'ಕಪಾಲ ಬೆಟ್ಟಕ್ಕೆ ಅಧಿಕಾರಿಗಳನ್ನಷ್ಟೇ ಕಳುಹಿಸಿದ್ರೆ ಸಾಲದು, ಅಶೋಕ್ ಕೂಡಾ ಬರಲಿ'
ಪರಿಶೀಲನೆಗೆ ಅಶೋಕ್ ಕೂಡ ಬರಲಿ| ಕಪಾಲ ಬೆಟ್ಟಕ್ಕೆ ಅಧಿಕಾರಿಗಳನ್ನಷ್ಟೇ ಕಳುಹಿಸಿದರೆ ಸಾಲದು| ಬಿಜೆಪಿ ನಾಯಕರೂ ಸ್ಥಳ ಪರಿಶೀಲಿಸಲಿ: ಡಿಕೆಶಿ
ರಾಮನಗರ[ಡಿ.29]: ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿಚಾರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಪಾಲ ಬೆಟ್ಟದ ಸ್ಥಳ ಪರಿಶೀಲಿಸಿದ ಬೆನ್ನಲ್ಲೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಧಿಕಾರಿಗಳು ಮಾತ್ರವಲ್ಲ ಕಂದಾಯ ಸಚಿವ ಆರ್.ಅಶೋಕ್ ಅವರೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಿ ಎಂದು ವ್ಯಂಗ್ಯವಾಡಿದ್ದಾರೆ.
ಕನಕಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆಯಾಗುತ್ತಿರುವ ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ಕಂದಾಯ ಸಚಿವ ಆರ್.ಅಶೋಕ್ ಕೇವಲ ಅಧಿಕಾರಿಗಳನ್ನು ಕಳುಹಿಸಿದರೆ ಸಾಲದು, ಖುದ್ದು ಅವರೂ ಭೇಟಿ ನೀಡಲಿ. ಅಧಿಕಾರಿಗಳಿಂದ ಯಾವ ಮಾಹಿತಿ ಪಡೆದುಕೊಳ್ಳುತ್ತಾರೋ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕಪಾಲ ಬೆಟ್ಟಕ್ಕೆ 1600ನೇ ಇಸ್ವಿಯಿಂದಲೂ ಇತಿಹಾಸ ಇದೆ. ಅಲ್ಲಿ ಹೊಸದಾಗಿ ನಾನೇನೂ ಮಾಡಲು ಆಗಲ್ಲ. ಆ ಸ್ಥಳದಲ್ಲಿ ಶಿಲೆ, ಪ್ರತಿಮೆ ಇದೆ. ಪೂಜೆಗಳು ನೆರವೇರುತ್ತಿವೆ. ಅವೆಲ್ಲವನ್ನು 500-600 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿ ನಾಯಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಸಚಿವರಾದ ಸಿ.ಟಿ. ರವಿ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ ಅವರಿಗೆ ಒತ್ತಡ ಇದೆ. ಇನ್ನು ಎನ್. ರವಿಕುಮಾರ್, ಅನಂತ್ ಕುಮಾರ್ ಹೆಗಡೆ ಸಾಹೇಬರು ಏನೇನೋ ಹೇಳಿದ್ದಾರೆ. ಅವರೆಲ್ಲರೂ ಸ್ಥಳ ಪರಿಶೀಲನೆ ನಡೆಸಲಿ. ಭೂಮಿಗಾಗಿ ಯಾವಾಗ ಅರ್ಜಿ ಹಾಕಿದ್ದರು, ಅಲ್ಲಿ ಏನಿತ್ತು ಎಂಬುದನ್ನು ತಿಳಿದುಕೊಳ್ಳಲಿ ಎಂದರು.
ಬಿಜೆಪಿ ಸರ್ಕಾರ ಪ್ರತಿಮೆ ನಿರ್ಮಾಣ ಸ್ಥಳ ವಾಪಸ್ ಪಡೆದುಕೊಂಡರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಊಹೆ ಮಾಡಿಕೊಂಡು ನಾನ್ಯಾಕೆ ಮಾತನಾಡಬೇಕು. ಮುಖ್ಯಮಂತ್ರಿ ಅಂದ ಮೇಲೆ ರಾಜ್ಯದ ಹಿತ ಬಯಸಬೇಕು. ಪ್ರತಿಜ್ಞಾ ವಿಧಿಯನ್ನು ಏನನ್ನು ಹೇಳಿ ತೆಗೆದುಕೊಂಡಿದ್ದಾರೆ ಎಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಡಿ.ಕೆ.ಶಿವಕುಮಾರ್ ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಿದ್ದಾರೆ ಎಂಬ ಉಪಮುಖ್ಯಮಂತ್ರಿ ಡಾ. ಅಶ್ವತ್್ಥ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಹಳ್ಳ ತೊಡಿಕೊಂಡು ಇದ್ದೀನಿ, ಅವರು ಬಂದು ಸಮಾಧಿ ಮಾಡಲಿ ಎಂದರು.
‘ಕೆಂಪೇಗೌಡ’ ಎಂಬ ನನ್ನ ಹೆಸರನ್ನು ಶಿವಕುಮಾರ್ ಎಂದು ಬದಲಾಯಿಸಿಕೊಂಡಿದ್ದೇನೆ. ನಮ್ಮ ಕ್ಷೇತ್ರದ ಶಿವಗಿರಿ ಬೆಟ್ಟವನ್ನು ಕೂಡ ಅಭಿವೃದ್ಧಿ ಮಾಡಿದ್ದೇನೆ. ನನ್ನ ಕ್ಷೇತ್ರದ ಸಾಕಷ್ಟುದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದೇನೆ. ನನ್ನ ಮೇಲೆ ಬಿಜೆಪಿ ನಾಯಕರಿಗೆ ಸಾಕಷ್ಟುಪ್ರೀತಿ ಇದೆ. ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ವಾಕ್ಯ ನನಗೂ ಗೊತ್ತಿದೆ. ಯಾವ ದೇವರು ಯಾವ ಧರ್ಮ, ಯಾರನ್ನು ಆರಾಧನೆ ಮಾಡಬೇಕು ಅಂತ ಅವರಿಗೆ ಗೊತ್ತಿದೆ ಎಂದು ಶಿವಕುಮಾರ್ ಟಾಂಗ್ ನೀಡಿದರು.