ಶಾಸಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಳ್ಳಿಹಾಕಿದ್ದಾರೆ. ಸರ್ಕಾರ ಯಾರ ಫೋನ್‌ಗಳನ್ನೂ ಟ್ಯಾಪ್ ಮಾಡುತ್ತಿಲ್ಲ, ದಾಖಲೆ ಇದ್ದರೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ

ಬೆಂಗಳೂರು (ಮಾ.6): ಸರ್ಕಾರ ಯಾರ ಫೋನ್‌ಗಳನ್ನೂ ಟ್ಯಾಪ್ ಮಾಡುತ್ತಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅಥವಾ ಬಿಜೆಪಿ ಬಳಿ ಯಾರ ಪೋನ್‌ ಟ್ಯಾಪ್‌ ಆಗುತ್ತಿದೆ ಎನ್ನುವ ದಾಖಲೆ ಇದ್ದರೆ ಕೊಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದರು. 

ಡಿಸಿಎಂ ಡಿ.ಕೆ.ಶಿವಕುಮಾರ್‌ ಬಣದ ಶಾಸಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಯಾರ ಫೋನ್‌ ಕದ್ದಾಲಿಕೆ ಆಗುತ್ತಿಲ್ಲ ಎಂದರು. ಇನ್ನು, ಒಳಮೀಸಲಾತಿ ಹಂಚಿಕೆಯಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ.17 ಒಳಮೀಸಲಾತಿ ಕೊಡುವ ತೀರ್ಮಾನ ಆಗಿತ್ತು. ಆದರೆ ಅಲೆಮಾರಿಗಳಿಗೆ ಪ್ರತ್ಯೇಕ ಶೇ.1 ಕೊಡಿ ಎಂಬ ಬೇಡಿಕೆ ಇದೆ. ಕೋರ್ಟಿನಲ್ಲೂ ಶೇ.56 ಮೀಸಲಾತಿಗೆ ತಡೆ ಕೊಡಲಾಗಿದೆ. ಇದೆಲ್ಲ ದೊಡ್ಡ ಚರ್ಚೆ ನಡೆಸಿ ತೀರ್ಮಾನ ಮಾಡಬೇಕಾದ ವಿಚಾರ. ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ ಎಂದರು.

ಶೇ.56 ಮೀಸಲಾತಿಯಡಿಯೇ ನೇಮಕಾತಿ ಮತ್ತು ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಅವರಿಗೂ ಶೇ.56 ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಗೊತ್ತಿದೆ. ಆದರೆ, ಬಿಜೆಪಿ ರಾಜಕೀಯ ಕಾರಣಕ್ಕೆ ಎಲ್ಲರಿಗೂ ಪ್ರಚೋದನೆ ಮಾಡುತ್ತಿದೆ. ಅವರ ರಾಜಕೀಯ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.