸ,ಗುಂಡಿ ಸಮಸ್ಯೆ ಬಗೆಹರಿಸ್ತೀರಾ: ಅಶೋಕ್

ರೈತರು ಹಾಗೂ ಬಿಜೆಪಿಯ ಹೋರಾಟದ ಫಲದಿಂದಾಗಿಯೇ ಕೆರೆಗಳಿಗೆ ನೀರು ಬರುತ್ತಿದೆ. ಜಿಲ್ಲಾಡಳಿತ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ, ವಿಧಾನ ಸೌಧಕ್ಕೆ ಮುತ್ತಿಗೆ ಹಾಕೋಣ. ರೈತರು ಕೆರೆ ನೀರು ತುಂಬಿಸಿ ಎಂದು ಹೋರಾಟ ಮಾಡಬೇಕಾ? ಇದಕ್ಕಾ ಇರೋದು ಸರ್ಕಾರ ಎಂದು ಜಾಡಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 2 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ರಾಜ್ಯದಲ್ಲಿ ವೈನ್‌ ಶಾಪ್‌, ಬಾರ್‌ಗಳು ಹೆಚ್ಚಾಗುತ್ತಿವೆ. ಜೊತೆಗೆ ಇಂತಿಷ್ಟು ಅಂತ ಫಿಕ್ಸ್‌ ಆಗಿದೆ ಎಂದು ಆರೋಪಿಸಿದರು.

ಖಜಾನೆ ಲೂಟಿ?:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎರಡೂವರೆ ವರ್ಷಗಳಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳು, ರೈತರ ಗೋಳನ್ನು ಕೇಳೋರಿಲ್ಲ. ಖಜಾನೆ ಲೂಟಿ ಹೊಡೆದು ಬಿಹಾರ ಚುನಾವಣೆಗೆ ಹಣ ನೀಡಲಾಗುತ್ತಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಬರುವ ತಮಿಳುನಾಡು ಚುನಾವಣೆಗೂ ರಾಜ್ಯದಿಂದ ಹಣ ಹೋಗಲಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ : ಡಿಕೆಶಿ

ನವೆಂಬರ್ ಕ್ರಾಂತಿಯಾಗಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ನಾನು ಹೇಳಿದ್ದ ಭವಿಷ್ಯ ನಿಜವಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ಗಂಟು ಮೂಟೆ ಕಟ್ಟಲು ಸಿದ್ದರಾಗಿದ್ದಾರೆ ಎಂದು ಟೀಕಿಸಿದರು.

ಶಾಸಕ ಛಲವಾದಿ ನಾರಾಯಣ ಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತಿತರ ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.