8 ವರ್ಷ ಹಿಂದೆ ವರದಿ ಮಂಡನೆ| ಪೊಲೀಸ್‌, ಎಫ್‌ಎಸ್‌ಎಲ್‌, ಸರ್ಕಾರಿ ವಕೀಲರ ಶಾಮೀಲು ಶಂಕೆ|ಮಾದಕ ವಸ್ತು ಜಾಲವನ್ನು ಬೇರು ಸಹಿತ ಕಿತ್ತುಹಾಕಲು ರಾಜಕೀಯ ಇಚ್ಛಾಶಕ್ತಿ ಬೇಕು, ಯಾರೇ ಈ ದಂಧೆಯಲ್ಲಿ ಒಳಗಾಗಿದ್ದರೂ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು: ಯೋಗೀಶ್‌ ಭಟ್‌| 

ಬೆಂಗಳೂರು(ಸೆ.03): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌-ಸೆಕ್ಸ್‌ ಜಾಲ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ 2012ರಲ್ಲಿ ವಿಧಾನಸಭೆಗೆ ಅಂದಿನ ಉಪಸಭಾಪತಿ ಯೋಗೀಶ್‌ ಭಟ್‌ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ 114 ಪುಟಗಳ ಡ್ರಗ್ಸ್‌ ದಂಧೆ ಕುರಿತ ವರದಿ ಮುನ್ನೆಲೆಗೆ ಬಂದಿದೆ. ಈ ದಂಧೆಯಲ್ಲಿ ಪೊಲೀಸ್‌, ಎಫ್‌ಎಸ್‌ಎಲ್‌ ಸೇರಿದಂತೆ ವ್ಯವಸ್ಥೆಯೇ ಶಾಮೀಲಾಗಿರುವ ಪ್ರಮುಖ ಶಂಕೆಯನ್ನೂ ಈ ವರದಿಯಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

"

ಪೊಲೀಸ್‌ ವ್ಯವಸ್ಥೆಯೇ ಶಾಮೀಲು!: 

ಎಂಟು ವರ್ಷಗಳ ಹಿಂದೆಯೇ ರಾಜ್ಯದ ಮಾದಕ ವಸ್ತು ಜಾಲದಲ್ಲಿ ದುರ್ಬಲ ಪೊಲೀಸ್‌ ವೃತ್ತಿಪರತೆಯನ್ನು ಸಮಿತಿ ಬೊಟ್ಟು ಮಾಡಿತ್ತು. ಪ್ರಕರಣಗಳನ್ನು ಪತ್ತೆಹಚ್ಚಿ ಶಿಕ್ಷೆ ವಿಧಿಸುವಲ್ಲಿ ಪೊಲೀಸ್‌ ಸೆಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಾದಕ ಜಾಲ ಕಿತ್ತೊಗೆಯಲು ಪೊಲೀಸ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಶಿಫಾರಸು ಮಾಡಿತ್ತು.

ರಾಗಿಣಿ ದ್ವಿವೇದಿ ಹೆಸರು ರಿವೀಲ್ ಮಾಡಿದ ರವಿಶಂಕರ್‌; ಲೋಕೇಷನ್‌ ಟ್ರ್ಯಾಕ್‌ ಮಾಡಿದ ಸಿಸಿಬಿ

ಅಧಿನಿಯಮ ಜಾರಿಗೆ ಶಿಫಾರಸು: 

ಮಾದಕ ವಸ್ತುಗಳ ವಿತರಣಾ ಜಾಲಗಳನ್ನು ನಿಯಂತ್ರಿಸಲು ಸರ್ಕಾರವು ಪ್ರಬಲವಾಗಿರುವ ವಿಶಿಷ್ಟ ಅಧಿನಿಯಮ ಜಾರಿಗೊಳಿಸಬೇಕೆಂದು ಸಮಿತಿ ಶಿಫಾರಸು ಮಾಡಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಆಗಿರುವ ಪ್ರಕರಣಗಳು ಗಮನಾರ್ಹವಾಗಿಲ್ಲ. ತಾಂತ್ರಿಕ ಮತ್ತು ವಿಧಿ ವಿಧಾನಗಳ ಲೋಪದೋಷಗಳಿಂದಾಗಿ ಅಪರಾಧ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿದ್ದುದನ್ನು ವರದಿಯು ಉಲ್ಲೇಖಿಸಿ, ವಿಶಿಷ್ಟಅಧಿನಿಯಮ ಜಾರಿಗೆ ಒತ್ತಾಯಿಸಿತ್ತು.

ವಿಧಿ ವಿಜ್ಞಾನ ವಸ್ತುನಿಷ್ಟತೆ ಪ್ರಶ್ನೆ: 

ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ದೃಢನಿಷ್ಠೆ ಬಗ್ಗೆಯೂ ಶಂಕೆ ಇರುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಸಮರ್ಪಕ ವಿದ್ಯಾರ್ಹತೆ ಹೊಂದಿರುವ ವೃತ್ತಿಪರ ವಿಶ್ಲೇಷಣೆಕಾರರನ್ನು ನೇಮಕ ಮಾಡಲು ಒತ್ತಾಯಿಸಿತ್ತು.

ಮಾದಕ ದ್ರವ್ಯ ಬಳಕೆಯಿಂದ ಮಹಿಳೆಯರ ಮೇಲೆ ದೌರ್ಜನ್ಯ, ಕೊಲೆ, ವಿದ್ಯಾರ್ಥಿಗಳ ಆತ್ಮಹತ್ಯೆ, ವೇಶ್ಯಾವಾಟಿಕೆ, ಮಹಿಳೆಯರ ಸಾಗಾಟ ಪ್ರಕರಣಗಳು ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟಲು ಪೊಲೀಸ್‌ ವ್ಯವಸ್ಥೆಯಲ್ಲಿ ಪ್ರತ್ಯೇಕ ತಂಡ ರಚಿಸಲೂ ಸಮಿತಿಯು ಶಿಫಾರಸು ಮಾಡಿತ್ತು.

ಮಾದಕ ವಸ್ತು ಜಾಲವನ್ನು ಬೇರು ಸಹಿತ ಕಿತ್ತುಹಾಕಲು ರಾಜಕೀಯ ಇಚ್ಛಾಶಕ್ತಿ ಬೇಕು. ರಾಜಕಾರಣಿಗಳಿರಲಿ, ಸಿನೆಮಾ ಕ್ಷೇತ್ರವಿರಲಿ, ಯಾರನ್ನೂ ನಾನು ಬೊಟ್ಟು ಮಾಡುವುದಿಲ್ಲ. ಯಾರೇ ಈ ದಂಧೆಯಲ್ಲಿ ಒಳಗಾಗಿದ್ದರೂ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಪೊಲೀಸ್‌ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ಬಲಗೊಳಿಸಬೇಕು ಎಂದು ವಿಧಾನಸಭೆಯ ಮಾಜಿ ಉಪಸಭಾಪತಿ ಯೋಗೀಶ್‌ ಭಟ್‌ ಅವರು ತಿಳಿಸಿದ್ದಾರೆ.