ಹಳಿ ತಪ್ಪಿದ ಶ್ರಮಿಕ್ ರೈಲು: ಪ್ರಯಾಣಿಕರು ಪಾರು!
ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು ಶ್ರಮಿಕ್ ಸ್ಪೆಷಲ್ ರೈಲು| ಮಂಗಳೂರಿನ ಬಳಿ ಹಳಿ ಬಿಟ್ಟು ಸಾಗಿದ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ್ ರೈಲು| ಪ್ರಯಾಣಿಕರು ಪಾರು
ಮಂಗಳೂರು(ಮೇ.19): ದೇಶದ ನಾನಾ ಭಾಗಗಳಲ್ಲಿ ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಸಲುವಾಗಿ ಸರ್ಕಾರ ಎಲ್ಲಾ ರಾಜ್ಯಗಳಿಗೂ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಈ ರೈಲುಗಳು ದೇಶಾದ್ಯಂತ ಸಂಚರಿಸಿ ಕಾರ್ಮಿಕರನ್ನು ತಮ್ಮ ತವರು ನಾಡಿಗೆ ಕರೆದೊಯ್ಯುತ್ತಿದೆ. ಹೀಗಿರುವಾಗ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ್ ರೈಲೊಂದು ಹಳಿ ತಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹೌದು ಶಿರೂರು ಹಾಗೂ ಜೈಪುರದ ನಡುವೆ ಸಂಚರಿಸುತ್ತಿದ್ದ ಶ್ರಮಿಕ್ ರೈಲು ಸೋಮವಾರ ರಾತ್ರಿ ಮಂಗಳೂರಿನ ಕುಲಶೇಖರ ಬಳಿ ಹಳಿ ತಪ್ಪಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸದೆ ಪ್ರಯಾಣಿಕರು ಪಾರಾಗಿದ್ದಾರೆ.
ಲಭ್ಯವಾದ ಮಾಹಿತಿ ಅನ್ವಯ ರಾತ್ರಿ ಸುಮಾರು ಒಂದು ಗಂಟೆಗೆ ಶ್ರಮಿಕ್ ಸ್ಪೆಷಲ್ ರೈಲಿನ ಇಂಜಿನ್ ಹಳಿ ಬಿಟ್ಟು ಸಾಗಿದೆ. ಇದಾದ ಬಳಿಕ ಸುಮಾರು ನಾಲ್ಕು ಗಂಟೆಗೆ ಈ ರೈಲಿಗೆ ಸುಮಾರು ನಾಲ್ಕು ಗಂಟೆಗೆ ಬೇರೊಂದು ಇಂಜಿನ್ ಅಳವಡಿಸಿ ಪ್ರಯಾಣ ಮುಂದುವರೆಸಿದೆ.
ಸದ್ಯ ಹಳಿ ಪಕ್ಕ ಕೆಟ್ಟು ನಿಂತಿರುವ ಇಂಜಿನ್ ಸರಿಪಡಿಸುವ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.