ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ನಾಲ್ಕು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂತ್ರಸ್ತನಿಗೆ ₹2 ಲಕ್ಷ ಹಾಗೂ ಅರ್ಜಿದಾರರಿಗೆ ₹50 ಸಾವಿರ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳಿಂದ ಹಣ ವಸೂಲಿ ಸೂಚಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಫೆ.5): ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ನಾಲ್ಕು ದಿನ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಇರಿಸಿ, ನಂತರ ಎಫ್‌ಐಆರ್‌ ದಾಖಲಿಸಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಿದ ಪ್ರಕರಣದಲ್ಲಿ ಎರಡೂವರೆ ಲಕ್ಷ ರುಪಾಯಿ ಪರಿಹಾರ ಪಾವತಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಅಕ್ರಮ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಲಗ್ಗೆರೆ ನಿವಾಸಿ ರವಿ ಅವರ ಪತ್ನಿ ಎಂ.ವಿ.ವರಲಕ್ಷ್ಮೀ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ರವಿ ಎಂಬುವರನ್ನು ಬೆಂಗಳೂರಿನ ಗಂಗಮ್ಮಗುಡಿ ಠಾಣಾ ಪೊಲೀಸರು 2025ರ ಅ.14ರಂದು ಬಂಧಿಸಿದ್ದರು. ಬಂಧಿತನ ಪತ್ನಿ ನೀಡಿದ್ದ ದೂರು ಆಧರಿಸಿ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಅ.17ರಂದು ಸಂಜೆ 7.45ಕ್ಕೆ ಠಾಣೆಗೆ ಭೇಟಿ ನೀಡಿದ್ದರು. ನಂತರ ರವಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಅ.18ರಂದು ಸಂಜೆ 5 ಗಂಟೆಗೆ ನಗರದ 49ನೇ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಅ.18ರಿಂದ ಅ.24ರ ಸಂಜೆ 5ಗಂಟೆವರೆಗೆ ಪೊಲೀಸರ ವಶಕ್ಕೆ ರವಿಯನ್ನು ಒಪ್ಪಿಸಿದೆ.

ಆದರೆ ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಬಿಎನ್‌ಎಸ್‌ಎಸ್‌-2023ರ ಅಧ್ಯಾಯ 5ರಲ್ಲಿರುವ ಉಲ್ಲೇಖಿಸಿರುವ ಪ್ರಕ್ರಿಯೆ ಮತ್ತು ಜೋಗಿಂದರ್‌ ಕುಮಾರ್‌ ಹಾಗೂ ಉತ್ತರ ಪ್ರದೇಶದ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಪಾಲಿಸಬೇಕು. ಇಲ್ಲವಾದರೆ ಸಂವಿಧಾನದ ಪರಿಚ್ಛೇದ 21 ಅಡಿಯಲ್ಲಿ ದತ್ತವಾಗಿರುವ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಉಲ್ಲಂಘನೆಯಾಗುತ್ತದೆ. ಹೈಕೋರ್ಟ್‌ ನಿರ್ದೇಶನದಂತೆ ವಾಯುವ್ಯ ವಲಯದ ಡಿಸಿಪಿ ಸಲ್ಲಿಸಿದ ವಿಚಾರಣಾ ವರದಿಯಲ್ಲಿ ಅ.14ರಿಂದ ಅ.17ರವರೆಗೆ ರವಿಯನ್ನು ಗಂಗಮ್ಮಗುಡಿ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಇರಿಸಿದ್ದ ಅಂಶ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಬೈರಪ್ಪ ಹರೀಶ್ ಕುಮಾರ್‌ಗೆ ಪ್ರಾಣ ಬೆದರಿಕೆ ಆರೋಪ: ಗಿಳಿಯಾರ್‌ ಸೇರಿ ಮೂವರ ವಿರುದ್ಧ FIR

ಅ.14ರಿಂದ ಎಫ್‌ಐಆರ್‌ ದಾಖಲಿಸಿರುವವರೆಗೆ ರವಿ ಬಂಧನದಲ್ಲಿ ಇರಿಸಿದು ಅಕ್ರಮವಾಗಿದೆ. ಪ್ರಕರಣದಿಂದ ಉಂಟಾಗಿರುವ ದೈಹಿಕ ಹಾಗೂ ಮಾನಸಿಕ ಹಾನಿಗಾಗಿ ರವಿಗೆ ಸರ್ಕಾರ ₹2 ಲಕ್ಷ ಪರಿಹಾರ ಹಾಗೂ ಅರ್ಜಿದಾರೆಗೆ ವ್ಯಾಜ್ಯ ವೆಚ್ಚವೆಂದು ₹50 ಸಾವಿರ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಂದ ಈ ಮೊತ್ತ ವಸೂಲಿ ಮಾಡಬೇಕು. ಇಲಾಖೆ ತನಿಖೆ ನಡೆಸಿದ ನಂತರ ಪೊಲೀಸ್‌ ಠಾಣೆ ಅಥವಾ ಇಲಾಖೆ ಅಧಿಕಾರಿಗಳ ವಿರುದ್ಧ ತಪ್ಪಿನ ಹೊಣೆ ನಿಗದಿಪಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಏನಿದು ಪ್ರಕರಣ?

ಕಲ್ಲು ಒಡೆಯುವ ಕೆಲಸ ಮಾಡುವ ರವಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ ವಿಷಯ ತಿಳಿದ ಅರ್ಜಿದಾರೆ, ರವಿಯ ಮೊಬೈಲ್‌ ಸ್ವಿಚ್ಡ್‌ಆಫ್‌ ಆಗಿದ್ದರಿಂದ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಲು ಯತ್ನಿಸಿದ್ದರು. ಗಂಗಮ್ಮಗುಡಿ ಠಾಣಾ ಪೊಲೀಸರು ರವಿಯನ್ನು ಬಂಧಿಸಿರುವ ವಿಚಾರವನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಅ.16ರಂದು ಅರ್ಜಿದಾರೆಗೆ ತಿಳಿಸಿದ್ದರು. ನಂತರ ಅರ್ಜಿದಾರೆ ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಿ ಮನವಿ ಮಾಡಿದರೂ ತಮ್ಮ ಪತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ ಎಂದು ದೂರು ನೀಡಿದ್ದರು. ಅ.18ರಂದು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ಪತಿಯ ಬಂಧನವನ್ನು ಅಕ್ರಮವೆಂದು ಘೋಷಿಸಬೇಕು ಮತ್ತು ಪತಿಯ ಬಿಡುಗಡೆಗೆ ಆದೇಶಿಸುವಂತೆ ಕೋರಿದ್ದರು.