ಸುಳ್ಳು ಆರೋಪದಡಿ ಬಂಧಿಸಿ ಕಿರುಕುಳ ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಭ್ಯಂತರವಿಲ್ಲ. ನನ್ನ ಧ್ವನಿಯನ್ನು ವಿಧಿವಿಜ್ಞಾನ ಲ್ಯಾಬ್‌ಗೆ ಕಳಹಿಸಿಕೊಡಲಿ. ಕಾಂಗ್ರೆಸ್ ಸರ್ಕಾರ ನನ್ನನ್ನು ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ: ಮೇಲ್ಮನೆ ಸದಸ್ಯ ಸಿ.ಟಿ. ರವಿ

ಬೆಂಗಳೂರು(ಡಿ.22): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿವಾದ ಬಳಿಕ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆ ಇರುವ ಕಾರಣ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕು ಎಂದು ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. 

Add Asianetnews Kannada as a Preferred SourcegooglePreferred

ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಸಮರ್ಥಿಸಿಕೊಂಡ ಅವರು, ನನ್ನ ರಾಜಕೀಯ ಜೀವನದುದ್ದಕ್ಕೂ ನಾನೆಂದೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಹೇಳಿದರು. 

'ಘಟನೆ ನಡೆದುಹೋಗಿದೆ ಮುಂದುವರಿಸೋದ್ರಲ್ಲಿ ಅರ್ಥವಿಲ್ಲ': ಅಚ್ಚರಿ ಮೂಡಿಸಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ!

ನನ್ನ ಹತ್ಯೆಗೆ ಸಂಚು: 

ಇದೇ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ನನ್ನನ್ನು ಪೊಲೀಸರು ಜತೆಗೆ ಕರೆದೊಯ್ಯವಾಗ ನಾನು ದೂರವಾಣಿಯಲ್ಲಿ ಮಾತನಾಡುತ್ತಿದ್ದೆ. ಈ ಬಗ್ಗೆ ಜತೆಗಿದ್ದ ಪೊಲೀಸರಿಗೆ ಕರೆ ಮಾಡಿದ್ದ ಮೇಲಾಧಿಕಾರಿಗಳು ಫೋನ್‌ನಲ್ಲಿ ಮಾತನಾಡಲು ಅವರಿಗೆ (ಸಿ.ಟಿ.ರವಿಗೆ) ಅವಕಾಶ ಏಕೆ ನೀಡುತ್ತಿದ್ದೀರಿ? ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ಅನುಮಾನ ಇದೆ. ಅಲ್ಲದೇ, ಪ್ರಕರಣ ನಡೆದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆಯೊಡ್ಡುತ್ತಿದಾರೆ. ನನ್ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಕರೆ ಮಾಡುತ್ತಿರುವವರ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕು. 

ಪೊಲೀಸರಿಂದ ನಿಷ್ಪಕ್ಷಪಾತ ತನಿಖೆಯಾಗಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಏನೋ ಸಂಚು ನಡೆಸಿದ್ದರು ಎಂಬುದು ನನಗೆ ಅನುಮಾನ. ಬಹುಶಃ ಗುಂಪು ಸೇರಿಸಿ ನನ್ನನ್ನು ಸಾಯಿಸಲು ಸಂಚು ನಡೆಸಲಾಗಿತ್ತು ಎಂಬ ಅನುಮಾನ ಇತ್ತು. ಯಾಕೆಂದರೆ ಸುವರ್ಣಸೌಧದಲ್ಲೇ ಧಮ್ಮಿ ಹಾಕಲಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ಇದೆಲ್ಲವನ್ನೂ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟೆ. ನಾನು ನೀಡಿದ ದೂರು ಸ್ವೀಕಾರ ಮಾಡಿಲ್ಲ. ಎಫ್‌ಐಆರ್‌ ಆಗಿಲ್ಲ. ನನ್ನ ಮೇಲಿನ ಹಲ್ಲೆಗೆ ವಿಡಿಯೋಗಳಿವೆ. ನನ್ನ ಹಕ್ಕು ಕಸಿದುಕೊಳ್ಳಲಾಗಿದ್ದು, ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ. ನನಗೆ ಈಗಲೂ ಜೀವ ಬೆದರಿಕೆ ಇದೆ. ನನಗೆ ಏನೇ ಆದರೂ ಅದಕ್ಕೆ ಅವರೇ ಡಿ. ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ವರ್ ಅವರೇ ಜವಾಬ್ದಾರರು ಎಂದು ವಾಗ್ದಾಳಿ ನಡೆಸಿದರು. 

ಕುಡಿಯಲು ನೀರು ಕೊಡದ ಪೊಲೀಸರು: 

ಬೆಳಗಾವಿಯಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ವಾಂತಿಯಾಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಹಿಂದೆ ಬರುತ್ತಿದ್ದ ಮಾಧ್ಯ ಮಗಳ ವಾಹನ, ನನ್ನ ಆಪ್ತಸಹಾಯಕನ ವಾಹನವನ್ನು ಬ್ಯಾರಿಕೇಡ್‌ ಹಾಕಿ ತಡೆದಿದ್ದರು. ಬಂಧನಕ್ಕೆ ಕಾರಣ ಕೇಳಿ ಡೋರ್‌ ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ. ಪತ್ನಿಗೆ ಲೈವ್ ಲೊಕೇಶನ್ ಹಾಕಿದಾಗ ಅವರು ಕರೆ ಮಾಡಿ ವಿಚಾರಿಸಿದರು. ಆಗ ಗಾಬರಿ ಪಡದಂತೆ ಸಮಾಧಾನ ಮಾಡಿದೆ ಎಂದರು. 

ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ವಾಹನ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಡಿವೈಎಸ್ಪಿ ಕಚೇರಿಗೆ ಕರೆದೊಯ್ದ ವೇಳೆ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಸೇರಿಕೊಂಡರು. ಅವರು ಜೋರು ಮಾಡಿದರು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ರಾತ್ರಿ 11.45ರಿಂದ ಬೆಳಗಿನ 3ರವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ, ವಾಶ್ ರೂಮಿಗೆ ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ವಿವರಿಸಿದರು. 

ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ. ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿ ಕ್ರಮ ತೆಗೆದುಕೊ ಳ್ಳಬಹುದು. ಇದರಲ್ಲಿ ಯಾವುದೇ ಅಭ್ಯಂತರವಿಲ್ಲ. ಪರಿಷತ್‌ನಲ್ಲಿ ಕಾನೂನು ಕ್ರಮ ಜರುಗಿಸಲು ಸಭಾಪತಿಗೆ ಅವಕಾಶವಿದೆ. ನನ್ನ ದನಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿ ಸಿಕೊಡಲಿ, ಅಲ್ಲಿ ಧ್ವನಿ ಮುದ್ರಣ, ಫೋನ್ ದಾಖಲಾತಿ, ಸ್ಟೆನೋ ಎಲ್ಲವೂ ಇರುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳರ್‌ ಅವರಿಗೆ ನಾನು ಆಕ್ಷೇಪಾರ್ಹ ಪದ ಬಳಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಸಭಾಪತಿಯವರೇ ರೂಲಿಂಗ್ ಕೊಟ್ಟಿದ್ದಾರೆ ಎಂದರು. 

ನಿಯಮಗಳಿಗೆ ಮಾಡಿದ ಅವಮಾನ: ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನೆಂದೂ ಯಾರನ್ನೂ ನೋಯಿಸುವ ರಾಜಕಾರಣ ಮಾಡಿಲ್ಲ. ಆದರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ದ ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ. ಸ್ಪೀಕರ್ ಅನುಮತಿಯಿಲ್ಲದೇ ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಿದ್ದು ನಿಯಮಗಳಿಗೆ ಮಾಡಿದ ಅವಮಾನ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು. 

ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ: ಸಿದ್ದು ಸರ್ಕಾರಕ್ಕೆ ಭಾರೀ ಮುಖಭಂಗ!

ಡಿಕೆಶಿಗೆ ಮಾರುತ್ತರ: 

ಹಿರಿಯ ಸಚಿವರೊಬ್ಬರು ನನ್ನ ಪ್ರಕರಣ ಕುರಿತಂತ ಕುರಿತಂತೆ ಇದು ಚಿಕ್ಕಮಗಳೂರಿನ ಸಂಸ್ಕೃತಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಲೆನಾಡು ಮತ್ತು ಚಿಕ್ಕಮಗಳೂರು ಸಂಸ್ಕೃತಿ ಏನೆಂಬುದು ರಾಜ್ಯದ ಜನತೆಗೆ ಗೊತ್ತು. ನಮಲ್ಲಿ ಏಕವಚನದಲ್ಲೇ ಮಾತನಾಡಲು ಹಿಂದೆಮುಂದೆ ನೋಡುತ್ತಾರೆ. ಅವರ ಹಿನ್ನೆಲೆ ಏನೆಂಬುದು ನೋಡಿಕೊಳ್ಳಲಿ, ನನ್ನ ಹಿನ್ನೆಲೆ ಏನೆಂಬುದನ್ನು ಜಿಲ್ಲೆಯ ಜನತೆ ನೋಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸುಳ್ಳು ಆರೋಪದಡಿ ಬಂಧಿಸಿ ಕಿರುಕುಳ ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಭ್ಯಂತರವಿಲ್ಲ. ನನ್ನ ಧ್ವನಿಯನ್ನು ವಿಧಿವಿಜ್ಞಾನ ಲ್ಯಾಬ್‌ಗೆ ಕಳಹಿಸಿಕೊಡಲಿ. ಕಾಂಗ್ರೆಸ್ ಸರ್ಕಾರ ನನ್ನನ್ನು ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ. ಸ್ಪೀಕರ್ ಅನುಮತಿಯಿಲ್ಲದೇ ಪ್ರಕರಣ ದಾಖ ಲಿಸಿ ನನ್ನನ್ನು ಬಂಧಿಸಿದ್ದು ನಿಯಮ ಗಳಿಗೆ ಮಾಡಿದ ಅವಮಾನ ಎಂದು ಮೇಲ್ಮನೆ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.