ಕಟ್ಟಡ ಕಾರ್ಮಿಕರಿಗೆ ಬಂಪರ್ ಕೊಡುಗೆ ನೀಡಿದ ಸರ್ಕಾರ
* ಪಿಂಚಣಿ ಸೇರಿ ಎಲ್ಲ ನೆರವಿನ ಮೊತ್ತ ಹೆಚ್ಚಳ
* ಕಟ್ಟಡ ಕಾರ್ಮಿಕರ ನೆರವು ಭರ್ಜರಿ ಏರಿಕೆ: ಸಚಿವ ಹೆಬ್ಬಾರ್
* ವೃತ್ತಿಪರ ಕೋರ್ಸ್ಗಳಿಗೆ ಸಹಾಯ ಧನ
ಬೆಂಗಳೂರು(ಜು.02): ಕಟ್ಟಡ ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ಧನಸಹಾಯದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದು, ಕಟ್ಟಡ ಕಾರ್ಮಿಕರಿಗೆ ಬಂಪರ್ ಕೊಡುಗೆ ನೀಡಿದೆ. ಗುರುವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಮಂಡಳಿಯ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಿಂಚಣಿ ಸೌಲಭ್ಯದ ಮೊತ್ತವನ್ನು ಎರಡು ಸಾವಿರದಿಂದ ಮೂರು ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಒಂದು ಸಾವಿರದಿಂದ ಎರಡು ಸಾವಿರ ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಹೆರಿಗೆ ಸೌಲಭ್ಯವನ್ನು 20 ಸಾವಿರದಿಂದ 25 ಸಾವಿರ ರು.ಗಳಿಗೆ ಹಾಗೂ ಮಂಡಳಿ ವತಿಯಿಂದ ಹೆಣ್ಣು ಮಗುವಿಗೆ ನೀಡುತ್ತಿದ್ದ ನೆರವನ್ನು 30ರಿಂದ 35 ಸಾವಿರ ರು.ಗಳಿಗೆ, ನರ್ಸರಿ ಮಕ್ಕಳಿಗೆ ಮೂರರಿಂದ ಐದು ಸಾವಿರ ರು., ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಮೂರರಿಂದ ಐದು ಸಾವಿರ ರು., 5ರಿಂದ 8ನೇ ತರಗತಿಯ ಮಕ್ಕಳಿಗೆ ಐದರಿಂದ ಎಂಟು ಸಾವಿರ ರು., 9ರಿಂದ 10 ನೇ ತರಗತಿ ಮಕ್ಕಳಿಗೆ 10ರಿಂದ 12 ಸಾವಿರ ರು., ಪ್ರಥಮ ಪಿಯುಸಿ ಮಕ್ಕಳಿಗೆ 10ರಿಂದ 15 ಸಾವಿರ ರು., ಆರ್ಟಿಇ ಮಕ್ಕಳಿಗೆ 12ರಿಂದ 20 ಸಾವಿರ ರು. ಹಾಗೂ ಪದವಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಧನ ಸಹಾಯದ ಮೊತ್ತವನ್ನು 15ರಿಂದ 25 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ.
ನಟ ಚೇತನ್ರಿಂದ 1 ರು. ಮಾನನಷ್ಟ ಕೇಸ್: ಸಚಿವ ಹೆಬ್ಬಾರ್ಗೆ ನೋಟಿಸ್
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25ರಿಂದ 40 ಸಾವಿರ ರು,, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 15ರಿಂದ 20 ಸಾವಿರ ರು., ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 50 ಸಾವಿರ ರು., ಎಂಡಿ ವಿದ್ಯಾರ್ಥಿಗಳಿಗೆ 45 ರಿಂದ 70 ಸಾವಿರ ರು., ಪಿಎಚ್ಡಿ ವಿದ್ಯಾರ್ಥಿಗಳಿಗೆ 25ರಿಂದ 50 ಸಾವಿರ ರು.ಗಳಿಗೆ ಸಹಾಯ ಧನ ಹೆಚ್ಚಿಸಲಾಗಿದೆ.
ಇನ್ನು ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಮಂಡಳಿಯೇ ಭರಿಸಲಿದ್ದು, ಪ್ಯಾರಾ ಮೆಡಿಕಲ್, ಬಿಎಡ್ ಕೋರ್ಸ್ಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 30 ಸಾವಿರ ಹಾಗೂ ಇತರೆ ವೃತ್ತಿಪರ ಕೋರ್ಸ್ಗಳಿಗೆ ಸಹಾಯ ಧನ ನೀಡಲಾಗುವುದು ಎಂದು ತೀರ್ಮಾನಿಸಲಾಗಿದೆ.
ವೈದ್ಯಕೀಯ ಸಹಾಯ ಧನ:
ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಲಾಗಿದೆ. ವಿವಾಹ ಸಹಾಯ ಧನವನ್ನು 50ರಿಂದ 60 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದ ಸುಮಾರು ಎಂಟು ಲಕ್ಷಕ್ಕೂ ಅಧಿಕ ಕಾರ್ಮಿಕ ಕುಟುಂಬ ಈ ಸೌಲಭ್ಯ ಪಡೆಯಲಿದೆ.