Monsoon Rain ಕರ್ನಾಟಕದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಸಾಧ್ಯತೆ, IMD ಎಚ್ಚರಿಕೆ!
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಆತಂಕ
- ಭಾರಿ ಮಳೆ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪ ಎಚ್ಚರಿಕೆ
- ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ
ಬೆಂಗಳೂರು(ಮೇ.17): ದೇಶದಲ್ಲಿ ಮುಂಗಾರು ಪ್ರವೇಶ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಆದರೆ ಕರ್ನಾಟಕದಲ್ಲಿ ಆತಂಕ ಛಾಯೆ ಕಾಣುತ್ತಿದೆ. ಕಾರಣ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಕೊಡುಗ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೆ ಪ್ರವಾಹ ಎಚ್ಚರಿಕೆ ರಾಜ್ಯದ ಜನರ ಆತಂಕಕ್ಕೆ ಕಾರಣಾಗಿದೆ.
ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!
ದಕ್ಷಿಣ ಕರ್ನಾಟಕದಲ್ಲಿ ನಾಳೆಯಿಂದ ಭಾರಿ ಮಳೆಯಾಗಲಿದೆ. ಈಗಾಗಲೇ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಇದು ಪ್ರವಾಹಕ್ಕೂ ಕಾರಣವಾಗಲಿದೆ ಎಂದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಸ್ಸಾಂ ಸೇರಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಮಳೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ
ಬೆಂಗಳೂರು ನಗರದ ಹಲವೆಡೆ ಸೋಮವಾರ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಬೈಕ್ ಸವಾರರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಪರದಾಡಿದರು. ಕೆಲವೆಡೆ ಸುರಿದ ಮಳೆಯಿಂದಾಗಿ ಸಂಚಾರಿ ದಟ್ಟಣೆ ಉಂಟಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು. ದೊಡ್ಡನೆಕ್ಕುಂದಿ, ವರ್ತೂರುಗಳಲ್ಲಿ 6 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡ ಮತ್ತು ಬಿಸಿಲಿನ ಕಣ್ಣಮುಚ್ಚಾಲೆ ನಡೆದಿತ್ತು. ಆದರೆ ಮಧ್ಯಾಹ್ನ 3ಕ್ಕೆ ನಂತರ ಎಲ್ಲೆಡೆ ಮೋಡಗಳು ಆವರಿಸಿಕೊಂಡು ಮಳೆ ಆರಂಭಗೊಂಡು ರಾತ್ರಿ 9ರವರೆಗೂ ಮುಂದುವರಿದಿತ್ತು. ಇದರಿಂದಾಗಿ ಸಂಜೆಯ ವೇಳೆ ಕಚೇರಿ, ಶಾಲೆ ಬಿಟ್ಟು ತೆರಳುತ್ತಿದ್ದ ಗಾರ್ಮೆಂಟ್ಸ್ ಕಾರ್ಮಿಕರು, ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು, ಫುಡ್ ಡೆಲಿವರಿ ಬಾಯ್ಗಳು ಸೇರಿದಂತೆ ಹಲವರು ಮಳೆಗೆ ನೆನೆದು ಪರದಾಡಿದರು.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ
ಚಂಡಮಾರುತ ಮತ್ತು ಸಮುದ್ರದ ಮೇಲಿನ ಮೇಲ್ಮೈ ಸುಳಿಗಾಳಿಯ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೇರಳದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ: ರೆಡ್ ಅಲರ್ಟ್ ಪ್ರಕಟ
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 100.3 ಮಿ.ಮೀ. ವಾಡಿಕೆ ಮಳೆ ಇದ್ದು, 190.4 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.90ರಷ್ಟುಹೆಚ್ಚುವರಿ ಮಳೆಯಾಗಿರುವುದು ಸಂತಸ ಮೂಡುವಂತೆ ಮಾಡಿದೆ.
ಏಪ್ರಿಲ್ ತಿಂಗಳಿನಿಂದ ಈವರೆಗೆ ವಾಡಿಕೆ ಮಳೆ 87.1 ಮಿ.ಮೀ. ಇದ್ದು ವಾಸ್ತವದಲ್ಲಿ 169.2 ಮಿ.ಮೀ. ಮಳೆಯಾಗಿದೆ. ಶೇ.94.3ರಷ್ಟುಹೆಚ್ಚುವರಿ ಮಳೆಯಾಗಿರುವುದು ದಾಖಲಾಗಿದೆ. ಕೆ.ಆರ್.ಪೇಟೆ- 205.3 ಮಿ.ಮೀ., ಮದ್ದೂರು-155.1 ಮಿ.ಮೀ., ಮಳವಳ್ಳಿ-172 ಮಿ.ಮೀ., ಮಂಡ್ಯ-167.9 ಮಿ.ಮೀ., ನಾಗಮಂಗಲ-146.6 ಮಿ.ಮೀ., ಪಾಂಡವಪುರ-173.0 ಮಿ.ಮೀ., ಶ್ರೀರಂಗಪಟ್ಟಣ ತಾಲೂಕಿನಲ್ಲಿ 169.2 ಮಿ.ಮೀ. ಮಳೆಯಾಗಿದೆ.