ಮುಡಾ ನಿವೇಶನ ಪ್ರಕರಣದ ತನಿಖೆ ಮುಗಿದ ಬಳಿಕ ಕೋರ್ಟ್ ಮೂಲಕವೇ 14 ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ತಾಯಿ ನಿರ್ಧರಿಸುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಇ.ಡಿ. ನೋಟಿಸ್ನಿಂದ ತಾಯಿ ನೊಂದಿದ್ದರು, ಈಗ ಹೈಕೋರ್ಟ್ ತೀರ್ಪಿನಿಂದ ಸಮಾಧಾನವಾಗಿದೆ ಎಂದರು.
ಮೈಸೂರು (ಮಾ.9): ಮುಡಾ ನಿವೇಶನ ಪ್ರಕರಣದ ತನಿಖಾ ಪ್ರಕ್ರಿಯೆ ಮುಗಿದ ಮೇಲೆ ಕೋರ್ಟ್ ಮೂಲಕವೇ 14 ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ನಮ್ಮ ತಾಯಿ ನಿರ್ಧರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ. ನೋಟಿಸ್ನಿಂದ ನಮ್ಮ ತಾಯಿ ಮನಸಿಕವಾಗಿ ನೊಂದಿದ್ದರು. ಈಗ ಹೈ ಕೋರ್ಟ್ ಇಸಿಆರ್ ರದ್ದು, ವಿಚಾರಣೆಗೆ ಹಾಜರಾಗಲು ನೀಡಿದ್ದ ಸಮನ್ಸ್ ವಜಾ ಮಾಡಿ ತೀರ್ಪು ನೀಡಿದ್ದರಿಂದ ಸಮಾಧಾನವಾಗಿದೆ. ನಮ್ಮ ತಂದೆಯನ್ನು ಈ ಪ್ರಕರಣದಲ್ಲಿ ವಿನಾ ಕಾರಣ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಈ ಕಾರಣಕ್ಕಾಗಿ ನಾವು 14 ಸೈಟ್ ಗಳನ್ನು ವಾಪಸ್ಸು ಕೊಟ್ಟಿದ್ದೆವು. ನ್ಯಾಯ ಪ್ರಕಾರವಾಗಿ ನಮಗೆ ಆ ಸೈಟ್ ಗಳು ಬರಬೇಕಿದೆ ಎಂದು ಯತೀಂದ್ರ ವಾದಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನ ನಟ್ಟು, ಬೋಲ್ಟು ಟೈಟ್ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯತ್ನ!
ಅವತ್ತಿನ ಸಂದರ್ಭದಲ್ಲಿ ನಮಗೆ ಸೈಟ್ ವಾಪಸ್ಸು ಕೊಡಬೇಕಾದ ವಾತಾವರಣ ನಿರ್ಮಾಣ ಮಾಡಿದ್ದರು. ವಿನಾಕಾರಣ ಟೀಕೆ ನಾವು ನಿಲ್ಲಿಸಬೇಕಾಗಿತ್ತು. ಹೀಗಾಗಿ ನಾವು ಸೈಟ್ ವಾಪಸ್ಸು ಕೊಟ್ಟಿದ್ದೆವು. ನಮ್ಮದು ತಪ್ಪಿಲ್ಲ ಎಂದು ತನಿಖಾ ವರದಿ ಬಂದಿದೆ. ಅದ್ದರಿಂದ ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
