ಜನಾರ್ದನ ರೆಡ್ಡಿ ಔತಣ ಕೂಟದಲ್ಲಿ ಭಾಗಿಯಾದವರ್ಯಾರು..?
ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾಗಿ ವಾಪಸಾಗಿದ್ದರಿಂದ ಅವರ ಆಪ್ತ ಬಳಗಕ್ಕೆ ಔತಣಕೂಟವನ್ನು ಏರ್ಪಡಿಸಿದ್ದರು.
ಬೆಂಗಳೂರು : ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾಗಿ ವಾಪಸಾಗಿದ್ದರಿಂದ ಗುರುವಾರ ಅವರ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.
ನಗರದ ಬಸವೇಶ್ವರ ವೃತ್ತದ ಬಳಿಯ ಪಾರಿಜಾತ ಅಪಾರ್ಟ್ಮೆಂಟಿನಲ್ಲಿರುವ ರೆಡ್ಡಿ ನಿವಾಸದಲ್ಲಿ ದೂರದಿಂದ ಆಗಮಿಸಿದ್ದ ಹಲವು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗಾಗಿ ಔತಣಕೂಟವನ್ನೂ ಆಯೋಜಿಸಲಾಗಿತ್ತು.
ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಹಿನ್ನೆಲೆಯಲ್ಲಿ ರೆಡ್ಡಿ ಅವರನ್ನು ಭೇಟಿ ಮಾಡಲು ಬಳ್ಳಾರಿ ಸೇರಿದಂತೆ ದೂರದ ಊರುಗಳಿಂದ ನೂರಾರು ಜನ ಆಗಮಿಸಿದ್ದರು. ಅವರೆಲ್ಲರ ಜೊತೆ ಮಾತನಾಡಿದ ರೆಡ್ಡಿ ಅವರಿಗಾಗಿ ಔತಣಕೂಟ ಆಯೋಜಿಸಿ ಕೃತಜ್ಞತೆ ಸಲ್ಲಿಸಿದರು.
ಕಾನೂನು ಕ್ರಮ ಕುರಿತು ಚರ್ಚೆ: ಔತಣಕೂಟದ ವೇಳೆ ರೆಡ್ಡಿ ಆಪ್ತ ಸ್ನೇಹಿತ ಹಾಗೂ ಬಿಜೆಪಿ ನಾಯಕ ಬಿ.ಶ್ರೀರಾಮುಲು ಆಗಮಿಸಿದ್ದರು. ಕೆಲಕಾಲ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮಾತನಾಡಿದ ಬಳಿಕ ರೆಡ್ಡಿ ಅವರು ಸದಾಶಿವನಗರದಲ್ಲಿನ ಶ್ರೀರಾಮುಲು ನಿವಾಸಕ್ಕೆ ತೆರಳಿದರು.
ಅಲ್ಲಿ ವಕೀಲರೂ ಆಗಮಿಸಿದ್ದರು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಪ್ರಗತಿ ಹಾಗೂ ಮುಂದೆ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.