ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿಗಳಿಗೆ ಅಪಚಾರ ಮಾಡಿದ ಆರೋಪವನ್ನು ಜೆಡಿಎಸ್ ಮಾಡಿದೆ. ಪೂಜ್ಯ ಸ್ವಾಮೀಜಿಗಳ ಮೇಲೆ ಎಫ್ಐಆರ್ ಹಾಕಿರುವುದೇ ಸಮುದಾಯದ ಸಿಟ್ಟಿಗೆ ಕಾರಣ ಎಂದು ಜೆಡಿಎಸ್ ಹೇಳಿದೆ. ಸ್ವಾಮೀಜಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ತೊಡೆ ತಟ್ಟಿ ನಿಂತಿದೆ ಎಂಬುದು ಜೆಡಿಎಸ್ ಆರೋಪ.

ಬೆಂಗಳೂರು (ಡಿ.02): ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರ್ಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ? ಪೂಜ್ಯ ಸ್ವಾಮೀಜಿ ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ ಎಂದು ಡಿಸಿಎಂ ಸಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡಿದ ನೀವು ಸುಳ್ಳಿನ ಶೂರ, ಒಕ್ಕಲಿಗ ದ್ರೋಹಿ ಎಂದು ಜೆಡಿಎಸ್ ಪಕ್ಷದಿಂದ ನೇರ ಆರೋಪ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಟೀಕೆ ಮಾಡಿರುವ ಜೆಡಿಎಸ್, 'ಸುಳ್ಳಿನ ಶೂರ ಡಿ.ಕೆ. ಶಿವಕುಮಾರ್, ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ? ಪೂಜ್ಯ ಸ್ವಾಮೀಜಿ ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ.

ಜೆಡಿಎಸ್ ಸರಕಾರವಿದ್ದಾಗ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸು ಹಾಕಲಾಗಿತ್ತು ಎಂದು ಬಾಲಬುದ್ಧಿಯ ನೀವು ಬಡಬಡಿಸಿದ್ದೀರಿ! ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ?

ಪೂಜ್ಯ ಸ್ವಾಮೀಜಿ ಅವರ ವಿರುದ್ಧ ನಿಮ್ಮ ಇಡೀ ಕಾಂಗ್ರೆಸ್ ಸರ್ಕಾರ ತೊಡೆತಟ್ಟಿ ನಿಂತಿದೆ. ಸಚಿವರುಗಳೆಲ್ಲ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಹೇಳಿಕೆಯ ಬಗ್ಗೆ ಪರಮಪೂಜ್ಯರು ವಿಷಾದ ವ್ಯಕ್ತಪಡಿಸಿದ ಮೇಲೆಯೂ ಅವರ ಮೇಲೆ ಸರಕಾರ ಯಾರದೋ ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ. ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು. ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ.

ಇದನ್ನೂ ಓದಿ: 'ಕಾಂಗ್ರೆಸ್ ಸರ್ಕಾರ, ಗುರುವಾರದ ಸರ್ಕಾರ' ಸಚಿವರ ಸಾಧನೆಯೇ ಶೂನ್ಯ; ಆರ್. ಅಶೋಕ

ಒಕ್ಕಲಿಗ ವಿರೋಧಿ ಡಿಕೆಶಿಯವರೇ.. ನಿಮಗಿದು ತರವೇ? ಮಿಸ್ಟರ್ ಡಿಕೆಶಿಯವರೇ.. ಒಕ್ಕಲಿಗರ ಅಸ್ಮಿತೆಯನ್ನು ಕೆಣಕಿದ್ದೀರಿ.. ನಿಮ್ಮ ಸರಕಾರ, ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ. ಅಧಿಕಾರಕ್ಕಾಗಿ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ ಎಂದು ಪೋಸ್ಟ್ ಮೂಲಕ ಆಕ್ರೋಶವನ್ನು ಹೊರಹಾಕಿದೆ.

Scroll to load tweet…