ಜಿಲ್ಲೆಯಲ್ಲಿ ನಡೆದ 2 ಕೋಟಿ ರುಪಾಯಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಮಂಗಳವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಯಾದಗಿರಿ (ಡಿ.13): ಜಿಲ್ಲೆಯಲ್ಲಿ ನಡೆದ 2 ಕೋಟಿ ರುಪಾಯಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಮಂಗಳವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯ ಕೋಟ್ಯಂತರ ರುಪಾಯಿ ಅಕ್ಕಿ ದಾಸ್ತಾನು ಕಳವಾಗಿದೆ. ಈ ರೀತಿ ಅಕ್ರಮ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿದ್ದು, ಇದಕ್ಕೆ ಲಗಾಮು ಹಾಕಬೇಕು ಎಂದು ಅವರು ಆಗ್ರಹಿಸಿದರು.

Add Asianetnews Kannada as a Preferred SourcegooglePreferred

ಅಕ್ಕಿ ಕಳ್ಳತನದ ಆರೋಪಿಗೆ ಡಿವೈಎಸ್ಪಿ ದರ್ಜೆ ಅಧಿಕಾರಿಯೊಬ್ಬರು ಸನ್ಮಾನ ಮಾಡಿದ್ದಾರೆ. ಈಗ ಮತ್ತೆ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಇದೇ ಅಧಿಕಾರಿ ತನಿಖೆ ನೇತೃತ್ವ ವಹಿಸಿದ್ದು, ಇಂಥವರಿಂದ ಹೇಗೆ ಪ್ರಾಮಾಣಿಕ ತನಿಖೆ ಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿದ ಶಾಸಕರು, ಈ ಅಕ್ರಮದಲ್ಲಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಕೈವಾಡದ ಬಗ್ಗೆ ಆರೋಪಿಸಿದರು.

ಅಕ್ಕಿ ಅಕ್ರಮದ ಆರೋಪಿಗೆ ಸನ್ಮಾನ ಮಾಡಿದ ಸುರಪುರ ಡಿವೈಎಸ್ಪಿ ವಿರುದ್ಧ ಈ ಹಿಂದೆ ಯಮಕನಮರಡಿಯಲ್ಲಿ ಚಿನ್ನ ಕಳವು ಆರೋಪ ಕೇಳಿ ಬಂದಿತ್ತು. ಸಿಐಡಿ ತನಿಖೆಯೂ ನಡೆದಿದೆ. ಹೀಗಿರುವಾಗ, ಈಗ ಟಿಎಪಿಸಿಎಂಎಸ್‌ ಗೋದಾಮಿನಿಂದ 2 ಕೋಟಿ ರು. ಅಕ್ಕಿ ಕಳ್ಳತನ ಪ್ರಕರಣದಲ್ಲಿ ಇದೇ ಸುರಪುರ ಡಿವೈಎಸ್ಪಿ ನಡೆಸುವ ತನಿಖೆ ಮೇಲೆ ವಿಶ್ವಾಸವಿಲ್ಲ ಎಂದು ವಿವರಿಸಿದರು. ಅಕ್ಕಿ ನಾಪತ್ತೆ ಕೇಸಿನ ಆರೋಪಿಗೆ ಪೊಲೀಸರು ಸನ್ಮಾನ ಮಾಡಿದ್ದ ಫೋಟೋ ವೈರಲ್‌ ಆಗಿದ್ದ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು.

ಶಾಸಕ ಯತ್ನಾಳ್‌ ಅವನತಿ ಆರಂಭವಾಗಿದೆ: ಮಾಜಿ ಸಚಿವ ಮುರುಗೇಶ್‌ ನಿರಾಣಿ

ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ 2 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ, 6 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿ ನಾಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಹಾಗೂ ಮತ್ತಿತರೆ ಪೊಲೀಸ್‌ ಅಧಿಕಾರಿಗಳ ತಂಡವು ಅಕ್ಕಿ ಅಕ್ರಮದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರನ್ನು ಸನ್ಮಾನಿಸಿದ್ದ ‍ಫೋಟೋ ವೈರಲ್ ಆಗಿ ವ್ಯಾಪ ಟೀಕೆಗಳು ವ್ಯಕ್ತವಾಗಿದ್ದವು.