ಜುಲೈ ತಿಂಗಳಲ್ಲಿ ಸೋಂಕು ಸ್ಫೋಟ| ಸಚಿವ ಸುಧಾಕರ್‌ ಹೇಳಿಕೆ| ಭಾರೀ ಏರಿಕೆ ಬಗ್ಗೆ ಪರಿಣಿತರಿಂದಲೇ ಅಂದಾಜು| ಪರಿಸ್ಥಿತಿ ಎದುರಿಸಲು ಸರ್ಕಾರದಿಂದ ಸರ್ವಸಿದ್ಧತೆ| ಚಾಮರಾಜನಗರಕ್ಕೂ ಹಬ್ಬಿದ ಕೊರೋನಾ| ಈಗ ಎಲ್ಲ ಜಿಲ್ಲೆಗಳಲ್ಲೂ ವೈರಸ್‌

ಚಿಕ್ಕಬಳ್ಳಾಪುರ(ಜೂ.10): ಮುಂದಿನ ತಿಂಗಳು ಕೊರೋನಾ ಸೋಂಕಿನ ಪ್ರಮಾಣ ತೀವ್ರ ಏರುಗತಿ ತಲುಪಲಿದೆ ಎಂದು ಕೆಲ ಪರಿಣಿತರು ತಮಗೆ ಮಾಹಿತಿ ನೀಡಿದ್ದು, ಈ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ಚೆಕ್‌ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಜುಲೈ ತಿಂಗಳಲ್ಲಿ ಎಲ್ಲೆಡೆ ಕೊರೋನಾ ಪೀಡಿತರ ಸಂಖ್ಯೆ ತೀವ್ರ ಏರಿಕೆ ಕಾಣಲಿದೆ ಎಂದು ಪರಿಣಿತರಿಂದ ಮಾಹಿತಿ ಬಂದಿದೆ. ಲಾಕ್‌ಡೌನ್‌ ವೇಳೆ ಜನರಿಂದ ಸಿಕ್ಕ ರೀತಿಯ ಸಹಕಾರ ದೊರತರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ತೀವ್ರ ಏರುಗತಿ ಹಂತಕ್ಕೆ ತಲುಪಲಿಕ್ಕಿಲ್ಲ. ಆದರೂ ಅಂಥ ಪರಿಸ್ಥಿತಿ ಎದುರಿಸಲು ಈಗಾಗಲೇ ರಾಜ್ಯದಲ್ಲಿ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ತಂತ್ರಜ್ಞಾನ ಬಳಸಿ ಸೋಂಕಿತರ ಮೇಲೆ ಕಣ್ಗಾವಲು: ಡಾ. ಸುಧಾಕರ್‌

ವಿದೇಶಗಳಲ್ಲಿ ಕೊರೋನಾ ಕಾಣಿಸಿಕೊಂಡ ಒಂದೆರಡು ತಿಂಗಳಲ್ಲೇ ಸೋಂಕಿತರ ಸಂಖ್ಯೆ ಸ್ಪೈಕ್‌(ತೀವ್ರ ಏರುಗತಿ ಹಂತ)ಕ್ಕೆ ತಲುಪಿದೆ. ಮಾಚ್‌ರ್‍ನಲ್ಲಿ ಕರ್ನಾಟಕದ ಮೊದಲ ಪ್ರಕರಣ ಕೋವಿಡ್‌ ದಾಖಲಾಯಿತು. ಕೇರಳದಲ್ಲಿ ಮೊದಲ ಪ್ರಕರಣ ಜ.9ರಂದು ಪತ್ತೆಯಾಯಿತು. ಇದಾಗಿ ನಾಲ್ಕೈದು ತಿಂಗಳುಗಳೇ ಕಳೆದಿವೆ. ಆದರೂ ಇನ್ನೂ ಸೋಂಕಿನ ಪ್ರಮಾಣ ಸ್ಪೈಕ್‌ ಹಂತಕ್ಕೆ ತಲುಪಿಲ್ಲ. ಇದಕ್ಕೆ ನಮ್ಮ ಸರ್ಕಾರಗಳು ತೆಗೆದುಕೊಂಡ ನಿಲುವು, ಮುಂಜಾಗ್ರತಾ ಕ್ರಮಗಳೇ ಕಾರಣ ಎಂದರು.

ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ನಗರ ಮಾತ್ರವಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ತೆರಳಿ ಸರ್ವೇ ಮಾಡುತ್ತಿದ್ದಾರೆ. ಈ ಸರ್ವೇ ವರದಿಗಳನ್ನು ಅವರು ಆಯಾ ಜಿಲ್ಲಾ ಮಟ್ಟದ ಟಾಸ್ಕ್‌ ಪೋರ್ಸ್‌ ಸಮಿತಿಗೆ ಸಲ್ಲಿಸುತ್ತಾರೆ. ಈ ಮೂಲಕ ಪ್ರತಿಯೊಬ್ಬರ ಮೇಲೆ ನಿಗಾ ಇರಿಸಲಾಗುತ್ತದೆ ಎಂದರು.

ಇನ್ಮುಂದೆ ಸೋಂಕಿತರ ಮನೆ ಮಾತ್ರ ಸೀಲ್‌ಡೌನ್!

ರಾಜ್ಯ ಪ್ರಥಮ: ತಂತ್ರಜ್ಞಾನದ ಮೂಲಕ ಕೊರೋನಾ ಸೋಂಕು ನಿಗ್ರಹಿಸುವಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದೂರದೃಷ್ಟಿಫಲವಾಗಿ ಸೋಂಕು ನಿಯಂತ್ರಣದಲ್ಲಿದೆ. ತಂತ್ರಜ್ಞಾನದಲ್ಲಿ ರಾಜ್ಯ ಇಡೀ ದೇಶಕ್ಕೇ ಮಾದರಿಯಾಗಿದೆ. ರಾಜ್ಯಾದ್ಯಂತ ಈಗಾಗಲೇ 70ಕ್ಕೂ ಹೆಚ್ಚು ಕೋವಿಡ್‌ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಒಟ್ಟು 4 ಲಕ್ಷ ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ. ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಿತರಲ್ಲಿ ಶೇ.47ರಷ್ಟುಮಂದಿಯನ್ನು ಪರೀಕ್ಷೆಗೊಳಪಡಿಸಿದ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಜ್ಯ ಕೇವಲ ಶೇ.14 ಸಾಧನೆ ಮಾಡಿದೆ ಎಂದರು.