ಬೇರೆ ಕಾರಣದಿಂದ ಮೃತಪಟ್ಟರೆ ಕೋವಿಡ್‌ ಪರೀಕ್ಷೆ ಅಗತ್ಯವಿಲ್ಲ| ಮಾರ್ಗ​ಸೂ​ಚಿ- ಅಂತ್ಯಕ್ರಿಯೆಗೆ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

ಬೆಂಗಳೂರು(ಆ. 08): ಮೃತಪಟ್ಟಕೋವಿಡ್‌ ಸೋಂಕಿತರು ಮತ್ತು ಶಂಕಿತರ ಮೃತದೇಹದ ಅಂತ್ಯಕ್ರಿಯೆ ವೇಳೆ 20ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

Add Asianetnews Kannada as a Preferred SourcegooglePreferred

ಬೇರೆ ಬೇರೆ ಕಾರಣಗಳಿಂದ ಮನೆಗಳಲ್ಲಿ ಮೃತಪಟ್ಟವ್ಯಕ್ತಿಗಳೆಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಉಸಿರಾಟ ತೊಂದರೆ, ವಿಷಮಶೀತ ಜ್ವರದಂತಹ ಕೋವಿಡ್‌ ಸೋಂಕು ಲಕ್ಷಣ ಇದ್ದವರಿಗೆ ಮಾತ್ರ ಪರೀಕ್ಷೆ ನಡೆಸಬೇಕು. ಸೋಂಕು ದೃಢಪಟ್ಟು ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಕಡ್ಡಾಯವಾಗಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು.

ಆಸ್ಪತ್ರೆಗಳು ಶಂಕಿತ ವ್ಯಕ್ತಿ ಮೃತಪಟ್ಟಆರು ಗಂಟೆಯೊಳಗೆ ಗಂಟಲ ದ್ರವವನ್ನು ಪಡೆದು, ಕೋವಿಡ್‌ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ರವಾನಿಸಬೇಕು. ವರದಿ ಬರುವವರಿಗೆ ಕಾಯದೇ ಮೃತದೇಹವನ್ನು ರೋಗಿಯ ಸಂಬಂಧಿಕರಿಗೆ ಹಸ್ತಾಂತರಿಸಬೇಕು.

ಮೃತ ವ್ಯಕ್ತಿಯ ಶ್ವಾಸಕೋಶ ಮಾತ್ರ ಸೋಂಕಿತವಾಗಿರುತ್ತದೆ. ವ್ಯಕ್ತಿ ಉಸಿರಾಟ ನಿಲ್ಲಿಸಿದ ಬಳಿಕ ಸೋಂಕು ಹರಡುವುದಿಲ್ಲ. ಆದರೆ, ಮೃತ ವ್ಯಕ್ತಿಯ ದೇಹವನ್ನು ಸ್ಪರ್ಶಿಸುವುದು, ಸ್ನಾನ ಮಾಡಿಸುವುದು ಮಾಡಬಾರದು. ಒಮ್ಮೆ ಶರೀರವನ್ನು ಚೀಲದಲ್ಲಿ ಇರಿಸಿದ ಬಳಿಕ ಕುಟುಂಬದ ಸದಸ್ಯರು ಮೃತ ವ್ಯಕ್ತಿಯನ್ನು ನೋಡಲು ಇಚ್ಛಿಸಿದಲ್ಲಿ ಮುಖದ ಭಾಗವನ್ನು ಮಾತ್ರ ತೋರಿಸಬೇಕು. ಅಗತ್ಯ ಸುರಕ್ಷತಾ ಸಾಧನಗಳನ್ನು ಧರಿಸಿ, ಅಂತ್ಯಸಂಸ್ಕಾರ ನಡೆಸಬೇಕು. ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.